ಶಿವಮೊಗ್ಗ ಹಾಲು ಒಕ್ಕೂಟದ ನಿದೇರ್ಶಕ ಹನುಮನಹಳ್ಳಿ ಬಸವರಾಜಪ್ಪ ಸೂಚನೆ । ವಿಶೇಷ ತರಬೇತಿ ಕಾರ್ಯಾಗಾರ
ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್)ದಿಂದ ಹೊಸ ಹೊಸ ಅವಿಷ್ಕಾರ ಮತ್ತು ದಿನಕ್ಕೂಂದು ನಿಯಮ ತಿದ್ದುಪಡಿಗಳು ಬರುವುದರಿಂದ, ಗುಣಮಟ್ಟದ ಹಾಲು ನೀಡಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಒಕ್ಕೂಟದ ಎಲ್ಲಾ ನಿಯಮ ಮತ್ತು ವಿಷಯಗಳ ಜ್ಞಾನವನ್ನು ಹೊಂದಬೇಕು ಎಂದು ಶಿಮುಲ್ ಒಕ್ಕೂಟದ ನಿದೇರ್ಶಕ ಹನುಮನಹಳ್ಳಿ ಬಸವರಾಜಪ್ಪ ಹೇಳಿದರು.
ತಾಲೂಕಿನ ಗೋಲ್ಲರಹಳ್ಳಿ ಗ್ರಾಮದ ಹಾಲು ಶಿಥಿಲೀಕರಣ ಘಟಕದಲ್ಲಿ ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ಮತ್ತು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ನಡೆದ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಶಿಮುಲ್ ಒಕ್ಕೂಟದಿಂದ ಹೊಸ ಮಾರ್ಗಸೂಚಿಗಳು ಮತ್ತು ನೀತಿ ನಿಯಮಗಳನ್ನು ತಿಳಿದುಕೊಂಡು ಹಾಲು ಉತ್ಪಾದಕರಿಗೆ ಕಾರ್ಯದರ್ಶಿಗಳು ನಿತ್ಯ ತಿಳಿಸಿ, ಒಕ್ಕೂಟಕ್ಕೆ ಗುಣಮಟ್ಟದ ಹಾಲು ಕೊಡಲು ಸದಾ ಜಾಗೃತರಾಗಬೇಕು. ರೈತರಿಗೆ, ಬಡವರಿಗೆ ಹೈನುಗಾರಿಕೆ ಉಪಕಸುಬಾಗಿದ್ದರೂ ಆರ್ಥಿಕ ಧನಸಹಾಯ ನಿರಂತರ ಸಿಗುವ ಕಸುಬಾಗಿದೆ ಎಂದರು.
ಶಿಮುಲ್ ವ್ಯವಸ್ಥಾಪಕ ನಿದೇರ್ಶಕ ಎಸ್.ಜಿ. ಶೇಖರ್ ಮಾತನಾಡಿ, ಈ ವರ್ಷ ಮಳೆ ಇಲ್ಲದೆ ಬರಗಾಲದ ಛಾಯೆ ಮೂಡಿದ್ದರಿಂದ ರೈತಸಮುದಾಯ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಹೈನುಗಾರಿಕೆಯಿಂದಾಗಿ ರೈತರಿಗೆ ಜೀವದಾನ ದೊರೆತಿದೆ. ರೈತರು ಗುಳೆ ಹೋಗುವುದನ್ನು ತಪ್ಪಿದಂತಾಗಿದೆ ಎಂಬುದು ನಾನು ಎಲ್ಲಾ ಕಡೆ ವಿಕ್ಷಣೆಗೆ ಹೋದಾಗ ರೈತರು ಹೇಳುವ ಮಾತಾಗಿದೆ ಎಂದರು.
ಕಾರ್ಯಾಗಾರದಲ್ಲಿ ಶುದ್ಧ ಗುಣಮಟ್ಟದ ಹಾಲು, ಆಡಳಿತ ಮತ್ತು ಲೆಕ್ಕಪತ್ರ ನಿರ್ವಹಣೆ ಕುರಿತ ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ಎಸ್.ಶೇಖರಪ್ಪ ಹಾಗೂ ನಿವೃತ್ತ ಸಹಾಯಕ ವ್ಯವಸ್ಥಾಪಕ ಎಂ.ಶಿವಾನಂದ ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ವಿಸ್ತರಣಾಧಿಕಾರಿಗಳಾದ ಎ.ರವಿಕುಮಾರ, ಎನ್.ಶ್ವೇತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಗಳಗೌಡ ದಾನಪ್ಪಗೌಡ್ರು, ಜಿಲ್ಲಾ ಸಹಕಾರ ಶಿಕ್ಷಕ ಕೆ.ಎಚ್. ಸಂತೋಷಕುಮಾರ, ವ್ಯವಸ್ಥಾಪಕ ಕೆ.ಎಂ. ಜಗದೀಶ್, ಎಸ್.ಎಲ್. ಮೂರ್ತಿ ಸೇರಿದಂತೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು ಇದ್ದರು.
11ಎಚ್.ಎಲ್.ಐ3ಃ-