ಗದಗ: ಲಿಂಗಾಯತ ಸಮಾಜದ ಶೈಕ್ಷಣಿಕ ಪ್ರಗತಿಗೆ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಅವರ ದೂರದೃಷ್ಟಿ, ತ್ಯಾಗ ಹಾಗೂ ಸೇವಾ ಮನೋಭಾವವೇ ಪ್ರಮುಖ ಪ್ರೇರಣೆಯಾಗಿದೆ ಎಂದು ಹೊಸಳ್ಳಿಯ ಅಭಿನವ ಬೂದಿಶ್ವರ ಸ್ವಾಮಿಗಳು ಹೇಳಿದರು.
ಸಮಸ್ತ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಲಿಂಗರಾಜ ದೇಸಾಯಿ ನೀಡಿದ ಕೊಡುಗೆ ಅಪಾರ. ಶಿಕ್ಷಣ, ಸಮಾಜಸೇವೆ ಹಾಗೂ ರೈತರ ಹಿತಕ್ಕಾಗಿ ಅವರು ಕೈಗೊಂಡ ಕಾರ್ಯಗಳು ಅವರ ಮಹಾನ್ ತ್ಯಾಗ ಮತ್ತು ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿವೆ ಎಂದರು.
ಸಂಘದ ಕೋಶಾಧ್ಯಕ್ಷ ಎ.ಎಸ್. ಪಾಟೀಲ ಮಾತನಾಡಿ, ಲಿಂಗರಾಜ ದೇಸಾಯಿ ಅವರು ಕಾಶಿಯಲ್ಲಿ ಅಧ್ಯಯನ ಪೀಠ ಸ್ಥಾಪಿಸುವಲ್ಲಿ ವಹಿಸಿದ ಪಾತ್ರ ಹಾಗೂ ಬರಗಾಲದ ಸಂದರ್ಭದಲ್ಲಿ ಕೆರೆ- ಕಟ್ಟೆಗಳನ್ನು ನಿರ್ಮಿಸಿ ರೈತರಿಗೆ ನೆರವಾದ ಸೇವೆಯನ್ನು ವಿವರಿಸಿದರು.ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರು, ಇಬ್ಬರು ಮಾಜಿ ಸೈನಿಕರು, ಶ್ರೇಷ್ಠ ರೈತರು, ಗೌರವ ಡಾಕ್ಟರೇಟ್ ಪದವಿ ಪಡೆದ ಹಾಗೂ ಪರ್ವತಾರೋಹಿಯನ್ನು ಸನ್ಮಾನಿಸಲಾಯಿತು.
ಸಮಾಜದ ಹಿರಿಯರಾದ ಕಲ್ಲನಗೌಡ್ರ, ಈರಪ್ಪಣ್ಣ ಬಿಸನಹಳ್ಳಿ, ವಿ.ಜಿ. ಕನಾಜ, ಸಿ.ಎನ್. ಜನಯಿ, ವಿ.ಕೆ. ಬಳಗೇರ ಸೇರಿದಂತೆ ಗಣ್ಯರು ಇದ್ದರು. ಯಲ್ಲಪ್ಪಗೌಡ ಸಂಕನಗೌಡ ಪ್ರಾರ್ಥಿಸಿದರು. ಪ್ರಶಾಂತ ಕನಾಜ ನಿರೂಪಿಸಿದರು.