ಧಾರವಾಡ: ಸತ್ಯ, ಶುದ್ಧ ಕಾಯಕದ ಮೂಲಕ ಶಿವನಿಂದ ಒಳ್ಳೆಯ ದೃಷ್ಟಿ ವರವಾಗಿ ಪಡೆದವರು ಶಿವದಾಸಿಮಯ್ಯನವರು ಎಂದು ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಪಾದೋದಕ, ಪ್ರಸಾದಗಳಿಗೆ ಹೆಸರಾದವರು ಶಿವಶಿಂಪಿಗರು. ಶಿವಶಿಂಪಿ ಸಮಾಜದ ಜನರಲ್ಲಿ ಇರುವ ಭಯ, ಭಕ್ತಿ, ಶ್ರದ್ಧೆ, ಶಿಸ್ತು ಸಂಘಟನೆ ಅವರನ್ನು ಎತ್ತರದ ಮಟ್ಟಕ್ಕೆ ಒಯ್ಯುತ್ತಿದೆ. ಸಮಾಜವು ಬಡವರನ್ನು ಶ್ರೀಮಂತರು ಧನಸಹಾಯದ ಮೂಲಕ ಎತ್ತಿ ಹಿಡಿಯಬೇಕು. ಕರ್ನಾಟಕ ಶಿವಶಿಂಪಿ ಸೌಹಾರ್ದ ಸಹಕಾರಿ ಸಂಘ ಹಾಗೂ ಶಿಕ್ಷಣ ಸಂಸ್ಥೆಗಳು ನಾಡಿನ ಎಲ್ಲ ಕಡೆಗೂ ಸ್ಥಾಪಿತವಾದಾಗ ಮಾತ್ರ ಸಮಾಜ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸಂಘಟನೆಯು ಪ್ರತಿ ಸಮಾಜಕ್ಕೂ ಬೇಕು.ಇದರಿಂದ ಸಮಾಜದ ಕೆಳವರ್ಗದ ಜನರನ್ನು ಮೇಲೆತ್ತಲು ಸಾಧ್ಯ.ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜ ಬಾಂಧವರಲ್ಲಿ ಪರಸ್ಪರ ಪ್ರೀತಿ, ಸ್ನೇಹ, ಸಂಬಂಧಗಳು ಬೆಸೆಯುತ್ತವೆ ಎಂದ ಅವರು, ಸಮಾಜದ ಸಮುದಾಯ ಭವನದ ನಿವೇಶನದ ಅನ್ವೇಷಣೆಹಾಗೂ ಕಟ್ಟಡ ನಿರ್ಮಾಣಕ್ಕೆ ₹10 ಲಕ್ಷ ಶಾಸಕರ ಅನುದಾನ ನೀಡುವ ಭರವಸೆ ನೀಡಿದರು.ಕರ್ನಾಟಕ ಶಿವಶಿಂಪಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಶಿವಾನಂದ ಶಿವಶಿಂಪಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ನಾಗರಿಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸಾಧಕ ಪ್ರಶಸ್ತಿ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.