ಶಿರಹಟ್ಟಿ: ಭಾರತದಲ್ಲಿ ಅನೇಕ ರಾಜ- ಮಹಾರಾಜರು ಬಂದು ಹೋಗಿದ್ದಾರೆ. ಆದರೆ ಹಿಂದೂ ಸಮಾಜವನ್ನು ಪುನರ್ ಸ್ಥಾಪನೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರನ್ನು ಎಂದಿಗೂ ಮರೆಯಬಾರದು. ಸೂರ್ಯ- ಚಂದ್ರರಿರುವವರೆಗೂ ಅವರ ಸಾಧನೆ ಶಾಶ್ವತ ಎಂದು ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ. ಲಮಾಣಿ ತಿಳಿಸಿದರು.ಗುರುವಾರ ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇತಿಹಾಸ ಕಂಡ ವೀರಾಧಿ ವೀರರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕೂಡ ಪ್ರಮುಖರು. ಶಿವಾಜಿ ಹುಟ್ಟು ಹೋರಾಟಗಾರರಾಗಿದ್ದರು. ಶಿವಾಜಿ ಅವರಿಗಿದ್ದ ನಾಯಕತ್ವ ಗುಣ, ಧೈರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದರು.ಶಿವಾಜಿ ಮರಾಠ ಸಾಮ್ರಾಜ್ಯಕ್ಕಿಂತ ಹಿಂದೂಗಳ ಸಾಮ್ರಾಜ್ಯ ಕಟ್ಟಿದ ಇತಿಹಾಸಕಾರ. ಅವರ ಸಾಹಸಗಾಥೆ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿತ್ತು. ಶಿವಾಜಿ ಮಹಾರಾಜರು ಹೊಂದಿದ್ದ ಹೋರಾಟ ಮನೋಭಾವ, ತೋರಿದ ಧೈರ್ಯ, ಶೌರ್ಯ ಯುವಕರಿಗೆ ಸ್ಫೂರ್ತಿಯಾಗಿದೆ. ಶಿವಾಜಿ ಮಹಾರಾಜರು ದೇಶಭಕ್ತಿಗೆ ಪ್ರತೀಕವಾಗಿದ್ದಾರೆ. ಭಾರತೀಯ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ ಎಂದರು.ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ರಾಷ್ಟ್ರವನ್ನು ಪರಕೀಯರ ಆಡಳಿತದಿಂದ ಮುಕ್ತಗೊಳಿಸಿ ರಕ್ಷಿಸುವಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ಇಂತಹ ಮಹಾನ್ ವ್ಯಕ್ತಿಯು ಯಾವುದೇ ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳ್ಳದೆ ರಾಷ್ಟ್ರನಾಯಕರಾಗಿ ಧರ್ಮ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ತ್ಯಾಗ, ಬಲಿದಾನದ ಪರಿಣಾಮವಾಗಿ ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.