ಮನ್‌ಮುಲ್ ಅಧ್ಯಕ್ಷರಾಗಿ ಶಿವಕುಮಾರ್ ಅಧಿಕಾರ ಸ್ವೀಕಾರ

KannadaprabhaNewsNetwork |  
Published : Jun 10, 2025, 07:08 AM IST
೯ಕೆಎಂಎನ್‌ಡಿ-೧ಮನ್‌ಮುಲ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಯು.ಸಿ.ಶಿವಕುಮಾರ್ ಅವರನ್ನು ನಿರ್ದೇಶಕರು ಅಭಿನಂದಿಸಿದರು. | Kannada Prabha

ಸಾರಾಂಶ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಸೇರಿದ ಕೋಣನಕುಂಟೆಯಲ್ಲಿದ್ದ ಘಟಕವನ್ನು ಮನ್‌ಮುಲ್ ಆವರಣಕ್ಕೆ ಸ್ಥಳಾಂತರ ಮಾಡಿ, ವಿಎಚ್‌ಟಿ ಹಾಲನ್ನು ಇಲ್ಲೇ ಬ್ರಿಕ್ಸ್ ಪ್ಯಾಕೇಜ್ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಒಕ್ಕೂಟಕ್ಕೆ ಸುಮಾರು ೧.೫೦ ಲಕ್ಷ ರು. ಉಳಿತಾಯವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಬೆಣ್ಣೆ ಸಂಗ್ರಹ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ನೂತನ ಅಧ್ಯಕ್ಷ ಯು.ಸಿ. ಶಿವಕುಮಾರ್ (ಶಿವಪ್ಪ) ತಿಳಿಸಿದರು.

ಸೋಮವಾರ ಒಕ್ಕೂಟದ ಆಡಳಿತ ಕಚೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ೫ ರಿಂದ ೧೦ ಕೋಟಿ ರು. ವೆಚ್ಚದಲ್ಲಿ ಮನ್‌ಮುಲ್ ಆವರಣದಲ್ಲಿ ಬೆಣ್ಣೆ ಸಂಗ್ರಹ ಘಟಕ ಸ್ಥಾಪಿಸಲು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು ಕಾರ್ಯೋನ್ಮುಖರಾಗುವುದಾಗಿ ತಿಳಿಸಿದರು.

ನಮ್ಮಲ್ಲಿ ಉತ್ಪಾದನೆಯಾಗುವ ಬೆಣ್ಣೆಯನ್ನು ದಾಸ್ತಾನು ಮಾಡಲು ಶೈತ್ಯಾಗಾರ ಇಲ್ಲದ ಕಾರಣ ನಾವು ಬೇರೆ ಒಕ್ಕೂಟದಲ್ಲಿ ದಾಸ್ತಾನು ಮಾಡುವ ಸ್ಥಿತಿ ಇತ್ತು. ಇದರಿಂದ ಒಕ್ಕೂಟಕ್ಕೆ ಆರ್ಥಿಕ ಹೊರೆಯಾಗಿತ್ತು. ನಮ್ಮದೇ ಘಟಕ ಸ್ಥಾಪಿಸಿ ಸಂಗ್ರಹಿಸಿದಲ್ಲಿ ಖರ್ಚು ಕಡಿಮೆಯಾಗಲಿದೆ ಎಂದರು.

ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಶ್ರೀರಂಗಪಟ್ಟಣದ ಬಳಿ ಜಮೀನು ಖರೀದಿಸಲಾಗಿದ್ದು, ಅಲ್ಲಿ ಗ್ರಾಮೀಣ ರೈತ ಮಕ್ಕಳಿಗೆ ಅನುಕೂಲವಾಗುವಂತೆ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿ ಕಡಿಮೆ ದರದಲ್ಲಿ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಜಿಲ್ಲಾ ಹಾಲು ಒಕ್ಕೂಟಕ್ಕೆ ಸೇರಿದ ಕೋಣನಕುಂಟೆಯಲ್ಲಿದ್ದ ಘಟಕವನ್ನು ಮನ್‌ಮುಲ್ ಆವರಣಕ್ಕೆ ಸ್ಥಳಾಂತರ ಮಾಡಿ, ವಿಎಚ್‌ಟಿ ಹಾಲನ್ನು ಇಲ್ಲೇ ಬ್ರಿಕ್ಸ್ ಪ್ಯಾಕೇಜ್ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಒಕ್ಕೂಟಕ್ಕೆ ಸುಮಾರು ೧.೫೦ ಲಕ್ಷ ರು. ಉಳಿತಾಯವಾಗಲಿದೆ ಎಂದರು.

ಬೆಂಗಳೂರಿನ ಕೆಎಂಎಫ್ ಗೋದಾಮಿನಿಂದ ಹಾಲಿನ ಉತ್ಪನ್ನಗಳನ್ನು ಗೆಜ್ಜಲಗೆರೆಯ ಮನ್‌ಮುಲ್ ಆವರಣಕ್ಕೆ ತಂದು ಅದನ್ನು ಮತ್ತೆ ಬೆಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಿತ್ತು. ಹಾಲಿನ ಉತ್ಪನ್ನಗಳನ್ನು ದಾಸ್ತಾನು ಮಾಡಲು ಕೋಣನಕುಂಟೆ ಘಟಕ ಸ್ಥಳವನ್ನು ಗೋದಾಮು ಮಾಡಿಕೊಂಡು ಅಲ್ಲಿಂದಲೇ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಒಕ್ಕೂಟಕ್ಕೆ ಉಂಟಾಗುವ ಸಾಗಾಣಿಕೆ ವೆಚ್ಚವನ್ನು ತಡೆಯಬಹುದಾಗಿದೆ ಎಂದು ವಿವರಿಸಿದರು.

ಸದ್ಯ ಒಕ್ಕೂಟದಲ್ಲಿ ಪ್ರತಿನಿತ್ಯ ೧೩ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ೫ ರಿಂದ ೬ ಲಕ್ಷ ಲೀಟರ್ ಹಾಲು ಮಾತ್ರ ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಹಾಲಿನ ಪುಡಿ ಉತ್ಪಾದನೆಗೆ ಬಳಸುತ್ತಿದ್ದರೂ, ಹಾಲಿನ ಪುಡಿ ಸಮರ್ಪಕವಾಗಿ ಮಾರಾಟವಾಗುತ್ತಿಲ್ಲ. ಇದರಿಂದ ಒಕ್ಕೂಟ ನಷ್ಟ ಅನುಭವಿಸುವಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ಅಲ್ಲಿನ ಆಡಳಿತ ಮಂಡಳಿಗಳು ಮುಂದೆ ಬಂದು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕೇವಲ ಹಾಲು ಸಂಗ್ರಹಕ್ಕೆ ಮಾತ್ರ ಸೀಮಿತವಾಗುವುದನ್ನು ಬಿಡಬೇಕು ಎಂದರು.

ಈಗಾಗಲೇ ಕೀಲಾರ, ಚಂದಗಾಲು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವ ಪಾರ್ಲರನ್ನು ತೆರೆದಿದ್ದಾರೆ. ಇದರಿಂದ ಸ್ಥಳೀಯ ಜನರಿಗೂ ನಂದಿನಿ ಉತ್ಪನ್ನಗಳು ತಮ್ಮೂರಿನಲ್ಲೇ ಲಭ್ಯವಾಗುತ್ತದೆ. ದೂರದ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಬರುವುದು ತಪ್ಪುತ್ತದೆ. ನಾನು ಈ ಯೋಜನೆಗೆ ಉತ್ತೇಜನ ನೀಡುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉಪಾಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕರಾದ ಲಕ್ಷ್ಮೀನಾರಾಯಣ, ಬಿ. ಬೋರೇಗೌಡ, ಟಿ.ಶಿವಕುಮಾರ, ಎಸ್.ಪಿ. ಸ್ವಾಮಿ, ವಿಶ್ವಾಸ್, ಹರೀಶ್‌ಬಾಬು, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್, ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಸಿ.ಮಂಜೇಶ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''