(ಗಜಪಡೆ ತಾಲೀಮು ಶುರು) - - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಾಡಹಬ್ಬ ದಸರಾ ಹಬ್ಬ ಹಿನ್ನೆಲೆ ಅಂಬಾರಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಈಗಾಗಲೇ ತಾಲೀಮು ಶುರುವಾಗಿದ್ದು, ಈ ಬಾರಿ ಸಾಗರ, ನೇತ್ರಾವತಿ ಆನೆಗಳ ಜೊತೆ ಭಾನುಮತಿ ಬದಲಾಗಿ ಹೇಮಾವತಿ ಆನೆ ಹೆಜ್ಜೆ ಹಾಕಲಿದೆ. ದಸರಾ ಆಚರಣೆಯಲ್ಲಿ ಮೈಸೂರು ಬಿಟ್ಟರೆ ಶಿವಮೊಗ್ಗದಲ್ಲೇ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ಆದರೆ, ಪ್ರತಿ ವರ್ಷ ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗುವ ಗಜಪಡೆಗೆ ಹಬ್ಬಕ್ಕೆ ಎರಡ್ಮೂರು ದಿನ ಬಾಕಿ ಇರುವಾಗ ತಾಲೀಮು ಶುರು ಮಾಡುತ್ತಿದ್ದರು. ಆದರೆ, ಈ ಬಾರಿ ದಸರಾಕ್ಕೆ ಇನ್ನು 12 ದಿನಗಳು ಬಾಕಿ ಇರುವಾಗಲೇ ತಾಲೀಮು ಶುರು ಮಾಡಲಾಗಿದೆ. ಶಿವಮೊಗ್ಗದ ತಾಲೂಕಿನ ಸಕ್ರೆಬೈಲ್ ಆನೆ ಬಿಡಾರದಲ್ಲೇ ಬುಧವಾರದಿಂದ ಸಾಗರ, ನೇತ್ರಾವತಿ, ಹೇಮಾವತಿ ಆನೆಗಗಳಿಗೆ ತಾಲೀಮು ಶುರುವಾಗಿದ್ದು, ಸಕ್ರೆಬೈಲು ಮುಖ್ಯ ರಸ್ತೆಗಳಲ್ಲಿ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ. ಶಿವಮೊಗ್ಗದಲ್ಲಿ ಅಂಬಾರಿ ಹೊರುವ ಪರಂಪರೆ ಶುರುವಾದಾಗಿಂದ ಶಾಂತ ಸ್ವಭಾವದ ಸಾಗರ ಆನೆಯೇ ಈ ಕೆಲಸ ಮಾಡುತ್ತಿದೆ. ಈತನೊಂದಿಗೆ ಸಕ್ರೆಬೈಲು ಆನೆ ಬಿಡಾರದ ಹಿರಿಯಾನೆ ನೇತ್ರಾವತಿ ಮತ್ತು ಭಾನುಮತಿ ಸಾಥ್ ನೀಡುತ್ತಿದ್ದವು. ಆದರೆ, ಈ ವರ್ಷ ಭಾನುಮತಿ ಬದಲು ''''''''ಹೇಮಾವತಿ'''''''' ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ಭಾನುಮತಿ ಗರ್ಭಿಣಿ ಆಗಿರುವುದರಿಂದ ಈ ಬಾರಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ತಾಯಿ ಚಾಮುಂಡೇಶ್ವರಿ ವಿಗ್ರಹ ಹೊತ್ತ ದಸರಾ ಅಂಬಾರಿ ನೋಡುವುದೇ ಎಲ್ಲರಿಗೂ ಕುತೂಹಲ. ಅದೂ ರಾಜಬೀದಿಯಲ್ಲಿ ಗಜಪಡೆ ಮೆರವಣಿಗೆ ವೀಕ್ಷಿಸುವುದಕ್ಕಾಗಿಯೇ ಸಾವಿರಾರು ಜನ ಶಿವಮೊಗ್ಗಕ್ಕೆ ಆಗಮಿಸುತ್ತಾರೆ. - - - -11ಎಸ್ಎಂಜಿಕೆಪಿ05: ಶಿವಮೊಗ್ಗ ದಸರಾ ಅಂಬಾರಿ ಉತ್ಸವ ಮೆರವಣಿಗೆಯಲ್ಲಿ ಸಾಗುವ ಗಜಪಡೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಬುಧವಾರ ತಾಲೀಮು ನೀಡಲಾಯಿತು.