shivanubhava, gurupoornima celebration in molakaalmuru
-ಗುರುಪೂರ್ಣಿಮೆ ಪ್ರಯುಕ್ತ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಶ್ರೀಬಸವಲಿಂಗ ಸ್ವಾಮೀಜಿ
------
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು.
ಅರಮುನಿದರೂ ಗುರುಕಾಯ ಬಲ್ಲ ಎಂಬ ಶರಣರ ಸಂದೇಶದಂತೆ ಬದುಕಿಗೆ ಸಂಸ್ಕಾರ ನೀಡಿದ ಗುರುವನ್ನು ನಿರಂತರವಾಗಿ ಸ್ಮರಣೆ ಮಾಡುತ್ತಾ ಜೀವನ ಸಾಗಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಎಂದು ಸಿದ್ದಯ್ಯನ ಕೋಟೆಯ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಸಿದ್ದಯ್ಯನ ಕೋಟೆಯ ಚಿತ್ತರಗಿ ಶ್ರೀವಿಜಯ ಮಹಾಂತೇಶ್ವರ ಶಾಖ ಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರುವಾಣಿಯನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಂಡರೆ ಸುಸಂಸ್ಕೃತ ವ್ಯಕ್ತಿಗಳಾಗಿ ಬದುಕಲು ಸಾಧ್ಯವಿದೆ.
ಮುಂದೆ ಗುರಿ ಹಿಂದೆ ಗುರುವಿನ ಆಶೀರ್ವಾದವನ್ನು ಪಡೆದು ಹೇಳಿದ ಪಾಠ ಪ್ರವಚನಗಳನ್ನು ಸದಾ ಮನನ ಮಾಡುತ್ತಾ ಬಾಳಿದರೆ ವಿದ್ಯಾರ್ಥಿಗಳು ಯಶಸ್ಸು ಗಳಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ್ ಮಾತನಾಡಿ, ಗಡಿ ಭಾಗದಲ್ಲಿ ಕಾಯಕಯೋಗಿ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಶ್ರೀ ಮಠದಲ್ಲಿ ಭಕ್ತರ ಸಹಕಾರದೊಂದಿಗೆ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಪ್ರಸಾದ ವಸತಿ ನೀಡಿದ್ದಾರೆ. ಬಸವಾದಿ ಶಿವ ಶರಣರ ಸಂದೇಶದಂತೆ ನಮ್ಮ ಬದುಕಿಗೆ ಶರಣರ ಚಿಂತನ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಸದಾ ಅಭ್ಯಾಸದತ್ತ ಮುಖ ಮಾಡಬೇಕು. ಗುರುಗಳು ಹೇಳಿದ ಪಾಠಗಳನ್ನು ಆಲಿಸುತ್ತಾ ಬಾಳಿದರೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ನಾಗರಾಜ.ಬವರಾಜ. ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.