ಶಿವಯೋಗ ಎಂದರೆ ಸೇವೆ, ಸಮತೆ ಮತ್ತು ಆತ್ಮಸಾಕ್ಷಾತ್ಕಾರದ ಪಥ

KannadaprabhaNewsNetwork |  
Published : Jul 16, 2026, 01:30 AM IST
ಪೋಟೋ15ಎಚ್‌ಎಸ್‌ಡಿ3: ನಗರದ ಶ್ರೀ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ 191ನೇ ಜಯಂತ್ಯುತ್ಸವದಲ್ಲಿ ಶ್ರೀ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಶ್ರೀ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ 191ನೇ ಜಯಂತ್ಯುತ್ಸವದಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶಿವಯೋಗ ಎಂದರೆ ಕೇವಲ ವೈಯಕ್ತಿಕ ಸಾಧನೆಯಲ್ಲ, ಅದು ಸೇವೆ, ಸಮತೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಸಮಾಜವನ್ನು ಕಟ್ಟುವ ಜೀವನಪದ್ಧತಿ ಎಂದು ಶ್ರೀ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.ನಗರದ ಶ್ರೀ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ 191ನೇ ಜಯಂತ್ಯುತ್ಸವದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಅಥಣಿ ಮುರುಘೇಂದ್ರ ಶಿವಯೋಗಿಗಳ ಬದುಕು ಇಂದಿನ ಸಮಾಜಕ್ಕೆ ಆದರ್ಶವಾಗಿದ್ದು, ಅವರ ಜೀವನವನ್ನು ಅರ್ಥ ಮಾಡಿಕೊಂಡರೆ ಸಮಾಜದಲ್ಲಿ ಭಿನ್ನತೆ, ಜಾತಿ-ಧರ್ಮದ ಗೋಡೆಗಳಿಗೆ ಅವಕಾಶವೇ ಇರುವುದಿಲ್ಲ . ಬಸವಣ್ಣನವರ ತತ್ವಗಳನ್ನು ಅಕ್ಷರಶಃ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಶಿವಯೋಗಿಗಳು ಸೇವೆಯನ್ನೇ ಪರಮಧರ್ಮವೆಂದು ಕಂಡಿದ್ದರು. ಕುಷ್ಠರೋಗಿಗಳ ಸೇವೆಯಿಂದ ಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಸ್ಪಂದಿಸುವ ಗುಣ ಅವರ ಬದುಕಿನ ವಿಶೇಷವಾಗಿತ್ತು ಎಂದರು.

ಶಿವಯೋಗಿಗಳ ಜೀವನದಲ್ಲಿ ಮೌನ, ತ್ಯಾಗ ಮತ್ತು ಅನುಷ್ಠಾನಕ್ಕೆ ವಿಶೇಷ ಸ್ಥಾನವಿತ್ತು. ಭಕ್ತರು ತಂದ ಹೊಸ ಬಟ್ಟೆಗಳನ್ನು ತ್ಯಜಿಸಿ ಸರಳ ಜೀವನ ನಡೆಸಿದ ಅವರ ವೈರಾಗ್ಯ ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಸೇವೆ ಮತ್ತು ಶಿವಯೋಗ ಎಂಬ ಎರಡು ತತ್ವಗಳನ್ನು ಜೀವನದ ಗುರಿಯನ್ನಾಗಿ ಮಾಡಿಕೊಂಡಿದ್ದ ಅವರು ಬಸವತತ್ವದ ನೈಜ ಪ್ರತಿನಿಧಿಯಾಗಿದ್ದರು ಎಂದು ಹೇಳಿದರು.

ಹಾನಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಪುಷ್ಪಾ ಶೆಲವಾಡಿಮಠ ಉಪನ್ಯಾಸ ನೀಡಿ ಶಿವಯೋಗವೆಂದರೆ ಅರಿವಿನ ಸಾಧನೆ ಹಾಗೂ ಲಿಂಗಾಂಗ ಸಾಮರಸ್ಯದ ಪರಮಾವಸ್ಥೆ ಎಂದು ವಿವರಿಸಿದರು.

ಅಥಣಿ ಮುರುಘೇಂದ್ರ ಶಿವಯೋಗಿಗಳು ಎರಡು ದಶಕಗಳ ಕಾಲ ಕಠಿಣ ಅನುಷ್ಠಾನದ ಮೂಲಕ ಶಿವಯೋಗ ಸಿದ್ಧಿ ಪಡೆದ ಅಪರೂಪದ ಮಹನೀಯರಾಗಿದ್ದು, ಅವರ ಸಾಧನೆ ಇಂದಿಗೂ ಅನೇಕ ಸಾಧಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು.

ಶಿವಯೋಗ ಕೇವಲ ಅಂತರಂಗ ವಿಕಸನಕ್ಕೆ ಮಾತ್ರ ಸೀಮಿತವಲ್ಲ. ಅದು ಬಹಿರಂಗ ವಿಕಾಸಕ್ಕೂ ಕಾರಣವಾಗುವುದರಿಂದ ಶಿವಯೋಗ ಸಾಧನೆಯಿಂದ ಶರಣರು ಸಿದ್ಧಪುರುಷರಾದರು. ಇಷ್ಟಲಿಂಗದ ಮೂಲಕ ಮಾಡುವ ದೃಷ್ಟಿಯೋಗ ಮಾನವನ ಅಂತರಂಗದ ಆಳದಲ್ಲಿ

ಹುದುಗಿರುವ ಚೈತನ್ಯ, ಅರಿವು ಸಂಪೂರ್ಣ ವಿಕಾಸವಾಗಿ ಸಾಧಕ ಚೈತನ್ಯ ಸ್ವರೂಪಿಯಾಗಿ ದೇವತ್ವದ ಹಾದಿ ತುಳಿಯುತ್ತಾನೆ. ಮಾನವ ದೇವನಾಗುವ ಶಿವಯೋಗ ಸಾಧನೆ ಪ್ರಯೋಗಾತ್ಮಕವಾಗಿ 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆಯುತ್ತಿತ್ತು. ಇದನ್ನು ಜಗತ್ತಿಗೆ ಬೋಧಿಸಿದವರು ಬಸವಣ್ಣ ಎಂದರು.

ಸಮಾರಂಭದಲ್ಲಿ ಶಿರಸಂಗಿ ಮಹಾಲಿಂಗೇಶ್ವರ ಮಠದ ಬಸವಮಹಾಂತ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಡಾ.ಬಸವಚೇತನ ಸ್ವಾಮೀಜಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಎಸ್‌ಜೆಎಂ ವಿದ್ಯಾಪೀಠದ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಭಕ್ತರು ಭಾಗವಹಿಸಿದ್ದರು. ಜಮುರಾ ಕಲಾವಿದ ಉಮೇಶ ಪತ್ತಾರ್ ಶಿವಯೋಗಿಗಳ ಕುರಿತು ಗೀತೆ ಹಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯಲ್ಲಿ ಶೇ.98.16ರಷ್ಟು ಎನುಮೆರೇಶನ್ ಫಾರಂ ವಿತರಣೆ
ಬಡವರ ಹೆಸರಿನ ಖಾತೆಯ ಬಹುಕೋಟಿ ಹಗರಣ ತನಿಖೆಗೆ ಆಗ್ರಹ