ಶಿವ ದೇಗುಲಗಳಿಗೆ ವಿಶೇಷ ಅಲಂಕಾರ । ಭಕ್ತರಿಗೆ ಪ್ರಸಾದ ವಿನಿಯೋಗ
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಗರ ಮತ್ತು ಜಿಲ್ಲೆಯ ಎಲ್ಲೆಡೆ ಶಿವನ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಬಂದು ಭಕ್ತರಿಗೆಲ್ಲಾ ಪ್ರಸಾದ ನೀಡಲಾಯಿತು. ಶಾಸಕ ಎಚ್.ಪಿ.ಸ್ವರೂಪ್ ಶಿವನ ದೇವಸ್ಥಾನಕ್ಕೆ ತಮ್ಮ ಪತ್ನಿ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಹಬ್ಬದ ಶುಭಾಶಯ ಕೋರಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿ, ಮಹಾ ಶಿವರಾತ್ರಿ ಹಬ್ಬವನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಮಸ್ಯೆ ಜನತೆಗೆ ಶುಭಾಶಯ ಕೋರುತ್ತ ಸರ್ವರಿಗೂ ಭಗವಂತ ಒಳಿತನ್ನು ಮಾಡಲಿ. ಕುಡಿಯುವ ನೀರಿಗೆ ಮತ್ತು ರೈತರಿಗೆ ನೀರಿನ ಸಮಸ್ಯೆ ಇದ್ದು, ದೇವರು ಅದನ್ನು ಪರಿಹರಿಸಲಿ ಎಂದು ಹೇಳಿದರು.ನಗರದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಗಿನಿಂದಲೇ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ನಗರದ ಕಸ್ತೂರಿಬಾ ರಸ್ತೆ, ದೊಡ್ಡಬಸ್ತಿ ಬಳಿ ಇರುವ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಬೆಳಿಗಿನಿಂದಲೇ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ದರ್ಶನ ಮಾಡಲು ಅವಕಾಶ ನೀಡಲಾಯಿತು. ಶ್ರೀ ಧರ್ಮಸ್ಥಳ ಆಯುರ್ವೇದಿಕ್ ಕಾಲೇಜು ಆವರಣದಲ್ಲಿರುವ ಪಾತಾಳೇಶ್ವರ ದೇವಸ್ಥಾನ, ಶ್ರೀ ಬಸವೇಶ್ವರ ದೇವಾಲಯ ಸೇರಿದಂತೆ ವಿವಿಧ ಭಾಗಗಳಲ್ಲಿರುವ ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಅಲಂಕಾರ ನೆರವೇರಿಸಿ ಪೂಜೆ ಮಾಡಲಾಯಿತು.
ಹಾಸನದ ನೂತನ ತಹಸೀಲ್ದಾರ್ ಕೂಡ ವಿವಿಧ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಶಿವರಾತ್ರಿ ಹಬ್ಬದ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ಭಜನೆ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶುಕ್ರವಾರ ಸಂಜೆ ಏರ್ಪಡಿಸಿದ್ದರು. ದೇವಾಲಯದ ಆವರಣದಲ್ಲಿ ಸಮಿತಿಯಿಂದ ಪುಸ್ತಕಗಳ ಮಳಿಗೆಯನ್ನು ಕೂಡ ಹಾಕಲಾಗಿತ್ತು.
ನಗರಸಭೆ ಸದಸ್ಯ ವಾಸುದೇವ್, ರಂಗಸ್ವಾಮಿ, ರಘು ಹೊಂಗೆರೆ, ನಾಗರಾಜು ಇದ್ದರು.ಹಾಸನ ನಗರದ ಉದಯಗಿರಿ ಬಡಾವಣೆಯಲ್ಲಿರುವ ಈಶ್ವರ ದೇವಾಲಯಕ್ಕೆ ಶಾಸಕ ಸ್ವರೂಪ್ ಭೇಟಿ ನೀಡಿ ದರ್ಶನ ಪಡೆದರು.