ಸದೃಢ ಯುವ ಪೀಳಿಗೆ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ

KannadaprabhaNewsNetwork |  
Published : Mar 09, 2024, 01:32 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಸದೃಢ ಯುವ ಪೀಳಿಗೆ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಯಾವುದೇ ಕೈಗಾರಿಕೆ, ನೀರಾವರಿ ಸೌಲಭ್ಯಗಳಿಲ್ಲದ ಬರದ ನಾಡು ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು.

ಚಿತ್ರದುರ್ಗ: ಸದೃಢ ಯುವ ಪೀಳಿಗೆ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಯಾವುದೇ ಕೈಗಾರಿಕೆ, ನೀರಾವರಿ ಸೌಲಭ್ಯಗಳಿಲ್ಲದ ಬರದ ನಾಡು ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಡಿಡಿಪಿಐ ರವಿಶಂಕರರೆಡ್ಡಿ ಶಿಕ್ಷಕರಿಗೆ ಕರೆ ನೀಡಿದರು.

ಇದೇ ತಿಂಗಳು ಕರ್ತವ್ಯದಿಂದ ವಯೋ ನಿವೃತ್ತಿಯಾಗುತ್ತಿರುವ ಹಿನ್ನಲೆ ಕರ್ನಾಟಕ ರಾಜ್ಯ ಉರ್ದು ಟೀಚರ್ಸ್ ಅಸೋಸಿಯೇಷನ್‍ನಿಂದ ಬಡಾ ಮಕಾನ್‍ನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರ ಸಂಘದ ಹೋರಾಟಕ್ಕೆ ಅಗಾಧವಾದ ಶಕ್ತಿಯಿದೆ. ಶಿಕ್ಷಕರ ದೊಡ್ಡ ಪಡೆಕಟ್ಟಿಕೊಂಡು ಜಿಲ್ಲೆಯಲ್ಲಿ ಶೈಕ್ಷಣಿಕ ಮುನ್ನಡೆ ಸಾಧಿಸಿದ್ದೇನೆ. ನನ್ನ ಕರ್ಮಭೂಮಿ, ಜನ್ಮಭೂಮಿ ಚಿತ್ರದುರ್ಗವನ್ನು ಎಂದಿಗೂ ಮರೆಯುವುದಿಲ್ಲ. ಸರ್ಕಾರಿ ನೌಕರಿ ಎಂದರೆ ನಿವೃತ್ತಿಯಾಗಲೇಬೇಕು. ಹಾಗಂತ ಮನಸ್ಸಿಗೆ ಬೇಸರಪಟ್ಟುಕೊಳ್ಳುವುದು ಸರಿಯಲ್ಲ. ಶಿಕ್ಷಕರುಗಳ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಅನುಭವದ ಆಧಾರದ ಮೇಲೆ ಆಡಳಿತ ನಡೆಸಿದ್ದೇನೆ. ದುಃಖ ದುಮ್ಮಾನಗಳನ್ನು ಹೊತ್ತು ಬಂದವರಿಗೆ ಸ್ಪಂದಿಸಿದ್ದೇನೆಂಬ ಆತ್ಮತೃಪ್ತಿಯಿದೆ. ನಿವೃತ್ತಿಯ ನಂತರವೂ ಚಟುವಟಿಕೆಯಿಂದ ಇರುತ್ತೇನೆಂದು ಹೇಳಿದರು.

ಶಿಕ್ಷಣ ಇಲಾಖೆ ದೊಡ್ಡದು. ಜೀವನದಲ್ಲಿ ಪಶ್ಚಾತಾಪ ಪಟ್ಟುಕೊಳ್ಳುವಂತ ಕೆಲಸ ಯಾರು ಮಾಡಬಾರದು. ಸಕಾರಾತ್ಮಕ ಚಿಂತನೆಯಿದ್ದರೆ ಜೀವನದಲ್ಲಿ ಯಶಸ್ಸು ಕಾಣಬಹುದು. ಅಬ್ದುಲ್ ಕಲಾಂರಂತ ವ್ಯಕ್ತಿಗಳನ್ನು ಸೃಷ್ಟಿಸುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ. ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ರೂಢಿಸಿ ಎಂದು ಕಿವಿಮಾತು ಹೇಳಿದರು.

ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಸ್ನೇಹಜೀವಿ, ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ ಅವರಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವ ಗುಣವಿರುವುದರಿಂದ ಎಲ್ಲರ ಮನಸ್ಸು ಮುಟ್ಟಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡಿದ್ದಾರೆ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಸಿದ್ದಪಡಿಸುವ ಕೆಲಸ ಶಿಕ್ಷಕರುಗಳಿಂದ ಮಾತ್ರ ಸಾಧ್ಯ ಎಂದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಂತೇಶ್ ಮಾತನಾಡಿ ಎಸ್ಎಸ್ಎಲ್.ಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಒಂದನೆ ಸ್ಥಾನಕ್ಕೆ ತರುವಲ್ಲಿ ಶ್ರಮಿಸಿ ರಾಜ್ಯದಲ್ಲಿಯೇ ಜಿಲ್ಲೆಯ ಹೆಸರನ್ನು ಮೊಳಗಿಸಿರುವ ಡಿಡಿಪಿಐ ಕೆ.ರವಿಶಂಕರ್‍ರೆಡ್ಡಿ ಶಿಕ್ಷಕರುಗಳಲ್ಲಿ ಶಿಕ್ಷಕರಾಗಿ ಮಕ್ಕಳಲ್ಲಿ ಮಕ್ಕಳಾಗಿ ಬೆರೆತಿದ್ದಾರೆ. ಶಿಕ್ಷಕರುಗಳ ಸಂಘಟನೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಪದವೀಧರ ಶಿಕ್ಷಕರುಗಳಿಗೆ ಬಡ್ತಿ, ಎನ್ ಪಿಎಸ್, ಸಹ ಶಿಕ್ಷಕರುಗಳಿಂದ ಮುಖ್ಯ ಶಿಕ್ಷಕರಿಗೆ ಬಡ್ತಿ, ಏಳನೆ ವೇತನ ಆಯೋಗ, ಉರ್ದು ಶಾಲೆಗಳಲ್ಲಿನ ಸಮಸ್ಯೆ ಇವುಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ಹೋರಾಟ ನಿರಂತರವಾಗಿರುತ್ತದೆ. ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಶಿಕ್ಷಕರುಗಳು ಒತ್ತು ಕೊಡಬೇಕೆಂದು ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಕುಮಾರ್, ಡಿವೈಪಿಸಿ ವೆಂಕಟೇಶಪ್ಪ, ಕೆಂಚಪ್ಪ, ಇಸಿಓ ಸಮೀರ ಮಾತನಾಡಿದರು.

ತಾಜಿರ್‌ ಭಾಷ, ಪರ್ವಿನ್‍ತಾಜ್, ಎಂ.ಎಸ್.ಲತ, ಉಮರ್ ಭಾಷ, ಕರ್ನಾಟಕ ರಾಜ್ಯ ಉರ್ದು ಟೀಚರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ