ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿದ ಬಹುಮುಖಿ ಚಿಂತಕ
ನಮ್ಮ ನಾಡಿನಲ್ಲಿ ಭ್ರಷ್ಟರು, ನೀಚರು, ಕಾಮುಕರನ್ನು ವಿಜೃಂಭಿಸುವ ಕೆಲಸವಾಗುತ್ತಿದೆ. ಅದನ್ನು ಬಿಟ್ಟು, ಮಕ್ಕಳಿಗೆ ಬದುಕಲು ಒಂದು ಮಾದರಿ ವ್ಯಕ್ತಿಯನ್ನು ತೋರಿಸಬೇಕಾಗಿದೆ. ಅಂತಹ ಮಾದರಿ ವ್ಯಕ್ತಿ ವಿ.ಸೀ. ವಿದ್ಯಾರ್ಥಿಗಳು ಒಂದು ವ್ಯಕ್ತಿತ್ವದ ಬಗ್ಗೆ ತಿಳಿಯಲು ವಿಚಾರಸಂಕಿರಣಗಳು ಸಹಕಾರಿ ಎಂದು ಬಹುಮುಖಿ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಸನ್ ಸೊಸೈಟಿಯ ಎಸ್ಡಿಎಂ ಕಾಲೇಜಿನ ಆರ್.ಎಸ್. ಹೆಗಡೆ ಸಭಾಭವನದಲ್ಲಿ ನಡೆಯುತ್ತಿರುವ ಜೀವ ಕಾರುಣ್ಯ ಪರಂಪರೆ ಮತ್ತು ವಿ.ಸೀತಾರಾಮಯ್ಯ ಎಂಬ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ವಾಣಿಜ್ಯ ಕೇಂದ್ರದ ಉದ್ಯಮವಾಗಿ ಬೆಳೆಯುತ್ತಿದೆ. ಈಗಿನ ಜನಕ್ಕೆ ಬೆರಳ ತುದಿಗೆ ಎಲ್ಲವೂ ಸಿಗುತ್ತದೆ ಎಂಬ ಅಹಂಕಾರ. ಮಾನವೀಯತೆ ಜೊತೆ ಶಿಕ್ಷಣ ಬೆಳೆಯಬೇಕು. ಅಲ್ಲದೆ ಓದುವ ಹವ್ಯಾಸ ಭಾರತದಲ್ಲಿ ಕಡಿಮೆ ಆಗುತ್ತಿದೆ. ಪರಂಪರೆಯ ಜೊತೆ ನಮ್ಮ ಸಂಬಂಧವನ್ನು ಸೃಷ್ಟಿಸಿಕೊಳ್ಳುವ ಕೆಲಸವಾಗಬೇಕಿದೆ. ಹಿರಿಯರು ಉತ್ಸಾಹಿಗಳಾಗಿರಬೇಕು. ಕಿರಿಯರು ವಿವೇಕಿಗಳಾಗಿರಬೇಕು. ನಾವು ಸ್ವಾಯತ್ತತೆ ಕಾಪಾಡಿಕೊಳ್ಳಬೇಕು. ಯಾರಿಗೂ ಅಧೀನರಾಗಬಾರದು. ಮೊದಲೆಲ್ಲಾ ರಾಜಕಾರಣಿಗಳು ಕವಿಗಳ, ಸಾಹಿತಿಗಳ ಮನೆಗೆ ಹೋಗುತ್ತಿದ್ದರು. ಆದರೆ ಈಗ ಕವಿಗಳು, ಸಾಹಿತಿಗಳು ರಾಜಕಾರಣಿಗಳ ಮನೆಯನ್ನು ಸುತ್ತುವಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ವಿಶ್ರಾಂತ ಅಭಿಯಂತರ ನರಸಿಂಹ ಪಂಡಿತ್ ಮಾತನಾಡಿ, ಜವಾಬ್ಧಾರಿಯ ತುಡಿತ ವಿದ್ಯಾರ್ಥಿಗಳಲ್ಲಿರಬೇಕು. ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೋಗಿ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.ಸಾಕ್ಷಿ ನುಡಿಯನ್ನಾಡಿದ ಎಂಪಿಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಶಿವಾನಿ ಮಾತನಾಡಿ ನಮ್ಮ ಕಾಲೇಜಿನ ಗ್ರಂಥಾಲಯಕ್ಕೆ ವಿ.ಸೀತಾರಾಮಯ್ಯನವರ ಹೆಸರನ್ನು ಇಟ್ಟಿರುವುದು ಖುಷಿಯ ವಿಚಾರ. ವಿ.ಸೀತಾರಾಮಯ್ಯನವರ ನೆನಪು ಸಂಸ್ಥೆಗೆ ಸದಾ ಇರುತ್ತದೆ. ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಓದು ಅನಿವಾರ್ಯ. ಓದುವ ಹವ್ಯಾಸ ಬೆಳೆಸಿಕೊಂಡರೆ ಬರೆಯುವವರು ಉಳಿಯುತ್ತಾರೆ. ಅಲ್ಲದೆ ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಇದಕ್ಕೂ ಪೂರ್ವದಲ್ಲಿ ಕಾಲೇಜಿನ ಗ್ರಂಥಾಲಯಕ್ಕೆ ವಿ.ಸೀತಾರಾಮಯ್ಯನವರ ಹೆಸರನ್ನು ಇಡಲಾಯಿತು. ಈ ವಿಚಾರಸಂಕಿರಣದ ಮೊದಲ ದಿನದ ಕಾರ್ಯಕ್ರಮದಲ್ಲಿ ನಾಗರಾಜ್ ಹೆಗಡೆ ಅಪಗಾಲ್ ಬರೆದ ಗತಿಚಿತ್ರ, ಡಾ.ಸುರೇಶ್ ತಾಂಡೆಲ್ ಬರೆದ ಹೊನ್ನಾವರ : ಒಂದು ಸ್ಥೂಲ ನೋಟ ಹಾಗೂ ಈ ವಿಚಾರ ಸಂಕಿರಣದ ಕುರಿತಾದ ಜೀವ ಕಾರುಣ್ಯ ಪರಂಪರೆ ಮತ್ತು ವಿ.ಸೀ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯ್ತು.
ಸುಮಾ ಭಟ್ ಯಕ್ಷನೃತ್ಯದ ಮೂಲಕ ವಿಚಾರ ಸಂಕಿರಣಕ್ಕೆ ಉಪನ್ಯಾಸಕಿ ಕೆ.ಆರ್. ಶ್ರೀಲತಾ ಪ್ರಾರ್ಥಿಸಿದರು. ಅಭಿನವ ಬೆಂಗಳೂರು ಪ್ರಕಾಶನದ ನ.ರವಿಕುಮಾರ್ ವಿನ್ಯಾಸದ ನುಡಿಗಳನ್ನಾಡಿದರು. ನಾಗರಾಜ್ ಹೆಗಡೆ ಅಪಗಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಶಾಂತ್ ಹೆಗಡೆ ಸ್ವಾಗತಿಸಿದರು. ಬಿಮದು ಅವಧಾನಿ ನಿರೂಪಿಸಿದರು. ಐಕ್ಯುಎಸಿ ಕೋ-ಆರ್ಡಿನೇಟರ್ ಡಾ. ಸುರೇಶ್ ಎಸ್. ವಂದಿಸಿದರು.