ಕನ್ನಡಪ್ರಭ ವಾರ್ತೆ ಮಂಡ್ಯ ಕೋಟ್ಯಂತರ ಹಿಂದೂ ಭಕ್ತರ ಕನಸಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮಚಂದ್ರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್ಲಾದ್ಯಂತ ಹಿಂದೂ ಭಕ್ತರು ಪತ್ರ ಅಭಿಯಾನ ಆರಂಭಿಸಿದ್ದಾರೆ.
ಹಿಂದೂ ಪರಿವಾರದ ಮುಖಂಡ ಸಿ.ಟಿ.ಮಂಜುನಾಥ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಕೋಟ್ಯಂತರ ಭಕ್ತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಕನಸು ನನಸಾಗಿದೆ. ಹೋರಾಟ, ಸಂಘರ್ಷಗಳಿಗೆ ಫಲ ಸಿಕ್ಕಿದೆ. ಪ್ರಧಾನಿ ಮೋದಿ ಅವರ ದಕ್ಷ ನೇತೃತ್ವ ಬದ್ಧತೆ, ಸಕಾಲಿಕ ನಿರ್ಣಯಗಳೇ ಇಂತಹ ಐತಿಹಾಸಿಕ ಯಶಸ್ಸಿಗೆ ಕಾರಣ, ಅದಕ್ಕಾಗಿ ತಮಗೆ ಅಭಿನಂದನೆಗಳನ್ನು ತಿಳಿಸುವುದಾಗಿ ಹೇಳಿದರು.
ಇದೀಗ ಅಭಿಯಾನಕ್ಕೆ ಚಾಲನೆ ನೀಡಿದ್ದು, ಫೆ.೧೪ರವರೆಗೂ ಅಭಿಯಾನ ಮುಂದುವರಿಯುತ್ತದೆ. ಸಮಾಜದ ಗಣ್ಯರು, ಮಠಾಧೀಶರು, ರಾಜ್ಯೋತ್ಸವ, ನಾಡೋಜ ಪುರಸ್ಕೃತರು, ಪದ್ಮಭೂಷಣ, ಪದ್ಮವಿಭೂಷಣ, ಖೇಲ್ರತ್ನ ವಿಜೇತರು ಎಲ್ಲರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಸಾರ್ವಜನಿಕರು ಹಾಗೂ ಗಣ್ಯರು ಸೇರಿದಂತೆ ಸಮಸ್ತ ಭಾರತೀಯರು ಅವರ ಕೈ ಬಲಪಡಿಸಲು ಅವರಿಗೆ ಪ್ರೋತ್ಸಾಹ ನೀಡಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.ಪ್ರಧಾನ ಕಾರ್ಯದರ್ಶಿ ವಿವೇಕ್, ಮುಖಂಡರಾದ ಹೊಸಹಳ್ಳಿ ಶಿವು, ಮಾದರಾಜ ಅರಸ್, ಶಿವಕುಮಾರ್, ಕೆಂಪಯ್ಯ, ಪ್ರಸನ್ನಕುಮಾರ್, ಮಹಾಂತಪ್ಪ, ಅಭಿಷೇಕ್, ನಂದೀಶ್, ಸುರೇಶ ಇತರರು ನೇತೃತ್ವ ವಹಿಸಿದ್ದರು.