ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ರತ್ನ ಡಾ.ಶಿವಕುಮಾರ ಮಹಾ ಸ್ವಾಮೀಜಿ ಈ ದೇಶಕ್ಕೆ ಸಲ್ಲಿಸಿರುವ ಸೇವೆ ಅಜರಾಮರವಾಗಿದ್ದು, ಅವರ ಆದರ್ಶ ಬದುಕು ಎಲ್ಲರಿಗೂ ಬೆಳಕಾಗಿದೆ ಎಂದು ಶಾಸಕ ಪಿ.ರವಿಕುಮಾರ್ಗೌಡ ಗಣಿಗ ಹೇಳಿದರು.ಕಾಯಕಯೋಗಿ ಫೌಂಡೇಶನ್ ನಿರ್ವಹಿಸುತ್ತಿರುವ ನಗರದ ಸ್ವರ್ಣಸಂದ್ರ ಬಡಾವಣೆಯ ಡಾ.ಶಿವಕುಮಾರ ಸ್ವಾಮೀಜಿ ಉದ್ಯಾನವನದಲ್ಲಿ ಧ್ಯಾನ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಧ್ಯಾನ ಮತ್ತು ಯೋಗಾಭ್ಯಾಸಕ್ಕಾಗಿ ನಿರ್ಮಾಣ ಮಾಡಿರುವ ಧ್ಯಾನಕೇಂದ್ರದಲ್ಲಿ ನೆಮ್ಮದಿಯ ವಾತಾವರಣವಿದೆ. ಸ್ವಾಮೀಜಿಯವರ ಪುತ್ಥಳಿಯ ಮುಂದೆ ಧ್ಯಾನ ಮಾಡುವ ಮೂಲಕ ಮನಶಾಂತಿಯನ್ನು ಕಂಡುಕೊಳ್ಳುವಂತೆ ತಿಳಿಸಿದರು.ಕಾಯಕಯೋಗಿ ಫೌಂಡೇಷನ್ ಅತ್ಯುತ್ತಮ ಕೆಲಸ ಮಾಡಿಕೊಂಡು ಬಂದಿದೆ. ಈ ಉದ್ಯಾನವನದಲ್ಲಿ ನಡೆದಾಡುವ ದೇವರೆಂದೇ ಪ್ರಸಿದ್ಧಿಯಾಗಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಜೀವಂತವಾಗಿಡುವ ಕೆಲಸ ಮಾಡಿದ್ದಾರೆ. ಪ್ರತಿ ವರ್ಷವೂ ಇಂತಹ ಸ್ಮರಣೀಯ ಕಾರ್ಯಕ್ರಮಗಳು ನಡೆಯಬೇಕು. ಈ ಸಮಾಜಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರು ಕೊಟ್ಟ ಕೊಡುಗೆ ಆದರ್ಶನೀಯವಾದದ್ದು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗುವಂತಾಗಬೇಕು. ಆ ನಿಟ್ಟಿನಲ್ಲಿ ಈ ಸ್ಥಳ ಧ್ಯಾನ ಕೇಂದ್ರವಾಗಿ ರೂಪುಗೊಂಡಿರುವುದು ಮಾದರಿಯಾಗಿದೆ ಎಂದರು.
ಸ್ವಾಮೀಜಿಯವರ ಪುತ್ಥಳಿಗೆ ರುದ್ರಾಕ್ಷಿ ಹಾರ ಸಮರ್ಪಿಸಿ ಪುಷ್ಪನಮನ ಸಲ್ಲಿಸಿದ ಶಾಸಕರನ್ನು ವಿವಿಧ ಸಂಘಟನೆಯ ಮುಖಂಡರು ಅಭಿನಂದಿಸಿದರು. ಕಾರ್ಯಕ್ರಮದ ನಂತರ ಅನ್ನದಾಸೋಹ ನಡೆಯಿತು. ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು.ಬೇಬಿಬೆಟ್ಟದ ಶ್ರೀ ಶಿವಬಸವಸ್ವಾಮೀಜಿ, ಶಿವಶಂಕರ ಸ್ವಾಮೀಜಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ನಗರಸಭೆ ಸದಸ್ಯರಾದ ಕೆ.ವಿದ್ಯಾ, ಅನಿಲ್ಕುಮಾರ್, ಶ್ರೀಧರ್, ಕಾಂಗ್ರೆಸ್ ಮುಖಂಡ ಶಿವನಂಜು, ಬಿಜೆಪಿ ಮುಖಂಡ ಬೇಕರಿ ಅರವಿಂದ್, ರಾಮಲಿಂಗು, ಕನ್ನಡ ಸೇನೆ ಅಧ್ಯಕ್ಷ ಎಚ್.ಸಿ.ಮಂಜುನಾಥ್, ಸೋಮಣ್ಣ, ಎಂ.ಆರ್.ಮಂಜುನಾಥ್, ಅನುಪಮ, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್, ಮೆಣಸಗೆರೆ ಶಿವಲಿಂಗಪ್ಪ, ಎಚ್.ಎಸ್.ಶಿವರುದ್ರಪ್ಪ, ಜಿ.ಮಹಾಂತಪ್ಪ, ಸೋಮಶೇಖರ್ ತಿಲಕ್ ಮತ್ತಿತರರಿದ್ದರು.