ಭೋವಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ: ಸಿಎಂ ಭರವಸೆ

KannadaprabhaNewsNetwork |  
Published : Jul 21, 2024, 01:28 AM IST

ಸಾರಾಂಶ

ಭೋವಿ ಅಭಿವೃದ್ಧಿ ನಿಗಮವನ್ನು ಭೋವಿ ವಡ್ಡರ ಅಭಿವೃದ್ಧಿ ನಿಗಮವಾಗಿ ಹೆಸರು ಬದಲಾಯಿಸಿ ಹೆಚ್ಚುವರಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗಭೋವಿ ಅಭಿವೃದ್ಧಿ ನಿಗಮವನ್ನು ಭೋವಿ ವಡ್ಡರ ಅಭಿವೃದ್ಧಿ ನಿಗಮವಾಗಿ ಹೆಸರು ಬದಲಾಯಿಸಿ ಹೆಚ್ಚುವರಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಚಿತ್ರದುರ್ಗ ಭೋವಿ ಗುರುಪೀಠದಲ್ಲಿ ಶನಿವಾರ ಆಯೋಜಿಸಿದ್ದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ದೀಕ್ಷಾ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕಾನೂನು ರೀತಿ ಸಾಧ್ಯವಿರುವ ಎಲ್ಲವನ್ನೂ ಮಾಡಿಕೊಡುತ್ತೇನೆ. ಸಾಮಾಜಿಕವಾಗಿ ಹಾಗೂ ಕಾನೂನು ರೀತಿ ಹಿಂದೇಟು ಹಾಕುವುದಿಲ್ಲ. ನನ್ನ ಹೆಸರು ಸಿದ್ದರಾಮ, ಮನೆ ದೇವರು ಸಿದ್ದರಾಮ, ಭೋವಿ ಗುರುಪೀಠದ ಶ್ರೀಗಳ ಹೆಸರು ಇಮ್ಮಡಿ ಸಿದ್ದರಾಮೇಶ್ವರ. ಭೋವಿ ಸಮಾಜಕ್ಕೆ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ನಿಗಮ ಮಾಡಿಕೊಟ್ಟಿದೆ ಎಂದರು.ಭೋವಿ ಸಮಾಜದಲ್ಲಿ ಬಹಳಷ್ಟು ಜನ ಅವಿದ್ಯಾವಂತರಿದ್ದಾರೆ. ಕಸುಬಿನಿಂದ ವಿದ್ಯಾವಂತರಾಗಲು ಸಾಧ್ಯವಾಗಿಲ್ಲ. ದಲಿತ, ಹಿಂದುಳಿದ ವರ್ಗಕ್ಕೆ ಸೇರಿದ ಅನೇಕ ಜನರು ವಿದ್ಯಾವಂತರಾಗಲು ಸಾಧ್ಯವಾಗಿಲ್ಲ. ಶಿಕ್ಷಣ ಮಾತ್ರ ಶೋಷಿತ ಸಮುದಾಯಗಳಲ್ಲಿ ಆರ್ಥಿಕ, ಸಾಮಾಜಿಕ ಶಕ್ತಿ ತುಂಬ ಬಲ್ಲದು. ಇಂದು ಎಲ್ಲರಿಗೂ ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಿಕ್ಷಣ ಮೂಲಭೂತ ಹಕ್ಕಾಗಿದೆ. ಇಷ್ಟಾದರೂ ಸ್ವಾತಂತ್ರ್ಯ ಬಂದು 77 ವರ್ಷಗಳಲ್ಲಿ ಇನ್ನೂ ಕೂಡಾ ಶೇ.75ರಷ್ಟು ಅಷ್ಟೇ ಅಕ್ಷರಸ್ಥರಾಗಲು ಸಾಧ್ಯವಾಗಿದೆ. ಉಳಿದ 25% ಜನ ಅವಿದ್ಯಾವಂತರಾಗಿದ್ದಾರೆ ಎಂದರು.

ಭೋವಿ ಸಮಾಜ ಪರಿಶಿಷ್ಟರಲ್ಲಿ ಬರಲಿದ್ದು 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಶೋಷಿತರಲ್ಲಿ ಸಾಮಾಜಿಕ, ಆರ್ಥಿಕ ಶಕ್ತಿ ತುಂಬಲು ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿಗೆ ತಂದೆವು. ಈ ವರ್ಷ ಈ ಕಾಯ್ದೆಯಡಿ 39,121 ಕೋಟಿ ಯಷ್ಟು ಹಣವನ್ನು ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮೀಸಲು ಇಟ್ಟಿದ್ದೇವೆ. ರಾಜ್ಯದ ಅಭಿವೃದ್ಧಿಗೆ 1,60,000 ಸಾವಿರ ಕೋಟಿ ಖರ್ಚು ಮಾಡಿದರೆ, ಪರಿಶಿಷ್ಟ ಜಾತಿ ವರ್ಗದವರಿಗೆ 24.1% ಮೀಸಲಿಡಬೇಕು ಎಂದರು.ಸಿಎಂಗೆ ಬೆಳ್ಳಿ ಕತ್ತಿ ನೀಡಿ ಗೌರವ: ಚಿತ್ರದುರ್ಗದಲ್ಲಿ ಆಂಜನೇಯ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬೆಳ್ಳಿ ಕತ್ತಿ ನೀಡಿ ಗೌರವಿಸಿದರು.

ಶೋಷಿತ ಸಮಾಜಕ್ಕೆ ಗುರಿ ಹಾಗೂ ಮಾರ್ಗದರ್ಶನ ಬೇಕು. ಗುರಿ ಅಂದರೆ ಬಸವಾದಿ ಶರಣರು,ಅಂಬೇಡ್ಕರ್‌ ಹೇಳಿದಂತೆ ಅದು ಸಮ ಸಮಾಜ ನಿರ್ಮಾಣ ನೆಲೆ. ಅವಕಾಶ ವಂಚಿತ ಜನರು ಮುಖ್ಯವಾಹಿನಿಗೆ ಬರಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ, ಸಮಸಮಾಜ ನಿರ್ಮಾಣ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಂತ್ರಾಲಯದ ಸುಬುದೇಂದ್ರ ತೀರ್ಥ ಸ್ವಾಮೀಜಿ, ಸಚಿವರಾದ ಶಿವರಾಜ ತಂಗಡಗಿ, ಡಿ.ಸುಧಾಕರ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತಿತ್ತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ