ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರದ ಅನುದಾನ ನೀಡುವ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ನಗರದ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ಬುಧವಾರ ಬಿಜೆಪಿ, ಜೆಡಿಎಸ್ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯಕ್ಕೆ ನೀಡಬೇಕಾದ ತೆರಿಗೆ ಅನ್ಯಾಯ, ಅನುದಾನ ಕಡಿತ ಕುರಿತು ಚರ್ಚಿಸಬೇಕಿದೆ. ಅನುದಾನ ನೀಡುವ ವಿಷಯದಲ್ಲಿ ಕೇಂದ್ರ ಮೌನವಹಿಸಿದೆ. ಬಹಿರಂಗ ಚರ್ಚೆಗೆ ಬಂದರೆ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಗೊತ್ತಾಗಲಿದೆ ಸವಾಲು ಹಾಕಿದರು.
ದೇವರ ಮೇಲೆ ನಂಬಿಕೆ ಇದ್ದರೆ ಪ್ರಮಾಣ ಮಾಡಲಿ. ನನಗೆ ಆಣೆ ಮೇಲೆ ನಂಬಿಕೆ ಇಲ್ಲದಿದ್ದರೂ ಸತ್ಯ ಹೇಳುತ್ತಿದ್ದೇನೆ. ಗ್ಯಾರಂಟಿ ಯೋಜನೆಗೆ ಕೇಂದ್ರದಿಂದ ಒಂದೇ ಒಂದು ಪೈಸೆ ಕೇಳಿಲ್ಲ.
ನಮ್ಮ ಯೋಜನೆಗಳಿಗೆ 52,900 ಕೋಟಿ ರು. ತೆಗೆದಿಡಲಾಗಿದೆ. ನಾವು ಗ್ಯಾರಂಟಿಗೆ ಹಣ ಮೀಸಲಿಟ್ಟು ಜಾರಿಗೊಳಿಸಿರುವ ಕಾರಣ ಅವರನ್ನು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕೃಷ್ಣ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಕೊಡುತ್ತೇನೆ ಅಂತ ಹೇಳಿ ಒಂದು ರೂಪಾಯಿ ನೀಡಿಲ್ಲ. ಬರಗಾಲಕ್ಕೆ ಹಣ ಕೇಳಿ ಐದು ತಿಂಗಳಾದರೂ ಪರಿಹಾರದ ಮೊತ್ತ ನೀಡಿಲ್ಲ.
ಎನ್.ಡಿ.ಆರ್.ಎಫ್ ನಿಂದ 18,171 ಕೋಟಿ ರು. ಬಿಡುಗಡೆಗೆ ಮೂರು ಬಾರಿ ಮನವಿ ಮಾಡಿದರೂ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕವನ್ನು ಮಲತಾಯಿ ಧೋರಣೆಯಿಂದ ನೋಡಲಾಗುತ್ತಿದೆ. ರಾಜ್ಯದ ಬಿಜೆಪಿ ನಾಯಕರು ಮೋದಿ ತಾಳಕ್ಕೆ ಕುಣಿದು ರಾಜ್ಯಕ್ಕೆ ಮಹಾ ದ್ರೋಹ ಬಗೆದಿದ್ದಾರೆ.
ಒಂದು ತಿಂಗಳಲ್ಲಿ ಪರಿಹಾರ ಕೊಡಬೇಕಾದರೂ ಅನ್ಯಾಯ ಮಾಡಿರುವ ಕಾರಣ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ ಎಂದರು.
ಪ್ರಧಾನಿ ಮೋದಿ ಅವರು ಹೆಚ್ಚು ಸುಳ್ಳು ಹೇಳುವ ಪ್ರಧಾನಿ. ಸುಳ್ಳೇ ಬಿಜೆಪಿಯವರ ಮನೆ ದೇವರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಜಾತಿ, ಧರ್ಮದ ಆಧಾರದ ಮೇಲೆ ಬಡವರನ್ನು ಕಡೆಗಣಿಸಿಲ್ಲ.
ಐದು ಗ್ಯಾರಂಟಿ ಯೋಜನೆ ಎಲ್ಲರಿಗೂ ತಲುಪಿದೆ. ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಆದರೆ, ಅವರ ಪಕ್ಷದ ನಾಯಕರು ಬುರ್ಖಾ, ಶಿಲುಬೆ ಹಾಕಿಕೊಂಡು ಯಾರೂ ಮನೆಗೆ ಬರಬೇಡಿ, ಟೋಪಿ ಹಾಕಬೇಡಿ ಎಂದು ಹೇಳುತ್ತಾರೆ ಎಂದು ಲೇವಡಿ ಮಾಡಿದರು.
ಮೈಸೂರು- ಬೆಂಗಳೂರು ಹೆದ್ದಾರಿ ಮಾಡಿದ್ದು ನಾವು. ಜಿಲ್ಲಾಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿದ್ದು ನಾವು. ಆದರೆ ಪ್ರತಾಪ ಸಿಂಹ ನಾನು ಮಾಡಿದೆ ಅಂತ ಹೇಳುತ್ತಿದ್ದಾರೆ.
ಇದು ಬರೀ ಪ್ರಲಾಪ. ನಮ್ಮ ಅವಧಿಯಲ್ಲಿ ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಕಟ್ಟಡದ ಪುನರ್ ನಿರ್ಮಾಣಕ್ಕೆ ತೀರ್ಮಾನಿಸಿದ್ದೇವೆ ಎಂದರು.