ಕನ್ನಡಪ್ರಭ ವಾರ್ತೆ ಬೆಂಗಳೂರು
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಅವರು ಸಂಪುಟದ ಸಹೋದ್ಯೋಗಿಗಳೊಂದಿಗೆ ನಡೆಸಿದ ಉಪಾಹಾರ ಕೂಟದ ಚಿತ್ರಣ.
ರಾಜೀನಾಮೆ ನಿರ್ಧಾರ ಪ್ರಕಟವಾಗುತ್ತಿದ್ದಂತೆಯೇ ಹಲವು ಸಚಿವರು ಭಾವುಕರಾದರು. ಕೆಲ ಸಚಿವರು ಮುಂದೇನು ಎಂಬ ಗೊಂದಲಕ್ಕೂ ಒಳಗಾದರು. ಮನಸ್ಸಿನ ತುಮುಲತೆ ನಡುವೆಯೇ ಭಾರವಾದ ಹೃದಯದಿಂದಲೇ ಮುಖ್ಯಮಂತ್ರಿ ಅವರ ವಿದಾಯ ಭಾಷಣವನ್ನು ಮುಗುಮ್ಮಾಗಿ ಆಲಿಸಿದರು.ನಂತರ ಎಚ್.ಕೆ.ಪಾಟೀಲ್, ಡಾ। ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಬೈರತಿ ಸುರೇಶ್, ಕೆ.ಜೆ.ಜಾರ್ಜ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಒಂದಷ್ಟು ಹಿರಿಯ ಸಚಿವರು ಒಬ್ಬೊಬ್ಬರೇ ಮಾತನಾಡಿ ಸಿದ್ದರಾಮಯ್ಯ ಅವರ ಜನಪರ, ಅಭಿವೃದ್ಧಿ ಪರವಾದ ಆಡಳಿತ, ಅಪಾರವಾದ ಮಾನವೀಯ ಗುಣ, ಬಡವರ ಪರವಾದ ಕಾಳಜಿ, ಸಮಾನತೆ, ಸ್ವತಂತ್ರವಾಗಿ ತಮ್ಮ ತಮ್ಮ ಇಲಾಖೆ ನಡೆಸಲು ನೀಡಿದ ಸಹಕಾರ, ಯಶಸ್ವಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸಲು ತೋರಿದ ಮಾರ್ಗದರ್ಶನದ ಗುಣಗಳನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.
ಇಡ್ಲಿ, ವಡಾ, ಉಪ್ಪಿಟ್ಟು, ಕೇಸರಿಬಾತ್:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಪಕ್ಷ 136 ಸೀಟುಗಳ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ನಮ್ಮ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಉತ್ತಮ ಜನಪರವಾದ ಆಡಳಿತ ನೀಡಿದ್ದೇವೆ. ಇದಕ್ಕೆ ಕಾರಣ ನನಗೆ ಎರಡು ಬಾರಿ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ ಕಾಂಗ್ರೆಸ್ ಹೈಕಮಾಂಡ್ ಹಾಗೂ ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳಾದ ನೀವೆಲ್ಲರೂ ನನಗೆ ನೀಡಿದ ಸಂಪೂರ್ಣ ಸಹಕಾರ, ನಿಮ್ಮ ನಿಮ್ಮ ಇಲಾಖೆಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದು. ನಾನೆಂದೂ ನನ್ನ ತತ್ವ ಸಿದ್ಧಾಂತದಲ್ಲಿ ರಾಜಿಯಾದವನಲ್ಲ ಎಂದರು ಎಂದು ತಿಳಿದುಬಂದಿದೆ.
ಈಗ ಅದರಂತೆ ಹೈಕಮಾಂಡ್ ನಿರ್ದೇಶನ ನೀಡಿದೆ. ಅದನ್ನು ಒಪ್ಪಿ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ. ಇದಕ್ಕೆ ಯಾರೂ ವಿಚಲಿತರಾಗುವುದು ಬೇಡ. ರಾಜಕೀಯದಲ್ಲಿ ಬದಲಾವಣೆಗಳು ಸಾಮಾನ್ಯ, ಮುಂದಿನ ಎರಡು ವರ್ಷ ನಾನು ಶಾಸಕನಾಗಿ ನಿಮ್ಮೊಂದಿಗೆ ಇರುತ್ತೇನೆ. ಮುಂದೆಯೂ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ. 2028ಕ್ಕೂ ಎಲ್ಲರೂ ಒಟ್ಟಾಗಿ ಪಕ್ಷವನ್ನು ಸಂಘಟಿಸಿ ಮತ್ತೆ ಅಧಿಕಾರಕ್ಕೆ ತರೋಣ ಎಂದು ಹೇಳಿದರು ಎಂದು ಮಾಹಿತಿ ಲಭ್ಯವಾಗಿದೆ.
ರಾಜೀನಾಮೆ ನಿರ್ಧಾರ ಪ್ರಕಟಿಸುತ್ತಿದ್ದಂತೆ ಬಹುತೇಕ ಸಚಿವರ ಮುಖಗಳು ಬಾಡಿದವು, ಕೆಲವರು ಭಾವುಕರಾದರು. ಒಬ್ಬೊಬ್ಬರಾಗಿಯೇ ಮುಖ್ಯಮಂತ್ರಿ ಅವರ ಜನಪರ ಆಡಳಿತ, ಬಡವರ ಪರವಾದ ಕಾಳಜಿ, ಇಲಾಖೆಯಲ್ಲಿ ತಮಗೆ ನೀಡಿದ ಸ್ವಾತಂತ್ರ್ಯ, ಸಹಕಾರ, ಮಾರ್ಗದರ್ಶನ ಹಾಗೂ ಅವರಿಂದ ಕಲಿತ ಪಾಠಗಳ ಬಗ್ಗೆ ಹೇಳುತ್ತಾ ಗುಣಗಾನ ಮಾಡಿದರು. ತಾವು ಇನ್ನೂ ಎರಡು ವರ್ಷ ಮುಖ್ಯಮಂತ್ರಿ ಆಗಿದ್ದುಕೊಂಡು ರಾಜ್ಯವನ್ನು ನಡೆಸಬೇಕೆಂಬುದು ನಮ್ಮ ಅಪೇಕ್ಷೆಯಾಗಿತ್ತು. ಆದರೆ, ನೀವೇ ಹೇಳಿದಂತೆ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ತಲೆಬಾಗಲೇಬೇಕಾಗುತ್ತದೆ. ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ನೀವೇ ನಮ್ಮ ನಾಯಕರು, ನಿಮ್ಮ ಮಾರ್ಗದರ್ಶನ, ಸಲಹೆ, ಸಹಕಾರದೊಂದಿಗೆ ಮುನ್ನಡೆಯುವುದಾಗಿ ತಿಳಿಸಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದರು.