ಕನ್ನಡಪ್ರಭ ವಾರ್ತೆ ವಿಜಯಪುರ:
ಇದು ಯಾರಿಗೆ ಬೇಕಾಗಿತ್ತು?. ಕಾಂಗ್ರೆಸ್ ನವರಿಗೆ ಬೇಕಾಗಿತ್ತಾ? ಜಿಲ್ಲಾ ಮಂತ್ರಿಗೆ ಗೊತ್ತಿರದಂತೆ ಸಚಿವ ಜಮೀರ್ ಖಾನ್ ಬಂದು ಸಭೆ ಮಾಡಿ ಪಹಣಿಗಳಲ್ಲಿ ವಕ್ಫ್ ಎಂದು ಎಂಟ್ರಿ ಮಾಡುವಂತೆ ಒತ್ತಾಯಿಸಿದ್ದಾರೆ. ಜಮೀರ್ ಮಾತುಕೇಳಿ ಅವಶ್ಯಕತೆ ಇಲ್ಲದ್ದನ್ನು ಮಾಡಿ ಸಿಎಂ ಸಿದ್ದರಾಮಣ್ಣನ ಸರ್ಕಾರ ಹುಚ್ಚರ ಸರ್ಕಾರ ಆದಂಗಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಸರ್ಕಾರದ ವಕ್ಫ್ ಲ್ಯಾಂಡ್ ಜಿಹಾದ್ ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಿಜೆಪಿ ಜಿಲ್ಲಾ ಘಟಕದಿಂದ ನಮ್ಮಭೂಮಿ ನಮ್ಮಹಕ್ಕು ಘೋಷಣೆಯಡಿ ಶುಕ್ರವಾರ ಬೆಳಗ್ಗೆಯಿಂದ ಸಂಜೆ ವರೆಗೂ ಪ್ರತಿಭಟನಾ ಧರಣಿ ನಡೆಸಲಾಯಿತು. ದೇವರ ಗುಡಿಗಳನ್ನು ಸಹ ವಕ್ಫ್ ಗೆ ಸೇರಿಸಿದ್ದಾರೆ. ದೇವಸ್ಥಾನ, ರೈತರ, ಅಲ್ಪಸಂಖ್ಯಾತರ ಯಾರದ್ದೇ ಜಮೀನು ಹೋದರು ಚಿಂತಿಸಬೇಕಿಲ್ಲ. ನಾನೊಬ್ಬ ಸರ್ಕಾರದ ಪ್ರತಿನಿಧಿಯಾಗಿ ಲೋಕಸಭೆಯಲ್ಲಿ ಹೋರಾಟ ಮಾಡಿ ನ್ಯಾಯ ಒದಗಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಜೆಪಿಸಿ ಕಮಿಟಿ ಮಾಡಿ ಎಲ್ಲ ದಾಖಲೆಗಳನ್ನು ತರಿಸಿಕೊಂಡಿದ್ದಾರೆ. ವಕ್ಫ್ ಮಾಡಿದ ಅವಾಂತರಕ್ಕೆ ಕಾಂಗ್ರೆಸ್ ಶಾಸಕರ ವಿರೋಧವಿದೆ. ವಕ್ಫ್ ವಿಚಾರ ಡೈವರ್ಟ್ ಮಾಡಲು ಬಿಜೆಪಿ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಆದರೆ, ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದನ್ನು ನೋಡಿ ಕಾಂಗ್ರೆಸ್ ಶಾಸಕರೇ ತಲೆಕೆಟ್ಟು ಬಿಜೆಪಿಗೆ ಸೇರಲು ಸಿದ್ಧವಾಗಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಮಾತನಾಡಿ, 1974ರ ಗೆಜೆಟ್ ರದ್ದು ಮಾಡಲು ಹೋರಾಟ ಮಾಡುತ್ತಿದ್ದೇವೆ. ಕಳೆದ ಎರಡು ತಿಂಗಳ ಹಿಂದೆ ಜಿಲ್ಲೆಗೆ ಬಂದ ಸಚಿವ ಜಮೀರ್ ಅಹಮ್ಮದ್ ಖಾನ್ ವಕ್ಫ್ ಅದಾಲತ್ ನಡೆಸಿದರು. ಮುಖ್ಯಮಂತ್ರಿಗಳು ಹೇಳಿದ್ದು, 1974ರ ಗೆಜೆಟ್ ಪ್ರಕಾರ ಎಲ್ಲ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿಸಿ ಎಂದು ಆದೇಶಿದಿದ್ದಾರೆ. ಅದರ ಹಿನ್ನೆಲೆ ಈಗಾಗಲೇ ಬೃಹತ್ ಹೋರಾಟ ಮಾಡಿದ ನಂತ್ರ ಜಿಲ್ಲೆಗೆ ಜೆಪಿಸಿ ಕಮೀಟಿ ಬಂದು ಅವಹಾಲು ಸ್ವೀಕಾರ ಮಾಡಿದ ಮೇಲೂ ಸಹ ಇನ್ನೂ ಪಹಣಿಗಳಲ್ಲಿ ವಕ್ಫ್ ಹೆಸರು ಸೇರಿಸುತ್ತಿದ್ದಾರೆ. ಈ ವಕ್ಫ್ ಎಂಬ ಪೆಡಂಭೂತ ಎಲ್ಲೆಡೆ ಪಸರಿಸುತ್ತಿದ್ದು, ರೈತ ಸಮುದಾಯ ಆತಂಕದಲ್ಲಿದೆ. ವಿಜಯಪುರ ಜಿಲ್ಲೆಯೊಂದರಲ್ಲೆ 16ಸಾವಿರ ಎಕರೆ, ರಾಜ್ಯದಲ್ಲಿ 1.20 ಲಕ್ಷ ಎಕರೆ, ದೇಶದಲ್ಲಿ 38 ಲಕ್ಷ ಎಕರೆ ಜಮೀನು ವಕ್ಫ್ ಆಗಿದೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ರಾಜ್ಯ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಘಟಕದಿಂದ ನಮ್ಮಭೂಮಿ ನಮ್ಮಹಕ್ಕು ಧ್ಯೇಯದಡಿ ಶುಕ್ರವಾರ ಬೆಳಗ್ಗೆಯಿಂದ ಸಂಜೆ 5ಗಂಟೆಯ ವರೆಗೂ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು. ಬೆಳಗ್ಗೆ 11ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಜಿಲ್ಲಾ ಬಿಜೆಪಿ ಮುಖಂಡರು ಪ್ರತಿಭಟನೆಯುದ್ದಕ್ಕೂ 1974ರ ಗೆಜೆಟ್ ರದ್ದಾಗಲೇಬೇಕು ಎಂದು ಆಗ್ರಹಿಸಿದರು. ನಮ್ಮಭೂಮಿ ನಮ್ಮಹಕ್ಕು. ಕಾಂಗ್ರೆಸ್ ಹಠಾವೋ ದೇಶ ಬಚಾವೋ ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಯತ್ನಾಳ ಗೈರು:
ವಕ್ಫ್ ಬಗ್ಗೆ ಬಿಜೆಪಿಯಲ್ಲಿ ಮೊದಲಿಗೆ ಧ್ವನಿ ಎತ್ತಿದ್ದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಇಂದಿನ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದಾರೆ. ಯತ್ನಾಳ ನೇತೃತ್ವದಲ್ಲಿ ನಡೆದಿದ್ದ ಕಾಂಗ್ರೆಸ್ ಹಠಾವೋ ದೇಶ ಬಚಾವೋ ಹೋರಾಟ ಸಾಕಷ್ಟು ಸದ್ದು ಮಾಡಿತ್ತು. ಈ ಹಿನ್ನೆಲೆ ಬಿಜೆಪಿ ರಾಜ್ಯ ಘಟಕದ ಸೂಚನೆ ಮೇರೆಗೆ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಈ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟದಲ್ಲಿ ಯತ್ನಾಳ ಗೈರಾಗಿದ್ದಾರೆ.ಧರಣಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ಕೆ.ಬೆಳ್ಳುಬ್ಬಿ, ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಚಂದ್ರಶೇಖರ ಕವಟಗಿ, ರಾಜಶೇಖರ ಮಗಿಮಠ, ಮಳುಗೌಡ ಪಾಟೀಲ. ಗುರುಲಿಂಗಪ್ಪ ಅಂಗಡಿ, ಸಂಜೀವ ಐಹೊಳ್ಳಿ, ಈರಣ್ಣ ರಾವೂರ, ಚಿದಾನಂದ ಹಾಗೂ ಪಕ್ಷದ ಕಾರ್ಯಕರ್ತರು ಹಲವಾರು ರೈತರು ಭಾಗವಹಿಸಿದ್ದರು.
(ಫೊಟೊಗಳನ್ನು ಮೇಲ್ ಮಾಡಲಾಗಿದೆ)ಕೋಟ್ಬಿಜೆಪಿ ಸರ್ಕಾರವಿದ್ದಾಗ ಅನ್ವರ್ ಮಾನಪ್ಪಾಡಿ ಕೊಟ್ಟ ವರದಿಯಲ್ಲಿ ಶೇ.99ರಷ್ಟು ವಕ್ಫ್ ಭೂಮಿಯನ್ನು ಕಮಿಟಿ ಸದಸ್ಯರು ಹಾಗೂ ಕಾಂಗ್ರೆಸ್ನವರೇ ಎತ್ತಿ ಹಾಕಿದ್ದಾರೆ. ಸಿದ್ರಾಮಣ್ಣ ನಿನಗೆ ಅಷ್ಟು ಕಾಳಜಿ ಇದ್ದರೆ ಇದರ ಬಗ್ಗೆ ನೀನು ತನಿಖೆ ಮಾಡಿಸು ಅಥವಾ ಸಿಬಿಐಗೆ ಕಳಿಸು. ಅಲ್ಲಿ ಮೇಲೆ ಮೋದಿ ಗಂಡಸು ಇದ್ದಾನೆ. ಅವ ಎಲ್ಲ ಮಾಡ್ತಾನೆ. ಅದು ಬಿಟ್ಟು ಇಲ್ಲಿ ಕುಯಿ ಕುಯಿ ಅಂದರೆ ಏನು ಆಗಲ್ಲ.
ರಮೇಶ ಜಿಗಜಿಣಗಿ, ಸಂಸದ