ಕೊಟ್ಟೂರು: ಕಳೆದ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮೀಸಲಾತಿ ಹೋರಾಟ ಮಾಡುತ್ತಿದ್ದ ಸಮಾಜದ ಹೋರಾಟಗಾರರ ಮೇಲೆ ಸರಕಾರ ನಡೆಸಿದ್ದ ಲಾಠಿ ಚಾರ್ಜ್ ಘಟನೆಗೆ ವರ್ಷವಾದ ಹಿನ್ನೆಲೆಯಲ್ಲಿ ಡಿ. 10ರಂದು ಬೆಳಗಾವಿಯಲ್ಲಿ ಕರಾಳ ದಿನವನ್ನಾಗಿ ಆಚರಿಸಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಹಾಗೂ ಪಂಚಮಸಾಲಿ ಸಮಾಜದ ರಾಜ್ಯ ಮುಖಂಡ ನಂದಿಹಳ್ಳಿ ಹಾಲಪ್ಪ ಹೇಳಿದರು.
ಇದರಲ್ಲಿ ಪಂಚಮಸಾಲಿ ಹರಿಹರ ಮತ್ತು ಕೂಡಲ ಸಂಗಮ ಪೀಠದ ಉಭಯ ಜಗದ್ಗುರುಗಳು ಪಾಲ್ಗೊಳ್ಳವರು. ಸ್ವಾಮೀಜಿಯ ಪ್ರತಿಭಟನೆಗೆ ಇಡೀ ರಾಜ್ಯದ ಪಂಚಮಸಾಲಿ ಜನರು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ವಿಜಯನಗರ ಜಿಲ್ಲೆಯಿಂದಲೂ ಸಮಾಜದ ಮುಖಂಡರು ಸೇರಿ ಅನೇಕರು ಬೆಳಗಾವಿಗೆ ತೆರಳುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮೀಸಲಾತಿ ನೀಡುವುದಿಲ್ಲ ಎಂದು ಸ್ಪಷ್ಪವಾಗಿ ಹೇಳಬಹುದಿತ್ತು, ಅದರ ಬದಲು ಲಾಠಿ ಚಾರ್ಜ್ ಮಾಡಿಸಿದ್ದರು. ಅವರು ಅಧಿಕಾರದಲ್ಲಿ ಇರುವರೆಗೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೇಳುವುದಿಲ್ಲ ಎಂದು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಪಂಚಮಸಾಲಿ ತಾಲೂಕು ಮುಖಂಡ ಪಿ. ಭರಮನಗೌಡ ಮಾತನಾಡಿದರು. ಪಂಚಮಸಾಲಿ ತಾಲೂಕು ಅಧ್ಯಕ್ಷ ಚಾಪಿ ಚಂದ್ರಪ್ಪ, ಮುಖಂಡರಾದ ಅಂಗಡಿ ಪಂಪಾಪತಿ, ನಂಜನಗೌಡ, ಕೆ. ವಿವೇಕಾನಂದ, ಈಶ್ವರಪ್ಪ ತುರಕಾಣಿ, ಮಂಜುನಾಥ, ಮುದುಕಪ್ಪ ಸೇರಿ ಅನೇಕರು ಇದ್ದರು.