ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ನಡೆದ ರೀಲರ್ಸ್ ಗಳ ಹಾಗೂ ರೈತರ ಕುಂದು ಕೊರತೆ ಸ್ವೀಕರಿಸಿ ಮಾತನಾಡಿದ ಅವರು, ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಕ್ಯಾಂಟೀನ್ , ಶೌಚಾಲಯ ನಿರ್ಮಾಣ ಸೇರಿದಂತೆ ನವೀಕರಣಕ್ಕಾಗಿ ಅಧಿಕಾರಿಗಳ ಮೂಲಕ ರಾಜ್ಯಸರ್ಕಾರಕ್ಕೆ 5 ಕೋಟಿ ರುಪಾಯಿಗಳ ಪ್ರಸ್ತಾವನೆ ಸಲ್ಲಿಸಿದ್ದೆ. ಆದರೆ, ಸರ್ಕಾರ 1 ಕೋಟಿ 60 ಲಕ್ಷ ರುಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದರು.
ಈಗ ಮಾರುಕಟ್ಟೆ ಪಕ್ಕದ ಕಟ್ಟಡ ಶಿಥಿಲಗೊಂಡಿದ್ದು, ಅದನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಹೀಗಾಗಿ ಆ ಕಟ್ಟಡದೊಳಗಿನ ಪರಿಕರ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮುಂದುವರಿದ ಕಾಮಗಾರಿ ಎಂದು ಹೇಳಿ ಮತ್ತೊಂದು ಪ್ರಸ್ತಾವನೆ ಸಲ್ಲಿಸಲು ರೇಷ್ಮೆಗೂಡಿನ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.ಈ ಮಾರುಕಟ್ಟೆಯ ನವೀಕರಣಕ್ಕಾಗಿ 5 ರಿಂದ 10 ಕೋಟಿ ಮಾತ್ರವಲ್ಲ, ಎಷ್ಟು ಕೋಟಿ ವೆಚ್ಚ ತಗಲುತ್ತದೆಯೋ ಅಷ್ಟು ಅನುದಾನವನ್ನು ಸರ್ಕಾರದಿಂದ ನಾನು ತರುತ್ತೇನೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರೇಷ್ಮೆ ಸಚಿವರಿಗೆ ಮಾರುಕಟ್ಟೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟು ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಆದ್ದರಿಂದ ರೇಷ್ಮೆಗೂಡು ಮಾರುಕಟ್ಟೆ ಇಲ್ಲೇ ಇರಬೇಕು. ಇದಕ್ಕೆ ರೇಷ್ಮೆ ಬೆಳೆಗಾರರು, ರೀಲರ್ಸ್ ಹಾಗೂ ವರ್ತಕರ ಬೆಂಬಲ ಬೇಕಾಗಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ನಾನು 20 ರಿಂದ 25 ವರ್ಷಗಳಿಂದ ಶಾಸಕನಾಗಿಲ್ಲ. ನಾನು ಶಾಸಕನಾಗಿ ಕೇವಲ ಒಂದೂವರೆ ವರ್ಷವಷ್ಟೇ ಆಗಿದೆ. ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ರಾಮನಗರಕ್ಕೆ ಹೊಸ ರೂಪ ಕೊಡುವ ಉದ್ದೇಶ ಹೊಂದಿದ್ದೇನೆ ಎಂದರು.
ಮಾರುಕಟ್ಟೆಯಲ್ಲಿಯೇ ರೇಷ್ಮೆ ಖರೀದಿಸುವ ವ್ಯವಸ್ಥೆ ಜಾರಿಗೆ ಚರ್ಚಿಸುವೆ:
ನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ನಡೆದ ರೀಲರ್ಸ್ ಗಳ ಕುಂದು ಕೊರತೆ ಸ್ವೀಕರಿಸಿ ಮಾತನಾಡಿದ ಅವರು, ಈ ಮೊದಲು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾರುಕಟ್ಟೆಯಲ್ಲಿಯೇ ರೇಷ್ಮೆ ಖರೀದಿಸಲಾಗುತ್ತಿತ್ತು. ಆ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.
ಸಬ್ಸಿಡಿಗಾಗಿ ಬಿಲ್ ಸಲ್ಲಿಸುವುದೆಲ್ಲ ಸರ್ಕಾರದ ನಿಯಮಾವಳಿಗಳು. ಇದನ್ನು ಸರ್ಕಾರದ ಗಮನಕ್ಕೆ ತಂದು ಸರಳೀಕರಣ ಮಾಡಲು ಪ್ರಯತ್ನಿಸುತ್ತೇನೆ. ರೈತರು ರೇಷ್ಮೆ ಮತ್ತು ಕೃಷಿ ಇಲಾಖೆಯಿಂದ ಸಬ್ಸಿಡಿ ಪಡೆಯುತ್ತಾರೆ. ಹೀಗಾಗಿ ರೈತರಿಂದ ರೇಷ್ಮೆಗೂಡು ಖರೀದಿಸಿದ ಆಧಾರದ ಮೇಲೆ ರೀಲರ್ಸ್ ಗಳಿಗೆ ಸಬ್ಸಿಡಿ ಕೊಡಬೇಕೆಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಖಾಸಗಿ ವ್ಯಕ್ತಿಗಳು ಅರ್ಜಿ ಹಾಕಿ ಘಟಕ ಸ್ಥಾಪನೆಗೆ ಸಬ್ಸಿಡಿ ಪಡೆದಿದ್ದಾರೆ. ರೀಲರ್ಸ್ ಅಸೋಸಿಯೇಷನ್ ಗೆ ತನ್ನದೇ ಆದ ಶಕ್ತಿಯಿದ್ದು, ಸರ್ಕಾರದ ಮಟ್ಟದಲ್ಲಿ ಸಲಹೆಗಳಿಗೆ ಮಾನ್ಯತೆಯೂ ಸಿಗುತ್ತದೆ. ಅಸೋಸಿಯೇಷನ್ ಕಡೆಯಿಂದ ಹೋದರೂ ಸಬ್ಸಿಡಿ ಪಡೆಯಬಹುದಾಗಿದೆ. ಆದ್ದರಿಂದ ಹಂತ ಹಂತವಾಗಿ ಘಟಕ ಸ್ಥಾಪನೆಗೆ ಆದ್ಯತೆ ನೀಡೋಣ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಪರ್ವೇಜ್ ಪಾಷ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ರೇಷ್ಮೆ ಬೆಳೆಗಾರ ರವಿ, ರೀಲರ್ಸ್ ಗಳಾದ ಶಫಿ, ಮೋಸಿನ್, ಹಬಿಬ್ ಉಲ್ಲಾ ಹಾಜರಿದ್ದರು.