೨೧ರಂದು ಬೆಳ್ಳಟ್ಟಿ ಬೆಳಕಿನ ಬೆಳ್ಳಿ ಮಹೋತ್ಸವ: ತಿಮ್ಮರಡ್ಡಿ ಮರಡ್ಡಿ

KannadaprabhaNewsNetwork |  
Published : Nov 19, 2025, 01:30 AM IST
ಬೆಳ್ಳಟ್ಟಿ ಬೆಳಕಿನ ಬೆಳ್ಳಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ರಾಮಲಿಂಗೇಶ್ವರ ಮಠದಲ್ಲಿ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ನ. ೨೨ರಂದು ಬೆಳಗ್ಗೆ ೮ ಗಂಟೆಗೆ ವೈಭವದೊಂದಿಗೆ ಭಕ್ತರು ಸೇರಿ ನಾಡಿನ ೨೫ ಪೂಜ್ಯರಿಗೆ ಮಂಟಪ ಪೂಜಾಕಾರ್ಯ ನೆರವೇರಲಿದೆ.

ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಸ್ವಾಮಿಗಳ ೨೫ನೇ ವರ್ಷದ ಪಟ್ಟಾಧಿಕಾರದ ಬೆಳ್ಳಟ್ಟಿ ಬೆಳಕಿನ ಬೆಳ್ಳಿ ಮಹೋತ್ಸವ ಸಮಾರಂಭ ನ. ೨೧ರಂದು ಶ್ರೀಮಠದಲ್ಲಿ ಜರುಗಲಿದೆ ಎಂದು ಮಠದ ಭಕ್ತರಾದ ತಿಮ್ಮರಡ್ಡಿ ಮರಡ್ಡಿ ತಿಳಿಸಿದರು.ತಾಲೂಕಿನ ಬೆಳ್ಳಟ್ಟಿ ಗ್ರಾಮದ ರಾಮಲಿಂಗೇಶ್ವರ ದಾಸೋಹ ಮಠದಲ್ಲಿ ಅಗಡಿ ಗ್ರಾಮದ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮಿಗಳು ಹಾಗೂ ಬನ್ನಿಕೊಪ್ಪ ಬ್ರಹನ್ಮಠದ ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು ಬೆಳ್ಳಟ್ಟಿ ಬೆಳಕಿನ ಬೆಳ್ಳಿ ಮಹೋತ್ಸವ- ೨೦೨೫ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಸದ್ಭಕ್ತರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ಬಸವರಾಜ ಸ್ವಾಮಿಗಳು ರಾಮಲಿಂಗೇಶ್ವರ ಮಠದ ಪಟ್ಟಾಧಿಕಾರಿಯಾಗಿ ೨೫ ವರ್ಷ ಪೂರೈಸಿದ ಹಿನ್ನೆಲೆ ಸೆ. ೨೩ರಿಂದ ಸತತ ೬೦ ದಿನಗಳ ಕಾಲ ಬಸವ ಪುರಾಣ ಕಾರ್ಯಕ್ರಮ ಶ್ರೀಮಠದಲ್ಲಿ ಜರುಗಿದೆ ಎಂದರು. ನ. ೨೧ರಂದು ಪುರಾಣ ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದೆ. ಅಂದು ನಾರಾಯಣಪುರದ ಬಸವೇಶ್ವರ ದೇವಸ್ಥಾನದಿಂದ ಪೂರ್ಣಕುಂಭ ಮತ್ತು ಸಕಲ ವಾದ್ಯಗಳೊಂದಿಗೆ ಬಸವ ಪುರಾಣ ಗ್ರಂಥ ಹಾಗೂ ಬಸವರಾಜ ಸ್ವಾಮಿಗಳ ಭವ್ಯ ಮೆರವಣಿಗೆ ನಡೆಯಲಿದೆ. ಅಂದು ಸುತ್ತಲಿನ ೫೦ ಗ್ರಾಮಗಳ ಸೂಮಾರು ೧೫ ಸಾವಿರ ಭಕ್ತರು ಸೇರುವ ನಿರೀಕ್ಷೆಯಿದೆ ಎಂದರು.ನ. ೨೨ರಂದು ಬೆಳಗ್ಗೆ ೮ ಗಂಟೆಗೆ ವೈಭವದೊಂದಿಗೆ ಭಕ್ತರು ಸೇರಿ ನಾಡಿನ ೨೫ ಪೂಜ್ಯರಿಗೆ ಮಂಟಪ ಪೂಜಾಕಾರ್ಯ ನೆರವೇರಲಿದೆ. ಅಂದು ಸಾಯಂಕಾಲ ಫಕೀರ ಸಿದ್ದರಾಮ ಸ್ವಾಮಿಗಳು, ನಾಗಭೂಷಣ ಸ್ವಾಮಿಗಳು, ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಪ್ರಭುಲಿಂಗ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ಪುರಾಣ ಮಂಗಲೋತ್ಸವ ಸಮಾರೋಪ ಮತ್ತು ಕರ್ಪೂರದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎಚ್.ಕೆ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು ಎಂದರು.ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬಸವರಾಜ ಶ್ರೀಗಳ ೨೫ನೇ ವರ್ಷದ ಪಟ್ಟಾಧಿಕಾರದ ಮತ್ತು ೫೦ನೇ ಜನ್ಮ ಸುವರ್ಣ ಮಹೋತ್ಸವದ ಪ್ರಯುಕ್ತ ಶ್ರೀಗಳಿಗೆ ಭಕ್ತರಿಂದ ೫೦ನೇ ತುಲಾಭಾರ ಮಾಡಲಾಗುವುದು. ಅಲ್ಲದೆ ೬೦ ದಿನಗಳ ಕಾಲ ಪಠಿಸಿರುವ ಬಸವ ಪುರಾಣ ಖುದ್ದು ಬಸವರಾಜ ಶ್ರೀಗಳ ಹಸ್ತಲಿಪಿಯದ್ದಾಗಿದೆ ಎಂದರು.

ಬೆಳ್ಳಟ್ಟಿ ಗ್ರಾಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ಶಿವನಗೌಡ ಪಾಟೀಲ, ಮೋಹನ ಗುತ್ತೆಮ್ಮನವರ, ಶಿದ್ರಾಮಪ್ಪ ಮೊರಬದ, ಮಹೇಶ ಬಡ್ನಿ, ರಾಜೇಂದ್ರ ಹಲಗಲಿ, ಸುರೇಶ ಬಸವರಡ್ಡಿ, ರಾಘವೇಂದ್ರ ಇಚ್ಚಂಗಿ, ವೀರನಗೌಡ ಪಾಟೀಲ, ಸುರೇಶ ಬ್ಯಾಲಹುಣಸಿ, ವಿರುಪಾಕ್ಷ ನಂದೆಣ್ಣವರ, ಶೇಖರಪ್ಪ ಮಹಾಜನಶೆಟ್ಟರ, ಕೋಟ್ರೇಶ ಸಜ್ಜನ, ದ್ಯಾಮಣ್ಣ ಮಾಳಮ್ಮನವರ, ಜಗನ್ನಾತಯ್ಯ ಹಿರೇಮಠ, ರಬ್ಬಾನಿ ಚೌರಿ ಮುಂತಾದವರು ಇದ್ದರು.

PREV

Recommended Stories

ಪಕ್ಷಭೇದ ಬದಿಗಿಟ್ಟರೆ ಕ್ಷೇತ್ರದ ಅಭಿವೃದ್ಧಿ: ಶಾಸಕ ಸಿ.ಸಿ. ಪಾಟೀಲ
ಮಿಥೆನಾಲ್‌ ಗ್ಯಾಸ್ ಟ್ಯಾಂಕರ್‌ ಪಲ್ಟಿ: ಗ್ಯಾಸ್ ಸೋರಿಕೆ ತಡೆಗೆ ಕಾರ್ಯಾಚರಣೆ