ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳದಲ್ಲೇ ಪ್ರಾರಂಭಗೊಂಡ ನವೋದಯ ಸ್ವಸಹಾಯ ಸಂಘ ದೇಶಕ್ಕೇ ಮಾದರಿ ಸಂಘವಾಗಿ ಗುರುತಿಸಲ್ಪಟ್ಟಿದೆ. ಈ ವರ್ಷ ನವೋದಯ ಸ್ವಸಹಾಯ ಸಂಘ ರಜತ ಮಹೋತ್ಸವ ಆಚರಿಸುವುದು ಹೆಮ್ಮೆಯ ವಿಷಯ. ಸಂಘದ ರಜತ ಮಹೋತ್ಸವ ಮೇ 10ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಹಿರಿಯ ಸಹಕಾರಿ ಧುರೀಣ, ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.ಕಾರ್ಕಳದ ದಾನಶಾಲೆ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು. ನವೋದಯ ಕುಟುಂಬಕ್ಕೆ ಸೇರಿದ ನಂತರ ಸದಸ್ಯರಿಗೆ ಸುಮಾರು 5 ಲಕ್ಷ ಸಮವಸ್ತ್ರ ವಿತರಣೆಗೆ ಮಾರ್ಚ್ 25ರಂದು ಚಾಲನೆ ನೀಡಲಿದ್ದು, ಜಾತಿ, ಧರ್ಮ, ಬಡತನ , ಸಿರಿತನವೆನ್ನುವ ಭೇದವನ್ನು ನಿವಾರಿಸಿ ಎಲ್ಲರೂ ಸಮಾನರು ಎನ್ನುವ ದೃಷ್ಟಿಯಿಂದ ಸಮವಸ್ತ್ರ ನೀಡಲಾಗುತ್ತಿದೆ ಎಂದರು.
ನವೋದಯ ಸ್ವಸಹಾಯ ಸಂಘದಲ್ಲಿ ಸದಸ್ಯರ ಸಾಮರ್ಥ್ಯಕ್ಕೆ ತಕ್ಕಂತೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಸಂದರ್ಭದಲ್ಲಿ ಠೇವಣಿಯನ್ನು ಕಳೆಯದೆ ಸದಸ್ಯರಿಗೆ ಸಾಲ ನೀಡುತ್ತಿದ್ದು, ಶೇ.99ಕ್ಕೂ ಅಧಿಕ ಪ್ರಮಾಣದಲ್ಲಿ ಸಾಲದ ಮರುಪಾವತಿಯಾಗಿದೆ. ಸದಸ್ಯರ ಅಪಘಾತ, ಮರಣ ಸಂದರ್ಭದಲ್ಲಿ ಚೈತನ್ಯ ವಿಮಾ ಯೋಜನೆಯಡಿಯಲ್ಲಿ 1 ಲಕ್ಷ ರುಪಾಯಿಗಳನ್ನು ಅವರ ಕುಟುಂಬಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಮೇಘರಾಜ್ ರಾಜೇಂದ್ರ ಕುಮಾರ್, ಸುನೀಲ್ ಬಜಗೋಳಿ ಉಪಸ್ಥಿತರಿದ್ದರು.
ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಪ್ರಧಾನ ವ್ಯವಸ್ಥಾಪಕಿ ಪೂರ್ಣಿಮಾ ವಂದಿಸಿದರು.