7ನೇ ವೇತನ ಜಾರಿಗಾಗಿ ಪ್ರಾಮಾಣಿಕ ಪ್ರಯತ್ನ

KannadaprabhaNewsNetwork | Published : Jul 12, 2024 1:32 AM

ಸಾರಾಂಶ

ರಾಜ್ಯದ ಸರ್ಕಾರಿ ನೌಕರರ ಬಹು ವರ್ಷಗಳ ಬೇಡಿಕೆಯಾದ 7ನೇ ವೇತನವನ್ನು ಜಾರಿ ಮಾಡಿಸಲು ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ರಾಜ್ಯದ ಸರ್ಕಾರಿ ನೌಕರರ ಬಹು ವರ್ಷಗಳ ಬೇಡಿಕೆಯಾದ 7ನೇ ವೇತನವನ್ನು ಜಾರಿ ಮಾಡಿಸಲು ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಭರವಸೆ ನೀಡಿದರು.

ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜು ನೇತೃತ್ವದ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ನೀಡಿದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು, ಸರ್ಕಾರಿ ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. 7ನೇ ವೇತನ ನೀಡುವ ಸಂಬಂಧ ಸರ್ಕಾರಕ್ಕೆ ಕಳೆದ 19 ತಿಂಗಳ ಹಿಂದೆಯೇ ಆಯೋಗ ಶಿಫಾರಸು ಮಾಡಿದರೂ ಸಹ ಇನ್ನೂ 7ನೇ ವೇತನವನ್ನು ಜಾರಿ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದರು.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿದ್ದ ವೇಳೆಯೂ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಡಿ ಜಯಗಳಿಸಿದ್ದೆ. ಕೇಂದ್ರ, ರಾಜ್ಯ ಸರ್ಕಾರದ ನೌಕರರ ಕಾರ್ಯಭಾರ ಒಂದೇ ಆಗಿದೆ. ಆದರೂ ಸಹ ಕೇಂದ್ರ, ರಾಜ್ಯ ಸರ್ಕಾರಿ ನೌಕರರು ಎಂದು ವಿಭಾಗಿಸಿರುವುದು ಸರಿಯಲ್ಲ. ಎಲ್ಲರಿಗೂ ಸಮಾನ ಕೆಲಸ, ಸಮಾನ ವೇತನವನ್ನು ನಿಗದಿಗೊಳಿಸಬೇಕು. ಮುಂಬರುವ ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರಿ ನೌಕರರ ಬೇಡಿಕೆಯ ಕುರಿತು ಬಜೆಟ್ ಚರ್ಚೆಯಲ್ಲಿ ಚರ್ಚಿಸುವುದಾಗಿ ಹೇಳಿದರು.

ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜು ಮಾತನಾಡಿ, ಈ ಹಿಂದಿನ ವೇತನ ಪರಿಷ್ಕೃತ ಸಂಬಂಧ ಸರ್ಕಾರಕ್ಕೆ ಸಲ್ಲಿಸಿದ ವರದಿಗಳ ಅನುಷ್ಠಾನಕ್ಕೆ ಕೆಲವೇ ತಿಂಗಳು ತೆಗೆದುಕೊಳ್ಳಲಾಗಿತ್ತು. ಆದರೆ 7ನೇ ವೇತನದ ಶಿಫಾರಸನ್ನು ಜಾರಿಗೊಳಿಸಲು ತುಂಬಾ ವಿಳಂಬ ಮಾಡಲಾಗುತ್ತಿದೆ. ಇದು ಸರ್ಕಾರಿ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ತಹಸೀಲ್ದಾರ್ ವೈ.ಎಂ.ರೇಣುಕುಮಾರ್‌ಗೂ ಮನವಿ ಸಲ್ಲಿಸಲಾಯಿತು. ಸಂಘದ ಕಾರ್ಯದರ್ಶಿ ನಟೇಶ್, ಖಜಾಂಚಿ ನಾಗರಾಜ್, ಪದಾಧಿಕಾರಿಗಳಾದ ಗಿಡ್ಡೇಗೌಡ, ವೀರಪ್ರಸನ್ನ, ಬಾಲಾಜಿ, ಷಣ್ಮುಖಪ್ಪ, ಗ್ರೇಡ್ ೨ ತಹಸೀಲ್ದಾರ್ ಸುಮತಿ, ಸಾ.ಶಿ.ದೇವರಾಜ್, ಶಿವಶಂಕರ್, ಡಾ.ನವೀನ್, ಭಾರತಿ ಭಾಗವಹಿಸಿದ್ದರು.

Share this article