ಬೀದರ್: ರಾಜ್ಯದ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಜವಾಬ್ದಾರಿಯಿಂದ ಹೋರಾಡಿ ಅವರಿಗೆ ನ್ಯಾಯ ಸಿಗುವಂತೆ ಮಾಡುತ್ತೇನೆ, ವಿದ್ಯಾರ್ಥಿಗಳ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ನನ್ನದಾಗಿರುತ್ತದೆ ಎಂದು ಭಾರತೀಯ ರಾಷ್ಟೀಯ ವಿದ್ಯಾರ್ಥಿಗಳ ಒಕ್ಕೂಟದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರ ಈಶ್ವರ ಖಂಡ್ರೆ ಭರವಸೆ ನೀಡಿದರು.
ಎಲ್ಲರೂ ಬದುಕಿನಲ್ಲಿ ಕಾಯಕದ ಮುಖಾಂತರ ಪ್ರಗತಿ ಸಾಧಿಸಬೇಕು. ಸಮಾಜದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ, ಸಮಾನತೆ ಸಿಗಬೇಕು ಬಡವ ಶ್ರೀಮಂತರೆಂಬ ತಾರತಮ್ಯ ಇರಬಾರದು. ಎಲ್ಲರೂ ಬದುಕಿನಲ್ಲಿ ಕಾಯಕದ ಮುಖಾಂತರ ಪ್ರಗತಿ ಸಾಧಿಸಬೇಕು. ಸಮಾಜದಲ್ಲಿನ ಪ್ರತಿಯೊಬ್ಬರು ದುಶ್ಚಟಗಳನ್ನು ಬಿಟ್ಟು ಸುಂದರವಾದ ಬದುಕು ಹಾಗೂ ಸಮಾಜ ರೂಪಿಸಿಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಕೀರ್ತಿ ಗಣೇಶ ಮಾತನಾಡಿ, ಅನ್ಯಾಯದ ವಿರುದ್ಧ ಹೋರಾಟ ಮಾಡುವುದೇ ಎನ್ಎಸ್ಯುಐ ಘಟಕದ ಗುರಿಯಾಗಿದೆ. ವಿದ್ಯಾರ್ಥಿಗಳ ನ್ಯಾಯ, ಕಲ್ಯಾಣಕ್ಕಾಗಿ ಹೋರಾಟ ಮಾಡಲು ಒಂದು ಶಕ್ತಿಯುತ ಸಂಘಟನೆಯಾಗಿದ್ದು, ರಾಜಕೀಯದಲ್ಲಿ ಪರಿಶುದ್ಧತೆ ತರಲು ಯುವಕರಿಗೆ ನ್ಯಾಯ ಒದಗಿಸುವದಕ್ಕೆ ಶ್ರಮಿಸುತ್ತದೆ. ರಾಜ್ಯದಲ್ಲಿ ಈ ಘಟಕವು ಯುವಕರ ಧ್ವನಿಯಾಗಿ ಹಿಂದೂ, ಮುಸ್ಲಿಂರಲ್ಲಿ ಸೌಹಾರ್ದತೆ ತರುವದೇ ನಮ್ಮ ಗುರಿಯಾಗಿದೆ ಎಂದರು.ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷಕ ಅಭಿಷೇಕ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜನರಿಗೆ ಗ್ಯಾರಂಟಿ ನೀಡಿ ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದೆ, ಜನರ ಬೆಂಬಲ ಈ ಸರ್ಕಾರಕ್ಕೆ ಇದೆ ಎಂದು ಹೇಳಿದರು.
ಬಸವಕಲ್ಯಾಣದ ಯುವನಾಯಕರಾದ ಗೌತಮ ನಾರಾಯಣರಾವ್ ಮಾತನಾಡಿ, ಸಾಗರ ಈಶ್ವರ ಖಂಡ್ರೆಯವರು ಉತ್ತಮ ಯುವನಾಯಕರು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇವರ ಸೇವೆ ಅಗತ್ಯವಾಗಿದೆ ಎಂದರು.
ಅಕ್ಕಮಹಾದೇವಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಪ್ರಶಾಂತ ಕೋಟಗಿರೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿಲ್ಲಾ ಘಟಕದ ಅಧ್ಯಕ್ಷ ಸಚಿನ ಮಲ್ಕಾಪುರೆ ಸ್ವಾಗತಿಸಿ ದೀಪಕ ಥಮಕೆ ನಿರೂಪಿಸಿದರೆ ಸತೀಷ ಮಡಿವಾಳ ವಂದಿಸಿದರು.