ಶಿರಸಿ:
ಶಿರಸಿಯ ಮಹಾಗಣಪತಿಯು ಶತ ಶತಮಾನಗಳಿಂದ ಭಕ್ತರನ್ನು ಅನುಗ್ರಹಿಸಿ ಇಷ್ಟಾರ್ಥ ಅನುಗ್ರಹಿಸುತ್ತಿದ್ದು, ಸುಮಾರು ೯೦೦ ವರ್ಷಗಳಷ್ಟು ಪುರಾತನವಾದ ಇತಿಹಾಸ ಹೊಂದಿದೆ. ಕಳೆದ ೯೦ ವರ್ಷಗಳ ಹಿಂದೆ ಅಷ್ಟಬಂಧಾದಿಗಳು ನಡೆದಿದ್ದು, ಇದೀಗ ಜೀರ್ಣಾಷ್ಟಬಂಧ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜ. ೮ಕ್ಕೆ ಕಲಾ ಸಂಕೋಚ:ಪ್ರಕೃತಿ ಸಹಜವಾದ ಶ್ರೀದೇವರಲ್ಲಿ ಬಂಧಾದಿ ಭಿನ್ನತ್ವ ಮತ್ತು ಗರ್ಭಗುಡಿಯ ನವೀಕರಣ ಮನಗಂಡು ನಾಡಿನ ಪ್ರಸಿದ್ಧ ಶಿಲ್ಪ ಶಾಸ್ತ್ರಜ್ಞರು, ಆಗಮಿಕರು ಹಾಗೂ ಜ್ಯೋತಿಷಿಗಳ ಸಲಹೆ-ಸೂಚನೆಯ ಮೇರೆಗೆ ಶ್ರೀಮಹಾಗಣಪತಿಯ ಪ್ರಸಾದ ಅನುಗ್ರಹದೊಂದಿಗೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಶ್ರೀಗಳ ಆಶೀರ್ವಾದದೊಂದಿಗೆ ಜೀರ್ಣಾಷ್ಟ ಬಂಧ ಕಾರ್ಯಕ್ರಮವನ್ನು ಶಾಸ್ತ್ರೋಕ್ತ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಜ. ೮ಕ್ಕೆ ಶ್ರೀ ದೇವರ ಕಲಾಸಂಕೋಚ ನಡೆಸಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ನಿತ್ಯ ಸೇವಾ ಕೈಂಕರ್ಯ ನೆರವೇರಿಸಲಾಗುತ್ತದೆ ಎಂದು ತಿಳಿಸಿದ ಅವರು, ಈ ಕಾರಣದಿಂದ ಜ. ೭ರ ನಂತರ ಶ್ರೀದೇವರಲ್ಲಿ ಪ್ರಸಾದ ಕೇಳಿಕೆ, ಅಭಿಷೇಕ, ಅರ್ಚನೆ ಇರುವುದಿಲ್ಲ. ಆದರೆ, ನಿತ್ಯ ಸೇವಾ ಪೂಜೆ, ಗಣಹವನ ಮುಂತಾದ ಸೇವೆಗಳು ಯಥಾವತ್ತಾಗಿ ನಡೆಸಲು ಅವಕಾಶ ಇದೆ ಎಂದು ತಿಳಿಸಿದ್ದಾರೆ.ಫೆ. ೨೬ಕ್ಕೆ ಜೀರ್ಣಾಷ್ಟ ಬಂಧ:ಶ್ರೀ ದೇವರಿಗೆ ನವೀಕೃತ ಗರ್ಭಗುಡಿ ಸಮರ್ಪಣೆ ಮತ್ತು ಜೀರ್ಣಾಷ್ಟಬಂಧ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ. ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಅಲ್ಲಿಯವರೆಗೂ ನಿತ್ಯ ಸೇವಾ ಪೂಜೆ, ಗಣಹವನ ಮುಂತಾದ ಸೇವೆಗಳು ಯಥಾವತ್ತಾಗಿ ನಡೆಯಲಿದೆ. ಪ್ರಸಾದ ಕೇಳಿಕೆಯನ್ನು ಮಾತ್ರ ಅಷ್ಟಬಂಧ ಕಾರ್ಯಕ್ರಮ ಮುಗಿಯುವ ವರೆಗೆ ಕೇಳದಿರುವಂತೆ ಶಾಸ್ತ್ರಜ್ಞರು ತಿಳಿಸಿರುವುದರಿಂದ ಇದನ್ನು ನಡೆಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.ಸೇವಾ ಅವಕಾಶ:ಈ ಎಲ್ಲ ಧಾರ್ಮಿಕ ಕಾರ್ಯಕ್ರಮ ಭಕ್ತರ ಸಹಕಾರದೊಂದಿಗೆ ಯಶಸ್ವಿಗೊಳಿಸಲು ವಿನಂತಿಸಿದ ಜಿ.ಎಸ್. ಹೆಗಡೆ, ಶ್ರೀ ದೇವರ ಜೀರ್ಣಾಷ್ಟಬಂಧ ಮತ್ತು ಗರ್ಭಗುಡಿ ನವೀಕರಣ ಸೇವೆಯನ್ನು ತನು-ಮನ-ಧನದೊಂದಿಗೆ ಸೇವಾ ಕೈಂಕರ್ಯ ಮಾಡುವ ಅವಕಾಶವೂ ಇದೆ. ವಿವರಗಳಿಗೆ ಸತೀಶ ಎಲೆಸರ 9448995440 ಸಂಪರ್ಕ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.