ಕನ್ನಡಪ್ರಭ ವಾರ್ತೆ ಮಂಡ್ಯ
ಹೈಕೋರ್ಟ್ ನ್ಯಾಯಮೂರ್ತಿ ಎಸ್.ಸುನಿಲ್ದತ್ ಯಾದವ್ ಅವರು ಮದ್ದೂರು ಪಟ್ಟಣ, ಮಂಡ್ಯ ನಗರ ಹಾಗೂ ಬೇವಿನಹಳ್ಳಿ ಸಮೀಪ ನಿರ್ಮಾಣ ಹಂತದಲ್ಲಿರುವ ನ್ಯಾಯಾಧೀಶರ ವಸತಿ ಸಮುಚ್ಛಯ ವೀಕ್ಷಿಸಿದರು. ಜಿಲ್ಲಾಧಿಕಾರಿ ಡಾ.ಕುಮಾರ ಅವರು ನ್ಯಾಯಾಲಯ ಕಟ್ಟಡದ ನೀಲಿ ನಕಾಶೆ, ವಸತಿ ಸಮುಚ್ಛಯದ ನಿರ್ಮಾಣ ಹಂತದ ಕಾಮಗಾರಿ ಬಗ್ಗೆ ನ್ಯಾಯಮೂರ್ತಿಗಳಿಗೆ ವಿವರಿಸಿದರು.
ಟಿ.ಎಸ್.ಸತ್ಯಾನಂದ ಶ್ರಮದಿಂದ ೨೨ ಎಕರೆ ಮಂಜೂರು:ಸಾರ್ವಜನಿಕರು ಹಾಗೂ ವಕೀಲರ ಹಲವು ವರ್ಷಗಳ ಬೇಡಿಕೆಯಾದ ಹೊಸ ನ್ಯಾಯಾಲಯ ಕಟ್ಟಡ ನಿರ್ಮಾಣ ಸೂಕ್ತ ಜಾಗದ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟಿ.ಎಸ್.ಸತ್ಯಾನಂದ ಅವರು ಜಿಲ್ಲಾಡಳಿತ ಮತ್ತು ಸರ್ಕಾರದ ಗಮನಸೆಳೆದು ೨೨ ಗುಂಟೆ ಜಾಗ ಮಂಜೂರು ಮಾಡಿಸಿದ್ದರು. ಇದರ ಬಗ್ಗೆ ಹೈಕೋರ್ಟ್ ಗಮನ ಸೆಳೆದು ಮಂಜೂರಾಗಿರುವ ಜಾಗವನ್ನು ನ್ಯಾಯಾಂಗ ಇಲಾಖೆ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಜಾಗದಲ್ಲಿ ಏಳು ನ್ಯಾಯಾಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಜಿಲ್ಲಾಡಳಿತ ನ್ಯಾಯಾಂಗ ಇಲಾಖೆಗೆ ಮಂಜೂರಾಗಿರುವ ಜಾಗವನ್ನು ಹಸ್ತಾಂತರಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಿದೆ. ನ್ಯಾಯಮೂರ್ತಿಗಳು ಜಾಗವನ್ನು ಪರಿಶೀಲಿಸಿ ನೀಲಿ ನಕಾಶೆಯನ್ನೂ ವೀಕ್ಷಿಸಿದರು.
ಈ ಹಿಂದೆ ತೋಟಗಾರಿಕೆ ಇಲಾಖೆಗೆ ಸೇರಿದ ೨ ಎಕರೆ ೩೦ ಗುಂಟೆ ಜಾಗವನ್ನು ನ್ಯಾಯಾಂಗ ಇಲಾಖೆಗೆ ಸರ್ಕಾರ ಮಂಜೂರು ಮಾಡಿತ್ತು. ಆದರೆ, ಪರಿಸರವಾದಿಗಳು ಹಾಗೂ ರೈತ ಮುಖಂಡರ ಹೋರಾಟದಿಂದಾಗಿ ಆ ಜಾಗವನ್ನು ವಾಪಸ್ ಪಡೆಯಲಾಗಿತ್ತು. ಆನಂತರ ಕಳೆದ ಐದು ವರ್ಷಗಳಿಂದ ಆ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದರಿಂದ ಹಾಲಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ವ್ಯಾಜ್ಯಗಳ ನಿರ್ವಹಣೆಗೆ ಬಹುದೊಡ್ಡ ಅಡಚಣೆ ಉಂಟಾಗಿತ್ತು.ಹದಿನಾರು ನ್ಯಾಯಾಲಯಗಳು ಸೂಕ್ತ ಸ್ಥಳಾವಕಾಶವಿಲ್ಲದೆ ನ್ಯಾಯಾಲಯದ ಆವರಣ, ಕಾರ್ಶೆಡ್ಗಳನ್ನು ನ್ಯಾಯಾಲಯಗಳಾಗಿ ಪರಿವರ್ತಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಇದರ ಜೊತೆಗೆ ಹೊಸದಾಗಿ ಮಂಜೂರಾದ ನ್ಯಾಯಾಲಯಗಳು ಸ್ಥಳಾವಕಾಶವಿಲ್ಲದೆ ಇದುವರೆಗೂ ಪ್ರಾರಂಭವೇ ಆಗಿರುವುದಿಲ್ಲ. ಇದರ ವಿರುದ್ಧ ವಕೀಲರ ಸಂಘ ಸರ್ಕಾರ ಮತ್ತು ಹೈಕೋರ್ಟ್ ಗಮನಸೆಳೆದು ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಹೆಜ್ಜೆ ಇರಿಸಿದೆ. ಇದರಿಂದ ಹಲವು ವರ್ಷಗಳಿಂದ ಹಿಡಿದಿರುವ ಗ್ರಹಣ ಅಂತ್ಯವಾಗುವ ಸಂಭವವಿದೆ.
ಮದ್ದೂರಿನಲ್ಲೂ ಸ್ಥಳ ವೀಕ್ಷಣೆ:ಮಂಡ್ಯ ನಗರದ ಜೊತೆಗೆ ಮದ್ದೂರು ಮತ್ತು ಶ್ರೀರಂಗಪಟ್ಟಣ ನ್ಯಾಯಾಲಯಗಳ ಕುಂದುಕೊರತೆಗಳನ್ನೂ ನ್ಯಾಯಮೂರ್ತಿ ಸುನೀಲ್ದತ್ಯಾದವ್ ಪರಿಶೀಲನೆ ನಡೆಸಿದರು. ಮಂಡ್ಯದಂತೆ ಮದ್ದೂರಿನಲ್ಲೂ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು ಸ್ಥಳ ಮಂಜೂರು ಮಾಡಿರುವ ಸರ್ವೇ ನಂ ೮೦೦/೧, ೮೦೦/೩, ೮೦೧/೧ ರೇಷ್ಮೆ ಇಲಾಖೆಯ ವ್ಯಾಪ್ತಿಗೆ ಸೇರಿದ ೪.೩೫ ಎಕರೆ ಜಾಗವನ್ನು ಗುರುತಿಸಿ ೪ ಎಕರೆ ೩೦ ಗುಂಟೆ ಜಾಗವನ್ನು ನ್ಯಾಯಾಧೀಶರು ವೀಕ್ಷಿಸಿ ಮಾಹಿತಿ ಪಡೆದರು.
ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ ಅವರು ೨೦೨೦ರಲ್ಲಿ ಅಂದಿನ ಬಿಜೆಪಿ ಸರ್ಕಾರಕ್ಕೆ ಪತ್ರ ಬರೆದು ನ್ಯಾಯಾಂಗ ಇಲಾಖೆಗೆ ೪.೩೦ ಎಕರೆ ಜಾಗವನ್ನು ಮಂಜೂರು ಮಾಡಿಸಲು ಕಾರಣಕರ್ತರಾಗಿದ್ದರು. ಆ ಜಾಗದಲ್ಲಿ ನ್ಯಾಯಾಲಯ ಮತ್ತು ವಸತಿಗೃಹಗಳನ್ನು ನಿರ್ಮಿಸಲು ಶಾಸಕ ಕೆ.ಎಂ.ಉದಯ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಅದರ ಪರಿಶೀಲನೆಯನ್ನೂ ನ್ಯಾಯಮೂರ್ತಿಗಳ ತಂಡ ನಡೆಸಿತು.ವಸತಿ ಸಮುಚ್ಛಯ ಕಾಮಗಾರಿ ಪರಿಶೀಲನೆ:
ನ್ಯಾಯಾಧೀಶರಿಗೆ ಸಂಬಂಧಪಟ್ಟಂತೆ ಬೇವಿನಹಳ್ಳಿ ಸಮೀಪ ವಸತಿ ಸಮುಚ್ಛಯಗಳನ್ನು ನಿರ್ಮಿಸಲಾಗಿದ್ದು, ವಸತಿಸಮುಚ್ಛಯಗಳ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ೫ ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ವಸತಿ ಸಮುಚ್ಛಯಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ದತ್ ಯಾದವ್ ಭೇಟಿ ನೀಡಿ ಕಟ್ಟಡದ ವಿನ್ಯಾಸ ಮತ್ತು ಉಳಿಕೆ ಕಾಮಗಾರಿಗಳ ವೀಕ್ಷಣೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.ಮಂಡ್ಯ ಜಿಲ್ಲೆಯಲ್ಲಿರುವ ಏಳು ಸಿವಿಲ್ ನ್ಯಾಯಾಲಯ ಸಂಕೀರ್ಣಕ್ಕೆ ಸಂಬಂಧಪಟ್ಟಂತೆ ಕೃಷಿ ಇಲಾಖೆಗೆ ಸೇರಿದ ೨೨.೧೨ ಗುಂಟೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ. ನ್ಯಾಯಾಲಯ ಸಂಕೀರ್ಣ ನಿರ್ಮಾಣಲ್ಲೆ ೨೫ ಕೋಟಿ ರು. ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕುಮಾರ ತಿಳಿಸಿದರು.
ಇದೇ ವೇಳೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ತಹಸೀಲ್ದಾರ್ ವಿಶ್ವನಾಥ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್ ಸತ್ಯಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.