ರಸ್ತೆ ಕಾಮಗಾರಿ, ಸಮಸ್ಯೆಗಳ ಬಗ್ಗೆ ನಡೆದ ಸಭೆ । ಅಧಿಕಾರಿಗಳಿಗೆ ಸಮಗ್ರ ಕಾಮಗಾರಿಗಳ ಬಗ್ಗೆ
ಕನ್ನಡಪ್ರಭ ವಾರ್ತೆ, ತರೀಕೆರೆಪಟ್ಟಣದ ಬಿ.ಎಚ್.ರಸ್ತೆ ಕಾಮಗಾರಿಗಳನ್ನು ಇದೇ 15ರೊಳಗೆ ಜಿಲ್ಲಾಧಿಕಾರಿ, ಪಿಡಬ್ಲುಡಿ ಮತ್ತಿತರ ಅಧಿಕಾರಿಗಳೊಡನೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ವ್ಯಕ್ತಪಡಿಸಿದರು.
ಗುರುವಾರ ತರೀಕೆರೆಗೆ ಭೇಟಿ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪಟ್ಟಣದಲ್ಲಿ ಕೈಗೊಂಡಿರುವ ಬಿ.ಎಚ್.ರಸ್ತೆ ಕಾಮಗಾರಿ ಬಗ್ಗೆ ಸಾರ್ವಜನಿಕರ ಅನಿಸಿಕೆಗಳನ್ನು ಆಲಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳೊಡನೆ ಸುಧೀರ್ಘ ಚರ್ಚಿಸಿದ ಬಳಿಕ ಅಧಿಕಾರಿಗಳಿಗೆ ಸಮಗ್ರ ಕಾಮಗಾರಿಗಳ ಬಗ್ಗೆ ಸೂಚನೆ ನೀಡಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್ ಮಾತನಾಡಿ ಪಟ್ಟಣ ಸಮೀಪ ಹಾದುಹೋಗಿರುವ ರಾ.ಹೆದ್ದಾರಿ ಬೈಪಾಸ್ ರಸ್ತೆ ಕಾಮಗಾರಿಯಲ್ಲಿ ದಳವಾಯಿ ಕೆರೆ ಬಳಿಯ ಅಂಡರ್ ಪಾಸ್ ರಸ್ತೆ ಅಸಮರ್ಪಕವಾಗಿದ್ದು ಮಳೆಗಾಲದಲ್ಲಿ ನೀರು ಹೊರಕ್ಕೆ ಹರಿಯದೆ ಸೇತುವೆ ಕೆಳಗಡೆ ನಿಂತು ಕೆಸರು ತುಂಬುತ್ತದೆ. ಅಲ್ಲದೆ ಸೇತುವೆ 2 ದಂಡೆಗಳಿಂದ ಮಳೆಗಾಲದಲ್ಲಿ ನೀರು ಬಸಿಯುತ್ತಿದ್ದು, ರೈತರು ತಮ್ಮ ತೋಟ, ಹೊಲ ಗದ್ದೆಗಳಿಗೆ, ಅಕ್ಕಪಕ್ಕದ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸಲು ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ರಾ. ಹೆ. ಪ್ರಾಧಿಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಾಗ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ತರೀಕೆರೆ ಪಟ್ಟಣದ ಬಿ.ಎಚ್.ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿರುವುದಲ್ಲದೆ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಪದೇ ಪದೇ ಅಪಘಾತಗಳಾಗುತ್ತಿವೆ. ದಿನವಿಡಿ ವಿದ್ಯುತ್ ನಿಲುಗಡೆ ಸಮಸ್ಯೆಯಿಂದ ಸಣ್ಣಪುಟ್ಟ ವರ್ತಕರು ಮತ್ತು ರೈತರಿಗೆ ತೊಂದರೆಯಾಗಿದೆ. ಸಮರ್ಪಕ ಕಾಮಗಾರಿ ಮಾಡದೆ, ರಸ್ತೆಯೆಲ್ಲಾ ಧೂಳು ತುಂಬಿ ನಾಗರಿಕರಿಗೆ ತೊಂದರೆಯಾಗುತ್ತಿದೆ ಇದನ್ನು ಕೂಡಲೇ ಸರಿಪಡಿಸಿ ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಪಟ್ಟಣ ಬಿ.ಎಚ್.ರಸ್ತೆ ಕಾಮಗಾರಿ ಸ್ಥಳದಲ್ಲಿ ಸಾಕಷ್ಟು ಧೂಳು ಇದ್ದರೂ ಕ್ರಮವಹಿಸದಿರುವವರು ಇಂದು ,ಮಾತ್ರ ನೀರು ಸಿಂಪಡಿಸಿ ಧೂಳು ತಡೆದಿದ್ದಾರೆ. ರಸ್ತೆ ಕಾಮಗಾರಿ ವೇಳೆ ಅಪಘಾತಗಳು ಸಂಭವಿಸುತ್ತಿವೆ. ಅನೇಕರು ಕೈಕಾಲು ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಕಾಮಗಾರಿ ಹಿನ್ನೆಲೆಯಲ್ಲಿ ಬಿ.ಎಚ್.ರಸ್ತೆಯಲ್ಲಿನ ಅಂಗಡಿಗಳಿಗೆ ವ್ಯಾಪಾರವೇ ಆಗುತ್ತಿಲ್ಲ, ಬೀದಿ ಬದಿ ವ್ಯಾಪರಿಗಳಿಗೆ ಮತ್ತು ಸಣ್ಣ್ ಉದ್ದಿಮೆ ದಾರರಿಗೆ ತೊಂದರೆಯಾಗಿದೆ. ಗಣಪತಿ ಪೆಂಡಾಲ್ ಬಳಿ ನೀರಿನ ಪೈಪುಗಳೇ ಒಡೆದುಹೋಗಿವೆ. ರಸ್ತೆಯಲ್ಲಿ ಆಳುದ್ದ ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಸಂಸದರ ಗಮನಕ್ಕೆ ತಂದರು.ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ರಾ.ಹೆ. ನಿರ್ಮಾಣಕ್ಕೆ ಕೇಂದ್ರ ಸರ್ಕಾರ ₹4.28 ಕೋಟಿ ಮ್ಯಾಚಿಂಗ್ ಗ್ರ್ಯಾಂಟ್ ನೀಡಿದ್ದು ಈ ಅನುದಾನ ಸಂಸದರ ಗಮನಕ್ಕೆ ತಂದಿಲ್ಲ ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಸಭೆಯ ನಂತರ ಸುದ್ದಿಗಾರರೊಡನೆ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ, ಪಿಡಬ್ಲುಡಿ ಮತ್ತಿತರ ಅಧಿಕಾರಿಗಳೊಡನೆ ನ.15 ರೊಳಗೆ ರಸ್ತೆ ಕಾಮಗಾರಿ ವೀಕ್ಷಿಸಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು, ಬೈಪಾಸ್ ರಸ್ತೆ ಅಂಡರ್ ಪಾಸ್ ನ ಕೆಳೆಗಿನ ರಸ್ತೆ ದುರಸ್ತಿ ಮಾಡಿಸಿ ನೀರು ಹರಿದು ಹೋಗುವ ಹಾಗೆ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿ ಗಳಿಗೆ ಸೂಚಿಸಲಾಗಿದೆ. ಕುಡ್ಲೂರು ಪುಂಡನಹಳ್ಳಿ ರಸ್ತೆ ರಾ.ಹೆ.ಫ್ಲೈಓವರ್ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.ಬಿ.ಎಚ್.ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದ್ದು ಕಾಮಗಾರಿಗೆ ಬಳಸುತ್ತಿರುವ ಜಲ್ಲಿ, ಸೀಮೆಂಟ್ ಕಬ್ಬಿಣ ಇತ್ಯಾದಿ ಗುಣಮಟ್ಟದಿಂದ ಕೂಡಿಲ್ಲ ವೆಂದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ ಎಂಬ ಪತ್ರಕರ್ತರೊಬ್ಬರು ಸಂಸದರ ಗಮನಕ್ಕೆ ತಂದರು.
ಮುಖಂಡ ಕೃಷ್ಣಮೂರ್ತಿ, ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ಮುಖಂಡ ಶಿವರಾಜ್ ಮತ್ತಿತರರು ಭಾಗವಹಿಸಿದ್ದರು.-6ಕೆಟಿಆರ್..ಕೆ.4ಃ ತರೀಕೆರೆಯಲ್ಲಿ ನಡೆದ ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿದರು. ಮಾಜಿ ಶಾಸಕ ಡಿ.ಎಸ್.ಸುರೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಟಿ.ಎಲ್.ರಮೇಶ್, ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ ಮತ್ತಿತರರು ಇದ್ದರು.