ಸಚಿವರಾಗಲು ಶಿವಾನಂದ ಪಾಟೀಲ್ ಯೋಗ್ಯರಲ್ಲ: ರೈತರ ಆಕ್ರೋಶ

KannadaprabhaNewsNetwork |  
Published : Dec 27, 2023, 01:30 AM IST
೨೬ಕೆಎಂಎನ್‌ಡಿ-೭ಸಚಿವ ಶಿವಾನಂದ ಪಾಟೀಲ್ ಅವರು ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯವರು ಮಂಡ್ಯದಲ್ಲಿ ಪಾಟೀಲ್ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಅನ್ನದಾತರ ಸಂಕಷ್ಟ, ಬದುಕಿನ ಬಗ್ಗೆ ಅರಿವಿಲ್ಲದೆ ಸಚಿವ ಶಿವಾನಂದ ಪಾಟೀಲ್‌ರಿಂದ ದುರಹಂಕಾರಿ ವರ್ತನೆ, ರೈತ ಸಮುದಾಯವನ್ನು ನಿಂದಿಸಿರುವ ಪಾಟೀಲ್ ವಜಾಕ್ಕೆ ಆಗ್ರಹ, ಸಕ್ಕರೆ ಸಚಿವರ ಭಾವಚಿತ್ರ ಸುಟ್ಟು ರೈತರ ಆಕ್ರೋಶ. ಕಾವೇರಿ ಕೊಳ್ಳದ ಜಲಾಶಯ ಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸರದಿ ಉಪವಾಸ ಮುಂದುವರೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ‘ಬರ ಪರಿಹಾರ ಹಣಕ್ಕಾಗಿ ಬರಗಾಲ ಬರಲಿ ಎಂದು ರೈತರು ಕಾಯುತ್ತಾರೆ’... ಎಂದು ರೈತ ಸಮುದಾಯದ ಬಗ್ಗೆ ಲಘುವಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿ ಕಾವೇರಿ ಹೋರಾಟಗಾರರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು,

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಾವೇರಿ ಹೋರಾಟಗಾರರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಚಿವ ಶಿವಾನಂದ ಪಾಟೀಲ್ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಶಿವಾನಂದ ಪಾಟೀಲ್‌ಗೆ ರೈತರು ಎದುರಿಸುತ್ತಿರುವ ಸಂಕಷ್ಟದ ಅರಿವಿಲ್ಲ, ರೈತರ ಬದುಕಿನ ಬಗ್ಗೆ ತಿಳಿವಳಿಕೆಯೂ ಇಲ್ಲ. ಅಧಿಕಾರದ ಮದದಲ್ಲಿ ದುರಹಂಕಾರದ ಮಾತುಗಳನ್ನಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಯೋಗ್ಯತೆ ಇಲ್ಲದಿದ್ದರೂ ರೈತರ ಬಗ್ಗೆ ನಾಲಿಗೆಯನ್ನು ಹರಿಯಬಿಡುತ್ತಿದ್ದಾರೆ. ಇಂತಹವರು ಸಚಿವ ಸ್ಥಾನದಲ್ಲಿರುವುದಕ್ಕೆ ಅಯೋಗ್ಯರು. ಕೂಡಲೇ ಮುಖ್ಯಮಂತ್ರಿಗಳು ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆಯೂ ಸಹ ಲಕ್ಷ ಲಕ್ಷ ಪರಿಹಾರ ಹಣ ಸಿಗುತ್ತದೆಂಬ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಶಿವಾನಂದ ಪಾಟೀಲ್ ಅವಮಾನಿಸಿದ್ದರು, ರೈತರ ಬಗ್ಗೆ ಕೀಳು ಮನೋಭಾವ ಹೊಂದಿರುವ ಪಾಟೀಲ್‌ರಂತಹವರು ಜನಪ್ರತಿನಿಧಿಯಾಗಲು ಯೋಗ್ಯರಲ್ಲ. ಇವರನ್ನು ಆ ಕ್ಷೇತ್ರದ ಜನರೂ ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸುವಂತೆ ಮನವಿ ಮಾಡಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಆಳುವ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯು ಇಲ್ಲ, ಕಾವೇರಿ ಹೋರಾಟ ನಿರಂತರವಾಗಿ ನಡೆಯುತ್ತಿದ್ದರೂ ನೀರು ಉಳಿಸಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣ ಪೆದ್ದನ ರೀತಿ ವರ್ತಿಸುತ್ತಿದ್ದಾರೆ. ರೈತರನ್ನ ಅವಮಾನಿಸಿರುವ ಸಚಿವನನ್ನು ಇನ್ನೂ ಸಹ ಸಂಪುಟದಲ್ಲಿ ಉಳಿಸಿಕೊಂಡಿರುವುದೇ ದೊಡ್ಡ ದುರಂತ ಎಂದು ಟೀಕಿಸಿದರು.

ಸ್ವಾಭಿಮಾನದಿಂದ ಬದುಕುತ್ತಿರುವ ರೈತ ಶ್ರಮದಿಂದಲೇ ಜೀವನ ಮಾಡುತ್ತಾನೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಭೂಮಿಯನ್ನು ನಂಬಿ ಕೃಷಿ ಮಾಡುವ ರೈತನ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ಯೋಗ್ಯನಲ್ಲ, ಈತನನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕೃಷ್ಣಪ್ರಕಾಶ್, ಎಂ.ವಿ ಕೃಷ್ಣ, ಜೈ ಕರ್ನಾಟಕ ಪರಿಷತ್‌ನ ಎಸ್.ನಾರಾಯಣ್,ಸುಶೀಲಮ್ಮ ನೇತೃತ್ವ ವಹಿಸಿದ್ದರು.

ಉಪವಾಸ ಮುಂದುವರಿಕೆ:

ಕಾವೇರಿ ಕೊಳ್ಳದ ಜಲಾಶಯ ಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸರದಿ ಉಪವಾಸ ಮುಂದುವರೆದಿದೆ.

ನಗರದ ಸರ್‌ ಎಂ.ವಿ.ಪ್ರತಿಮೆ ಎದುರು ಸರದಿ ಉಪವಾಸದಲ್ಲಿ ನಿವೃತ್ತ ಎಂಜಿನಿಯರ್ ಕೆಂಪೇಗೌಡ, ಹುಳ್ಳೇನಹಳ್ಳಿ ಎಚ್.ಸಿ. ಚನ್ನೇಗೌಡ, ಕೀಲಾರ ಕೆ.ಬಿ.ಕೆಂಪೇಗೌಡ, ಕೋಣನಹಳ್ಳಿ ಕರಿಯಪ್ಪ, ಸಿದ್ದಯ್ಯನ ಕೊಪ್ಪಲು ಎಸ್ ಎಲ್ ಸಿದ್ದೇಗೌಡ ಹಾಗೂ ಮಂಡ್ಯ ಕಾವೇರಿ ನಗರದ ಎಸ್.ಪಿ.ನಾರಾಯಣಸ್ವಾಮಿ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು