ವಿನಾಕಾರಣ ಶಾಸಕರ ಮೇಲೆ ಅಪಪ್ರಚಾರ ಖಂಡನೀಯ: ಎಚ್.ಎಂ.ನಟರಾಜ್

KannadaprabhaNewsNetwork | Published : Jun 15, 2024 1:09 AM

ಸಾರಾಂಶ

ಕೊಪ್ಪ, ಪಟ್ಟಣದ ಹಿರಿಕೆರೆ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್‌ನಿಂದ ಕಲುಷಿತ ನೀರು ಹಿರಿಕೆರೆ ಕುಡಿಯುವ ನೀರಿಗೆ ಸೇರುತ್ತದೆ ಎಂದು ಕೊಪ್ಪನಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರೇ ಹೊಣೆ ಎಂಬಂತೆ ಮಾಜಿ ಶಾಸಕ ಜೀವರಾಜ್ ಆರೋಪಿಸಿದ್ದರು ಆದರೆ ಶಾಸಕರಿಗೂ ಲೇಔಟ್ ನಿರ್ಮಾಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ. ನಟರಾಜ್ ತಿಳಿಸಿದ್ದಾರೆ.

- ಲೇಔಟ್ ನಿರ್ಮಾಣಕ್ಕೆ ಪರವಾನಿಗೆಯನ್ನು ಕೊಪ್ಪ ಗ್ರಾಮಾಂತರ ಗ್ರಾ.ಪಂ.ನಿಂದಲೇ ನೀಡಲಾಗಿದೆ.ಕನ್ನಡಪ್ರಭ ವಾರ್ತೆ, ಕೊಪ್ಪ

ಪಟ್ಟಣದ ಹಿರಿಕೆರೆ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್‌ನಿಂದ ಕಲುಷಿತ ನೀರು ಹಿರಿಕೆರೆ ಕುಡಿಯುವ ನೀರಿಗೆ ಸೇರುತ್ತದೆ ಎಂದು ಕೊಪ್ಪನಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರೇ ಹೊಣೆ ಎಂಬಂತೆ ಮಾಜಿ ಶಾಸಕ ಜೀವರಾಜ್ ಆರೋಪಿಸಿದ್ದರು ಆದರೆ ಶಾಸಕರಿಗೂ ಲೇಔಟ್ ನಿರ್ಮಾಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ. ನಟರಾಜ್ ತಿಳಿಸಿದ್ದಾರೆ. ಪಟ್ಟಣದ ಪಕ್ಷದ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ನಿರ್ಮಾಣ ಹಂತದಲ್ಲಿರುವ ಲೇಔಟ್ ಕೊಪ್ಪ ಗ್ರಾಮಾಂತರ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು ಹಿರಿಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದು ಕೊಪ್ಪ ಪ.ಪಂ. ಗ್ರಾಮಾಂತರ ಗ್ರಾಮ ಪಂಚಾಯಿತಿ ಮತ್ತು ಪ.ಪಂ.ನಲ್ಲೂ ಬಿಜೆಪಿ ಆಡಳಿತವೇ ಇದ್ದು ಇಲ್ಲಿ ಬಿಜೆಪಿ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದರು.

ಲೇಔಟ್ ನಿರ್ಮಾಣಕ್ಕೆ ಪರವಾನಿಗೆಯನ್ನು ಕೊಪ್ಪ ಗ್ರಾಮಾಂತರ ಗ್ರಾ.ಪಂ.ನಿಂದಲೇ ನೀಡಲಾಗಿದೆ. ಹೀಗಿದ್ದರೂ ಮಾಜಿ ಶಾಸಕರು ಪ್ರತಿಭಟನೆಯುದ್ದಕ್ಕೂ ರಾಜೇಗೌಡರೇ ಇದಕ್ಕೆ ಕಾರಣ. ಶಾಸಕರ ಹಸ್ತ ಕ್ಷೇಪವಿದೆ. ಪಾಲುದಾರಿಕೆ ಇದೆ ಎನ್ನುವಂತೆ ಅವಾಚ್ಯ ಪದ ಬಳಸಿ ಶಾಸಕರನ್ನು ನಿಂದಿಸಿರುವುದು, ಸಂಬಂಧವೇ ಇಲ್ಲದ ವಿಚಾರದಲ್ಲಿ ಶಾಸಕರನ್ನು ಎಳೆದು ತರುವುದನ್ನು ಕಾಂಗ್ರೆಸ್ ಖಂಡಿಸುವುದಾಗಿ ಹೇಳಿದರು.

ಕೆರೆಯ ನೀರು ಕಲುಷಿತವಾಗುತ್ತದೆ ಎನ್ನುವ ವಿಚಾರದಲ್ಲಿ ಜನಹಿತಕ್ಕಾಗಿ ಪ್ರತಿಭಟನೆ ನಡೆಸುವುದರಲ್ಲಿ ನಮ್ಮ ಅಭ್ಯಂತರವಿಲ್ಲ. ಪ್ರತಿಭಟನೆ ನಡೆಸಲು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಧಿಕಾರವಿದೆ. ಪ್ರತಿಭಟನೆಗಳು ಜನಹಿತವಾಗಿರಬೇಕೇ ಹೊರತು ಅದರಲ್ಲಿ ರಾಜಕಾರಣ ಬೆರೆಸಬಾರದು. ಲೇಔಟ್‌ಗೆ ಪರವಾನಿಗೆ ನೀಡುವ ಸಮಯದಲ್ಲಿ ರಾಜೇಗೌಡರು ಶಾಸಕರಾಗಿದ್ದರು. ಉಳಿದಂತೆ ಇಲ್ಲಿಯ ಸಂಸದರು, ಪಂಚಾಯಿತಿ ಮತ್ತು ಪ.ಪಂ. ಜನಪ್ರತಿನಿಧಿಗಳು, ಈಗ ಆಪಾದಿಸುತ್ತಿರುವ ಮಾಜಿ ಶಾಸಕರು, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಹೊಂದಿದ್ದು ಆಗಲೇ ಕಾಮಗಾರಿ ಸ್ಥಗಿತಗೊಳಿಸಬಹುದಿತ್ತು. ಆಗೆಲ್ಲಾ ಸುಮ್ಮನಿದ್ದು ಈಗ ಪ್ರತಿಭಟನೆ ನಡೆಸುತ್ತಿರುವುದು ಅದರಲ್ಲಿ ಕಾಂಗ್ರೆಸ್ ಶಾಸಕರ ಹೆಸರನ್ನು ಎಳೆತರುತ್ತಿರುವುದು ಬಿಜೆಪಿಗರ ಸೋಲಿನ ಹತಾಶೆ ಮತ್ತು ಇಲ್ಲಿಯ ಕಾಂಗ್ರೆಸ್ ಶಾಸಕರ ಹೆಸರನ್ನು ಕೆಡಿಸುವ ಉದ್ದೇಶ ಅಡಗಿದೆ ಎಂದು ಕಿಡಿಕಾರಿದರು.

ಇನ್ನು ಮುಂದೆ ವಿನಾಕಾರಣ ಶಾಸಕ ರಾಜೇಗೌಡರ ಬಗ್ಗೆ ಅಪಪ್ರಚಾರ ಮಾಡಲು ಮುಂದಾದಲ್ಲಿ ನಾವು ಕೂಡ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ನಟರಾಜ್ ಎಚ್ಚರಿಸಿದ್ದಾರೆ. ಮುಖಂಡರಾದ ಶಶಿಕುಮಾರ್, ಎಚ್.ಎಸ್. ಇನೇಶ್, ಚಿಂತನ್ ಬೆಳಗೊಳ, ಸಾಧಿಕ್ ನಾರ್ವೆ, ಬರ್ಕತ್ ಆಲಿ, ಸಂತೋಷ್ ಕುಲಾಸೋ, ಜೇಸುದಾಸ್, ವಿಜಯ್ ಕುಮಾರ್, ಸಂತೋಷ್ ಕುಲಾಸೋ ಮುಂತಾದವರಿದ್ದರು.

Share this article