ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸೋಮವಾರ ಅಣಕನೂರು ಬಳಿಯ ಜಿಲ್ಲಾ ಉಪ ಕಾರಾಗೃಹದಲ್ಲಿ ಬಂಧಿತರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಟಾರ್ಗೆಟ್ ರಾಜಕಾರಣ ನಡೆಯುತ್ತಿದೆ. ಅಮಾಯಕ ಕಾರ್ಯಕರ್ತರನ್ನು, ಪ್ರಕರಣದಲ್ಲಿ ಶಾಮೀಲಾಗದ ವ್ಯಕ್ತಿಗಳನ್ನೂ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದರು.
ನಮ್ಮ ಕಾರ್ಯಕರ್ತರ ಮೇಲೆ ಸುಮೋಟೋ ಪ್ರಕರಣ ದಾಖಲಿಸಲಾಗಿದೆ. ಆದರೆ ಸುಮೋಟೋ ಕೇಸ್ ಹಾಕುವಷ್ಟು ದೊಡ್ಡ ಅಪರಾಧವನ್ನು ಇಲ್ಲಿ ಯಾರೂ ಮಾಡಿಲ್ಲ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿಯುವವರನ್ನೇ ಗುರಿಯಾಗಿಸಲಾಗುತ್ತಿದೆ. ಬಂಧಿತರು ಸಾಕಷ್ಟು ಭಯಭೀತರಾಗಿದ್ದಾರೆ. ಬಂಧಿತರೆಲ್ಲಾ ಜೈಲಿನ ಸಂಸ್ಕೃತಿಯಿಂದ ಬಂದವರಲ್ಲಾ. ಬಂಧಿತರ ಕಣ್ಣಲ್ಲಿ ನೋವಿದೆ, ಭಯವಿದೆ. ಸಾಮಾನ್ಯ ಪ್ರಜೆಯನ್ನು ಟಾರ್ಗೆಟ್ ಮಾಡುವುದು ಸರಿಯಲ್ಲಾ. ಸದ್ಯ ಬಂಧಿತರ ಮನೆಗೆ ತೆರಳಿ ಕುಟುಂಬಸ್ಥರಿಗೆ ಧೈರ್ಯ ತುಂಬುತ್ತೇವೆ. ಧೈರ್ಯ ತುಂಬಿ ಮನೆ ಮಕ್ಕಳನ್ನು ಅತೀ ಶೀಘ್ರದಲ್ಲೇ ಮನೆಗೆ ಕಳುಹಿಸುತ್ತೇವೆ ಎಂದು ತಿಳಿಸಿದರು.ಜಿಲ್ಲಾ ಜೆಡಿಎಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಅಖಿಲ್ ರೆಡ್ಡಿ ಜೀಡಮಾಕಲಹಳ್ಳಿ ಅವರ ಬಂಧನವನ್ನು ಖಂಡಿಸಿದ ನಿಖಿಲ್, ಅಖಿಲ್ ರೆಡ್ಡಿ ಗೌರವಯುತವಾಗಿ ಬದುಕು ಕಟ್ಟಿಕೊಂಡವರು. ಒಳ್ಳೆಯ ಸಂಸ್ಕೃತಿಯ ಹಿನ್ನೆಲೆ ಇರುವ ವ್ಯಕ್ತಿಯನ್ನು ಜೈಲಿನಲ್ಲಿ ಕೂರಿಸುವುದು ತಪ್ಪು. ಈ ಘಟನೆಯಿಂದ ಬಂಧಿತರ ಕುಟುಂಬಗಳಿಗೆ ತೀವ್ರ ಆಘಾತವಾಗಿದೆ ಎಂದರು.
ಪ್ರಚೋದನೆ ನೀಡಿ ಉದ್ದೇಶಪೂರ್ವಕವಾಗಿ ನಮ್ಮವರನ್ನು ಒಳಗಡೆ ಹಾಕಿಸಿದ್ದಾರೆ. ಆ ವ್ಯಕ್ತಿಯನ್ನು ಇಲ್ಲಿಯವರೆಗೂ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಎಫ್ಐಆರ್ ಯಾರ ಮೇಲೆ ದಾಖಲಾಗಬೇಕು ಎಂದು ಎಲ್ಲರಿಗೂ ಗೊತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ಶಾಸಕ ಪ್ರದೀಪ್ ಈಶ್ವರ್ ಅವರ ಹೆಸರು ಪ್ರಸ್ತಾಪಿಸದೆ ಆಗ್ರಹಿಸಿದರು.
ಬಂಧಿತರ ಕುಟುಂಬಗಳಿಗೆ ನಿಖಿಲ್ ಸಾಂತ್ವನ:
ಬಳಿಕ ಬಂಧಿತ ಅಖಿಲ್ ರೆಡ್ಡಿ ಅವರ ಜೀಡಮಾಕಲಹಳ್ಳಿಯ ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಪಕ್ಷದ ವತಿಯಿಂದ ಸಂಪೂರ್ಣ ಕಾನೂನು ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.