ಶಿಗ್ಗಾಂವಿ: ಅಂಬೇಡ್ಕರ್ ಅವರು ಸಿದ್ಧಾಂತಾತ್ಮಕ ಹಾದಿಯನ್ನು ನೀಡಿದರೆ, ಜಗಜೀವನ್ ರಾಮ್ ಅವರು ಅದನ್ನು ಕಾರ್ಯಾತ್ಮಕ ರಾಜಕೀಯದಲ್ಲಿ ಅನ್ವಯಿಸಿದರು. ಇಂದಿನ ಜಾಗತೀಕರಣದ ಯುಗದಲ್ಲಿ, ಸಾಮಾಜಿಕ ಅಸಮಾನತೆಗಳು ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ಇವರಿಬ್ಬರ ಚಿಂತನೆಗಳು ಇನ್ನಷ್ಟು ಪ್ರಾಸಂಗಿಕವಾಗುತ್ತವೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಶಿವಾನಂದ ದೊಡ್ಡಮನಿ ಹೇಳಿದರು.ತಾಲೂಕಿನ ಕುನ್ನೂರು ಗ್ರಾಮದ ಅಂಬೇಡ್ಕರ್ ಯುವ ಸಂಘದಿಂದ ಆಯೋಜಿಸಲಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ ಜಯಂತಿ ಪ್ರಯುಕ್ತ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ನಾವು ಕೇವಲ ಸಂವಿಧಾನಶಿಲ್ಪಿಯ ಮಿತಿಯಲ್ಲಿ ಸೀಮಿತಗೊಳಿಸಬಾರದು. ಅವರು ಮೂಲತಃ ಸಾಮಾಜಿಕ ತತ್ವಜ್ಞಾನಿ, ಆರ್ಥಿಕ ಚಿಂತಕ ಮತ್ತು ಸಮಾನತಾವಾದದ ಪರಿವರ್ತನಕಾರಿ ವಕ್ತಾರರಾಗಿದ್ದರು. ಅವರ ಬರಹಗಳು, ವಿಶೇಷವಾಗಿ ಜಾತಿ ವ್ಯವಸ್ಥೆಯ ವಿಶ್ಲೇಷಣೆ, ಭಾರತೀಯ ಸಮಾಜದ ರಚನಾತ್ಮಕ ಅಸಮಾನತೆಗಳನ್ನು ಅನಾವರಣಗೊಳಿಸುತ್ತವೆ ಎಂದರು.