ಕೊಪ್ಪಳ: ಕೋಮುವಾದಿ ಬಿಜೆಪಿಯನ್ನು ದೂರವಿಡಲು ಸಾಮಾಜಿಕ ನ್ಯಾಯದ ಕಾಂಗ್ರೆಸ್ ಗೆಲ್ಲಿಸಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಮನವಿ ಮಾಡಿದ್ದಾರೆ.
ಬಿಜೆಪಿ ನಾಯಕರು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಅಧಿಕಾರ ಹಿಡಿದವರು. ಇಲ್ಲಿಯ ತನಕ ಒಂದು ಉದ್ಯೋಗವನ್ನೂ ಸೃಷ್ಟಿಸಿಲ್ಲ. ಆದ್ದರಿಂದ ಬಿಜೆಪಿಯ ಸುಳ್ಳು ಭರವಸೆಗಳಿಗೆ ನಂಬಿ ಮತ ಹಾಕದೆ ನುಡಿದಂತೆ ನಡೆದ ಕಾಂಗ್ರೆಸ್ ಬೆಂಬಲಿಸಿ. ಸುಳ್ಳಿನ ಸರದಾರ ನರೇಂದ್ರ ಮೋದಿಗೆ ತಕ್ಕ ಉತ್ತರ ನೀಡಿ ಎಂದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಗ್ಯಾಸ್ ಬೆಲೆ ₹450 ಇದ್ದದ್ದು ಈಗ ₹1200 ಆಗಿದೆ. ಈ ಮೂಲಕ ಎರಡು ಪಟ್ಟು ಹೆಚ್ಚಳವಾಗಿ ಸಾಮಾನ್ಯ ಜನರಿಗೆ ಹೊರೆಯಾಗುತ್ತಿದೆ. ಯುವಕರು ಇದನ್ನು ಅರಿತುಕೊಳ್ಳಬೇಕು. ಮೋದಿಯಿಂದ ರಾಷ್ಟ್ರಕ್ಕೆ ಏನೂ ಲಾಭವಿಲ್ಲ. ಬಿಜೆಪಿ ಸರ್ಕಾರ ಕೇವಲ ಹೆಸರು ಬದಲಾವಣೆ ಮಾಡಿಕೊಂಡು ಕಾಂಗ್ರೆಸ್ ಯೋಜನೆಗಳನ್ನೇ ಕೇಂದ್ರದಲ್ಲಿ ಮುಂದುವರಿಸಿಕೊಂಡು ಹೋಗುತ್ತಿದೆ. ಲೋಕಸಭಾ ಕ್ಷೇತ್ರಾದ್ಯಂತ ಕಾಂಗ್ರೆಸ್ ಪರ ಅಲೆಯಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಹಲವು ದಶಕಗಳ ಕಾಲ ನನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗಳಿಗೆ ಮರುಚಾಲನೆ ನೀಡುವ ಜವಾಬ್ದಾರಿ ನಮ್ಮದು. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ವಲ್ಪ ಮತಗಳ ಅಂತರದಿಂದ ಸೋಲನ್ನು ಅನುಭವಿಸಬೇಕಾಯಿತು. ಸದ್ಯ ಎಲ್ಲೆಡೆ ಕಾಂಗ್ರೆಸ್ ಪರ ಅಲೆಯಿದ್ದು, ಈ ಬಾರಿ ಪ್ರತಿ ಬೂತ್ನಲ್ಲೂ ಹೆಚ್ಚಿನ ಮತ ಹಾಕಿಸುವ ಮಹತ್ತರ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಕ್ಷೇತ್ರದಲ್ಲಿರುವ 18 ಲಕ್ಷ ಮತದಾರರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಗಳೆಂದೇ ಕಾಂಗ್ರೆಸ್ಗೆ ಮತ ಚಲಾಯಿಸಿ, ರಾಜಶೇಖರ ಹಿಟ್ನಾಳ ಅವರನ್ನು ಗೆಲ್ಲಿಸಿ ಎಂದರು.
ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರಡ್ಡಿ ಗಲಭಿ, ಗಾಳೆಪ್ಪ ಪೂಜಾರ, ವಿರೂಪಾಕ್ಷಯ್ಯ ಗದುಗಿನಮಠ, ಈರಣ್ಣ ಗಾಣಿಗೇರ, ಪ್ರಸನ್ನ ಗಡಾದ, ಹಾಲವರ್ತಿ ಗ್ರಾಪಂ ಅಧ್ಯಕ್ಷೆ ಜಯಪ್ರದಾ ಗೊರ್, ವೆಂಕನಗೌಡ್ರು ಹಿರೇಗೌಡ್ರು, ಬಾಲಚಂದ್ರ ಮುನಿರಾಬಾದ್ , ತೋಟಪ್ಪ ಕಾಮನೂರು, ಅಂದಪ್ಪ ಬೆಣಕಲ್, ಹನುಮಂತ ಕಿಡದಾಳ, ಹನುಮೇಶ ಹೊಸಳ್ಳಿ, ಪಂಪಣ್ಣ ಪೂಜಾರ, ಆನಂದ ಕಿನ್ನಾಳ, ನಾಗರಾಜ ಚಳ್ಳೊಳ್ಳಿ, ಹೇಮಣ್ಣ ದೇವರಮನಿ, ಬಸಣ್ಣ ಬಂಗಾಳಿ, ಬನ್ನೇಪಗೌಡ, ಜ್ಯೋತಿ ಗೊಂಡಬಾಳ, ಕಾವೇರಿ ರ್ಯಾಗಿ, ಪದ್ಮಾವತಿ ಕಂಬಳಿ, ಗ್ಯಾನಪ್ಪ ತಳಕಲ್ , ಮುದಿಯಪ್ಪ ಅದೋನಿ, ಭರಮಪ್ಪ ಗೋರ್, ಶಂಕರ್ ಹೊಸಳ್ಳಿ, ಶಿವಕುಮಾರ್ ಶೆಟ್ಟರ್, ಪರಶುರಾಮ ಕೆರೆಹಳ್ಳಿ, ಗವಿಸಿದ್ದನಗೌಡ ಪಾಟೀಲ್ ಉಪಸ್ಥಿತರಿದ್ದರು.