ಮನೆಮನೆಗೆ ಸಂವಿಧಾನ, ಅಂಬೇಡ್ಕರ್ ಅರಿವು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ
ಭಾರತ ಸಂವಿಧಾನದಿಂದ ಸರ್ವರಿಗೂ ಸಾಮಾಜಿಕ ನ್ಯಾಯ, ರಕ್ಷಣೆ, ಬದುಕು ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಹೇಳಿದರು.
ನಗರದ ರೋಟರಿ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ವೆಂಕಟರಮಣಸ್ವಾಮಿ (ಪಾಪು) ಗೆಳೆಯರ ಬಳಗದ ವತಿಯಿಂದ ಸಂವಿಧಾನ ಅಮೃತ ಮಹೋತ್ಸವದ ಅಂಗವಾಗಿ ಮನೆಮನೆಗೆ ಸಂವಿಧಾನ ಹಾಗೂ ಮಲ್ಕುಂಡಿ ಮಹದೇವಸ್ವಾಮಿಯವರ ಅಂಬೇಡ್ಕರ್ ಅರಿವು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಸಂವಿಧಾನ ಜಾರಿಯಾಗಿ ಇಂದು 75 ವರ್ಷಗಳನ್ನು ಆಚರಿಸಿಕೊಳ್ಳುತ್ತಿರುವ ಸುಸಂದರ್ಭದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಇನ್ನೂ ಬದಲಾವಣೆ ಆಗಬೇಕು ಎಂದರು.ಸಂವಿಧಾನದಡಿಯಲ್ಲಿ ಜನರಿಗೆ ಹಕ್ಕು, ಸೌಲಭ್ಯಗಳು ಸಿಕ್ಕಿದೆ ಹೊರತು ಸಂಸದರು, ಶಾಸಕರಿಂದ ಅಲ್ಲ. ದಲಿತ ಸಾಹಿತಿಗಳು ಕೂಡ ನಮ್ಮ ನಾಯಕರ ನೈಜತೆ ಬರೆಯುವ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕು. ಎಂದರು. ಮಲ್ಕುಂಡಿ ಮಹದೇವಸ್ವಾಮಿಯವರ ಅಂಬೇಡ್ಕರ್ ಅರಿವು ಪುಸ್ತಕ ಯಶಸ್ವಿಯಾಗಲಿ ಎಂದು ಆಶಿಸಿದರು. ಸಾಹಿತಿ ಮುಳ್ಳೂರು ಬಸವಣ್ಣ ಮಾತನಾಡಿ ಅಂಬೇಡ್ಕರ್ ರವರ ಪೀಠಿಕೆ ಓದಿ ಅವರ ಚಿಂತನೆಗಳನ್ನು ಹೃದಯಕ್ಕೆ ತೆಗೆದುಕೊಳ್ಳಬೇಕು. ಆಗ ಮಾತ್ರ ಅವರ ಆಶಯಗಳು ಬೇಗ ಎಲ್ಲರನ್ನೂ ತಲುಪಲು ಸಾಧ್ಯ ಎಂದರು. ಮಲ್ಕುಂಡಿ ಮಹದೇವಸ್ವಾಮಿ ಬರೆದಿರುವ ಅಂಬೇಡ್ಕರ್ ಅರಿವು ಪುಸ್ತಕ ಚೆನ್ನಾಗಿ ಮೂಡಿ ಬಂದಿದೆ. ವಿದ್ಯಾರ್ಥಿಗಳಲ್ಲಿ ಅಂಬೇಡ್ಕರರ ಚಿಂತನೆಗಳನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.