ಬೀದರ್ ಜಿಲ್ಲೆಯಲ್ಲಿ 82,812 ಸಾಮಾಜಿಕ ಭದ್ರತಾ ವೇತನ ಸ್ಥಗಿತ

KannadaprabhaNewsNetwork |  
Published : Jul 24, 2026, 12:30 AM IST
ಚಿತ್ರ 23ಬಿಡಿಆರ್53 | Kannada Prabha

ಸಾರಾಂಶ

ಬೀದರ್‌ ಜಿಲ್ಲಾಡಳಿತದ ಅಧಿಕೃತ ಅಂಕಿಅಂಶಗಳ ಪ್ರಕಾರ, ಜಿಲ್ಲೆಯಲ್ಲಿ 1,18,081 ಅನುಮಾನಾಸ್ಪದ ಪ್ರಕರಣಗಳು ಗುರುತಿಸಲಾಗಿದ್ದು, ಅವುಗಳಲ್ಲಿ 95,863 ಪ್ರಕರಣಗಳ ಪರಿಶೀಲನೆ ಪೂರ್ಣಗೊಂಡಿದೆ ಎಂದು ಶಾಸಕ ಬೆಲ್ದಾಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಹಾಗೂ ಜನವಿರೋಧಿ ನೀತಿಗಳ ಪರಿಣಾಮವಾಗಿ ಬೀದರ್ ಜಿಲ್ಲೆಯ ಸಾವಿರಾರು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ 82,812 ಫಲಾನುಭವಿಗಳ ವೇತನ ಸ್ಥಗಿತಗೊಳಿಸಿರುವುದು ಅತ್ಯಂತ ಖಂಡನೀಯ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಕುರಿತು ಪ್ರಕಟಣೆ ನೀಡಿ ಜಿಲ್ಲಾಡಳಿತದ ಅಧಿಕೃತ ಅಂಕಿಅಂಶಗಳ ಪ್ರಕಾರ, ಜಿಲ್ಲೆಯಲ್ಲಿ 1,18,081 ಅನುಮಾನಾಸ್ಪದ ಪ್ರಕರಣಗಳು ಗುರುತಿಸಲಾಗಿದ್ದು, ಅವುಗಳಲ್ಲಿ 95,863 ಪ್ರಕರಣಗಳ ಪರಿಶೀಲನೆ ಪೂರ್ಣಗೊಂಡಿದೆ. ಈ ಪೈಕಿ 14,002 ಪ್ರಕರಣಗಳನ್ನು ಮುಂದುವರಿಸಲಾಗಿದ್ದು, 82,812 ಪ್ರಕರಣಗಳ ವೇತನ ಸ್ಥಗಿತಗೊಳಿಸಲಾಗಿದೆ. ಇನ್ನೂ 21,267 ಪ್ರಕರಣಗಳ ಪರಿಶೀಲನೆ ಬಾಕಿ ಇದ್ದರೂ, ಸೂಕ್ತ ಪರಿಶೀಲನೆ ಪೂರ್ಣಗೊಳ್ಳುವ ಮೊದಲೇ ಸಾವಿರಾರು ಫಲಾನುಭವಿಗಳ ವೇತನ ಸ್ಥಗಿತಗೊಳಿಸಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಸರ್ಕಾರ ಜಾರಿಗೆ ತಂದಿರುವ ವಾರ್ಷಿಕ 32 ಸಾವಿರ ಆದಾಯ ಪ್ರಮಾಣ ಪತ್ರ ಕಡ್ಡಾಯ ನಿಯಮವೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಗ್ರಾಮೀಣ ಭಾಗದ ಬಡವರು, ಹಿರಿಯ ನಾಗರಿಕರು, ವಿಧವೆಯರು ಹಾಗೂ ಅಂಗವಿಕಲರು ಆದಾಯ ಪ್ರಮಾಣಪತ್ರ ಪಡೆಯಲು ತಹಶೀಲ್ದಾರ್ ಕಚೇರಿ ಹಾಗೂ ನಾಡಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಯಸ್ಸಾದವರು, ಅಂಗವಿಕಲರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ಪ್ರಕ್ರಿಯೆ ಮತ್ತಷ್ಟು ಸಂಕಷ್ಟ ಉಂಟುಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ 32 ಸಾವಿರ ಆದಾಯ ಪ್ರಮಾಣಪತ್ರ ಕಡ್ಡಾಯ ನಿಯಮ ಹಿಂಪಡೆದು, ಬಿಪಿಎಲ್ ಪಡಿತರ ಚೀಟಿ ಆಧಾರದ ಮೇಲೆಯೇ ಹಿಂದಿನಂತೆ ಸಾಮಾಜಿಕ ಭದ್ರತಾ ವೇತನ ಮಂಜೂರು ಮಾಡುವ ವ್ಯವಸ್ಥೆಯನ್ನು ಮರುಜಾರಿಗೆ ತರಬೇಕು. ಈಗಾಗಲೇ ಸ್ಥಗಿತಗೊಂಡಿರುವ 82,812 ಅರ್ಹ ಫಲಾನುಭವಿಗಳ ವೇತನ ತಕ್ಷಣ ಮರು ಪ್ರಾರಂಭಿಸಬೇಕು. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಬಿಜೆಪಿ ಜನರೊಂದಿಗೆ ಸೇರಿ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಡಾ.ಶೈಲೇಂದ್ರ ಬೆಲ್ದಾಳೆ ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿ
ಅಫಜಲಪುರದಲ್ಲಿ ಭೀಮಾ ನದಿಯ ನೀರಿನ ಕೊರತೆ: ಡೀಸಿಗೆ ಮನವಿ