ಗದಗ: ಮನುಕುಲಕ್ಕೆ ಸೇವೆ ಮಾಡಿದವರನ್ನು ಸಮಾಜ ಎಂದೂ ಮರೆಯದು. ನರ್ಸಿಂಗ್ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಜನಸಮುದಾಯದ ಆರೋಗ್ಯವನ್ನು ಸುಧಾರಿಸುವಲ್ಲಿ ಕಂಕಣಬದ್ಧರಾಗಿ ಸೇವೆ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಅವರು ಬೆಟಗೇರಿಯ ಬಾಸೆಲ್ ಮಿಶನ್ ಸಿಎಸ್ಐ ಆಸ್ಪತ್ರೆಯ ಕಾಲೇಜ್ ಆಫ್ ನರ್ಸಿಂಗ್ನ ಬೇಸಿಕ್ ಬಿಎಸ್ಸಿ ನರ್ಸಿಂಗ್ ಶಿಕ್ಷಣ ಪಡೆಯುತ್ತಿರುವ ಮೊದಲ ವರ್ಷದ ಬ್ಯಾಚ್ ವಿದ್ಯಾರ್ಥಿಗಳ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೋಗಿಗಳ ಸೇವೆಗೆ ಮದರ್ಥೇರೆಸಾ ಬಹು ದೊಡ್ಡ ಹೆಸರು ಪಡೆದವರು, ಅವರ ಸೇವೆ ಅನುಪಮವಾದದ್ದು. ಅನುಕಂಪದ ಸೇವೆಯನ್ನು ರೋಗಿಗೆ ನೀಡುವುದು ಜೀವನದುದ್ದಕ್ಕೂ ಸಮಾಧಾನ ಕೊಡುವಂತದ್ದು ಎಂದರು.ಬೆಟಗೇರಿಯ ಸಿ.ಎಸ್.ಐ ಆಸ್ಪತ್ರೆ ಗದಗ ಪರಿಸರದ ವೈದ್ಯಕೀಯ ಕ್ಷೇತ್ರದಲ್ಲಿ ಬಹು ದೊಡ್ಡ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಎಸ್ಐ ಆಸ್ಪತ್ರೆಯ ಕಾಲೇಜ್ ಆಫ್ ನರ್ಸಿಂಗ್ನ ಬೇಸಿಕ್ ಬಿಎಸ್ಸಿ ನರ್ಸಿಂಗ್ ಶಿಕ್ಷಣ ನೀಡುತ್ತಿರುವದು ವಿದ್ಯಾರ್ಥಿಗಳಿಗೆ ಪಾಠ ಮತ್ತು ಪ್ರಯೋಗಗಳು ಲಭ್ಯವಾಗುತ್ತಿರುವದು ವಿದ್ಯಾರ್ಥಿಗಳ ಜ್ಞಾನ ವಿಕಸನಕ್ಕೆ ಹೆಚ್ಚು ಪೂರಕವಾಗಿದೆ. ಇಲ್ಲಿ ಶಿಕ್ಷಣ ಪಡೆದವರು ಸಂಬಳಕ್ಕಿಂತ ಸೇವಾ ಮನೋಭಾವದೊಂದಿಗೆ ಕಾರ್ಯ ಮಾಡಿ ಸಂತೃಪ್ತಭಾವನೆ ಹೊಂದಲಿ ಎಂದರು.ವಿಲ್ಸನ್ ಮೈಲಿ ಮಾತನಾಡಿ, ಸೇವೆ ಮಾಡಿಸಿಕೊಳ್ಳುವ ಮನೋಭಾವ ಬದಲಾಗಿ ಸೇವೆ ಮಾಡುವ ಮನೋಭಾವ ಹೆಚ್ಚಾಗಬೇಕು. ವೇತನಕ್ಕಾಗಿ ವೃತ್ತಿ ಮಾಡುವುದಲ್ಲ ರೋಗಿಯ ಸೇವೆ ಮಾಡಿ ಧನ್ಯತಾಭಾವ ಹೊಂದಿ ಅದರಿಂದ ನಿಮ್ಮ ಭವಿಷ್ಯ ಉಜ್ವಲವಾಗುವದು ಎಂದರು.ಈ ವೇಳೆ ಸಿಎಸ್ಐ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಡಾ.ಅಜೇಯ್ ರಾಜು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ಸಾಬ ಬಬರ್ಚಿ, ಸಿ.ಎಸ್.ಐ ಆಸ್ಪತ್ರೆಯ ವ್ಯವಸ್ಥಾಪಕ ಎಸ್.ಎಚ್.ಉಳ್ಳಾಗಡ್ಡಿ, ಪ್ರಾಂಶುಪಾಲರಾದ ಬ್ಯೂಲಾ ಪ್ರಿಯದರ್ಶಿನಿ ಉಪಸ್ಥಿತರಿದ್ದರು. ರೆವರೆಂಡ್ ರೆಜಿನಾಲ್ಡಪಾಲ್ ಪ್ರಾರ್ಥಿಸಿದರು. ಮಾರ್ಲಿನ್ ಸ್ವಾಗತಿಸಿದರು. ಸಹನಾ ಪರಿಚಯಿಸಿದರು. ಪುಷ್ಪಾ ಕಂಬಳಿ ಬೈಬಲ್ ಪಠಿಸಿದರು. ರೆವರೆಂಡ್ ರೆಜಿನಾಲ್ಡಪಾಲ್ ಸಂದೇಶ ವಾಚಿಸಿದರು. ಸ್ಟೇಫಿ ವಂದಿಸಿದರು.