ಕೃಷಿಯಲ್ಲಿ ಉತ್ತಮ ಬೆಳೆ ಬೆಳೆಯಲು ಮಣ್ಣಿನ ಫಲವತ್ತತೆ ಮುಖ್ಯ: ಶ್ರೀನಿವಾಸ್ ಗೌಡ

KannadaprabhaNewsNetwork | Published : Apr 24, 2025 12:04 AM

ಸಾರಾಂಶ

ಹೆಚ್ಚಿನ ರೈತರು ತಮ್ಮ ಹಿಪ್ಪುನೇರಳೆ ತೋಟಗಳಿಗೆ ಮಣ್ಣು ಪರೀಕ್ಷೆ ಮಾಡಿಸುವುದಿಲ್ಲ. ಇದರಿಂದ ಆರೋಗ್ಯಕರ ಹಿಪ್ಪುನೇರಳೆ ಸೊಪ್ಪು ಬೆಳೆಯಲು ಸಾಧ್ಯವಾಗುವುದಿಲ್ಲ. ಶೇ.40 ರಿಂದ 50 ರಷ್ಟು ರೇಷ್ಮೆ ಹುಳು ಬೆಳೆ ಯಶಸ್ಸು ಹಿಪ್ಪುನೇರಳೆ ಆರೋಗ್ಯಕರ ಎಲೆಯನ್ನು ಅವಲಂಬಿಸಿರುತ್ತದೆ.

ಕನ್ನಡಪ್ರಭ ವಾರ್ತೆ ಹಲಗೂರು

ರೈತರು ತಮ್ಮ ಜಮೀನುಗಳಲ್ಲಿ ಉತ್ತಮ ಬೆಳೆ ಬೆಳೆಯಲು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಕೃಷಿ ಇಲಾಖೆ ಎಸ್‌ಇಒ ಶ್ರೀನಿವಾಸ್ ಗೌಡ ತಿಳಿಸಿದರು.

ವಿಶ್ವ ಭೂಮಿ ದಿನದ ಅಂಗವಾಗಿ ರೈತರ ಜಮೀನಿನಲ್ಲಿ ಮಣ್ಣಿನ ಮಹತ್ವದ ಬಗ್ಗೆ ರೈತರಿಗೆ ಹಲವು ಸಲಹೆ ನೀಡಿ ಮಾತನಾಡಿ, ಭೂಮಿಯ ಮಹತ್ವ, ಮಣ್ಣಿನ ಫಲವತ್ತತೆ ತಿಳಿದು ಬೆಳೆ ಬೆಳೆಯುವುದರಿಂದ ಉತ್ತಮ ಬೆಳೆ ಬೆಳೆದು ಲಾಭ ಗಳಿಸಬಹುದು ಎಂದರು.

ಹೆಚ್ಚಿನ ರೈತರು ತಮ್ಮ ಹಿಪ್ಪುನೇರಳೆ ತೋಟಗಳಿಗೆ ಮಣ್ಣು ಪರೀಕ್ಷೆ ಮಾಡಿಸುವುದಿಲ್ಲ. ಇದರಿಂದ ಆರೋಗ್ಯಕರ ಹಿಪ್ಪುನೇರಳೆ ಸೊಪ್ಪು ಬೆಳೆಯಲು ಸಾಧ್ಯವಾಗುವುದಿಲ್ಲ. ಶೇ.40 ರಿಂದ 50 ರಷ್ಟು ರೇಷ್ಮೆ ಹುಳು ಬೆಳೆ ಯಶಸ್ಸು ಹಿಪ್ಪುನೇರಳೆ ಆರೋಗ್ಯಕರ ಎಲೆಯನ್ನು ಅವಲಂಬಿಸಿರುತ್ತದೆ ಎಂದರು.

ಆರೋಗ್ಯಕರ ಹಿಪ್ಪುನೇರಳೆ ಎಲೆಯಪ್ರಾಮುಖ್ಯತೆಯು ಆರೋಗ್ಯಕರ ಮಣ್ಣನ್ನು ಅವಲಂಬಿಸಿರುತ್ತದೆ. ಮಣ್ಣನ್ನು ಆರೋಗ್ಯಕರವಾಗಿ ಸಕಾಲದಲ್ಲಿ ನಿರ್ವಹಿಸಿದರೆ ಉತ್ತಮ ಹಿಪ್ಪುನೇರಳೆ ಸೊಪ್ಪನ್ನು ಪಡೆಯಬಹುದು ಎಂದರು.

ರೇಷ್ಮೆ ಕೃಷಿ ಚಟುವಟಿಕೆಗಳು ಸಂಪೂರ್ಣ ಪರಸ್ಪರ ಸಂಬಂಧಿತ ನಿರ್ವಹಣಾ ಪ್ರಕ್ರಿಯೆಯಾಗಿದೆ. ರೇಷ್ಮೆ ಹುಳು ಸಾಕಾಣಿಕೆ ಯಶಸ್ಸು- ಗುಣಮಟ್ಟದ ಆರೋಗ್ಯಕರ ಕೋಕೂನ್‌ಗಳು, ಕಚ್ಚಾ ರೇಷ್ಮೆ ಉತ್ಪಾದನೆಯು ಮುಖ್ಯವಾಗಿ ಮಣ್ಣಿನ ಆರೋಗ್ಯದ ಮೇಲೆ ನಿಂತಿದೆ ಎಂದರು.

ಈ ಪ್ರದೇಶ ವ್ಯಾಪ್ತಿ ಹಲವು ರೈತರು ಮಣ್ಣಿನ ಹಲವು ವ್ಯತ್ಯಾಸಗಳಿಂದ ಬೆಳೆಗಳಿಗೆ ಬೇರು ಕೊಳೆ ರೋಗ ಹೆಚ್ಚುತ್ತಿದೆ. ಶಿಫಾರಸ್ಸು ಮಾಡದ ಅಧಿಕಾ ಕೀಟನಾಶಕಗಳ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ ಆದ್ದರಿಂದ ರೈತರು ನಿಯಮಿತವಾಗಿ ಮಣ್ಣನ್ನು ಪರೀಕ್ಷಿಸಬೇಕು ಎಂದು ಸಲಹೆ ನೀಡಿದರು.ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ರೈತರು ಮೈಸೂರಿನ ಕೇಂದ್ರ ರೇಷ್ಮೆ ಕೃಷಿ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ನಿಯಮಿತ ಮಣ್ಣು ಪರೀಕ್ಷೆ ಮಾಡಿಸಬೇಕು. ರೇಷ್ಮೆ ಕೃಷಿ ರೈತರಿಗೆ ಉಚಿತ ಮಣ್ಣು ಪರೀಕ್ಷೆ ಮಾಡಲಾಗುತ್ತಿದೆ. ಜೊತೆಗೆ ಮಣ್ಣಿನ ಆರೋಗ್ಯ ಕಾರ್ಡ್‌ಗಳು ಎಂದು ರೈತರಿಗೆ ಪರಿಹಾರ ಕ್ರಮಗಳನ್ನು ನೀಡುವ ಮೂಲಕ ಮಣ್ಣಿನ ಕೊರತೆ ಮತ್ತು ಮಣ್ಣು ಪುನಃಸ್ಥಾಪನೆಗೆ ಶಿಫಾರಸ್ಸು ಮಾಡಲಾಗುತ್ತಿದೆ ಎಂದರು.

ಶಿಫಾರಸ್ಸ ಮಾಡಲಾದ ಕೀಟನಾಶಕಗಳನ್ನು ಬಳಸಬೇಕು. ಸಾವಯವ ಕೃಷಿ ಗೊಬ್ಬರ ಬಳಕೆ, ಬೆಳೆಗಳಿಗೆ ಬಾಧೆ/ಸೋಂಕನ್ನು ಮೊದಲೇ ಪತ್ತೆಹಚ್ಚಲು ಕ್ರಮ ವಹಿಸಬೇಕು. ರೈತರು ಮದ್ದೂರು ಸಿಎಸ್‌ಬಿ-ಸಂಶೋಧನಾ ವಿಸ್ತರಣಾ ಕೇಂದ್ರ ಉಪ ಘಟಕ ವಿಜ್ಞಾನಿ ಡಾ. ಶಿವಕುಮಾರ್ ಅವರ ತಾಂತ್ರಿಕ ಮಾರ್ಗದರ್ಶನ ಪಡೆಯುವಂತೆ ತಿಳಿಸಿದರು.

Share this article