ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ನರೇಗಾ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕ ಸೇರಬೇಕಿದ್ದ ಕಸ ರಸ್ತೆಯ ಅಕ್ಕಪಕ್ಕ ತಗ್ಗು ಗುಂಡಿಗಳ ಪಾಲಾಗುತ್ತಿದೆ. ಹಳ್ಳದ ದಡದಲ್ಲಿ ಹಾಕಿರುವ ಪ್ಲಾಸ್ಟಿಕ್ ಹಾಗೂ ವಿಷಯುಕ್ತ ತ್ಯಾಜ್ಯ ಮಳೆ ನೀರಿನೊಂದಿಗೆ ನದಿ ಪಾಲಾಗುತ್ತಿದೆ.ತಾಲೂಕಿನಲ್ಲಿ 26 ಗ್ರಾಮ ಪಂಚಾಯಿತಿಗಳಿವೆ. ಹಗರನೂರು, ಹಿರೇಹಡಗಲಿ, ಮೈಲಾರ, ಹೊಳಲು, ನವಲಿ, ಸೋವೇನಹಳ್ಳಿ, ಕುರುವತ್ತಿ ಮತ್ತು ಕತ್ತೆಬೆನ್ನೂರು ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಉಳಿದಂತೆ ಬೀರಬ್ಬಿ ಕಾಮಗಾರಿ ಪ್ರಗತಿಯಲ್ಲಿದೆ. ನಂದಿಹಳ್ಳಿ, ಹಿರೇಮಲ್ಲನಕೆರೆ, ಹೊಳಗುಂದಿ ಮತ್ತು ಮಕರಬ್ಬಿಯಲ್ಲಿ ಘಟಕ ನಿರ್ಮಿಸಲು ಈ ಬಾರಿ ಟೆಂಡರ್ ಕರೆಯಲಾಗಿದೆ. ಉಳಿದ 13 ಗ್ರಾಪಂಗಳ ವ್ಯಾಪ್ತಿಯಲ್ಲಿ ಘಟಕ ನಿರ್ಮಾಣಕ್ಕೆ ಸರ್ಕಾರದ ಜಾಗ ಇದ್ದರೂ, ಗ್ರಾಪಂಗೆ ನೀಡಲು ಜಿಲ್ಲಾಡಳಿತ ಮೀನ-ಮೇಷ ಎಣಿಸುತ್ತ, ಸರ್ಕಾರದ ಜಾಗವೇ ಇಲ್ಲ ಎಂಬ ಸಬೂಬು ಹೇಳುತ್ತಿದೆ.
ಉದ್ದೇಶವೇ ಮೂಲೆಗುಂಪುಮನೆ, ಹೋಟೆಲ್ ಮತ್ತು ಅಂಗಡಿಗಳ ಒಣ ಹಾಗೂ ಹಸಿ ಕಸವನ್ನು ಪಂಚಾಯಿತಿ ವಾಹನಕ್ಕೆ ನೀಡಿ ಸ್ವಚ್ಛತೆ ಕಾಪಾಡಬೇಕಿತ್ತು. ಆದರೆ, ಇತ್ತ ಜನ ಹಸಿ ಹಾಗೂ ಒಣ ಕಸ ಬೇರ್ಪಡಿಸುವ ಗೋಜಿಗೆ ಹೋಗದೆ ಎಲ್ಲ ಕಸವನ್ನು ವಾಹನದಲ್ಲಿ ಹಾಕುತ್ತಾರೆ. ಆ ಕಸವನ್ನು ಗ್ರಾಪಂ ಸಿಬ್ಬಂದಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕಬೇಕಿದೆ. ಘಟಕದಲ್ಲಿ ಸಂಗ್ರಹವಾಗುವ ಕಸವನ್ನು ಬೇರ್ಪಡಿಸಲು ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರಿಗೆ ಕೆಲಸ ನೀಡಬೇಕೆಂಬ ನಿಯಮವಿದೆ. ಆದರೆ, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಕಸ ಹಾಕಿ ಕಸಕ್ಕೆ ಬೆಂಕಿ ಹಚ್ಚಿ ಪರಿಸರವನ್ನೇ ಹಾಳುತ್ತಿದ್ದಾರೆ.
ಈಗಾಗಲೇ ನಿರ್ಮಾಣಗೊಂಡ 8 ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ, ಕಸ ಬೇರ್ಪಡಿಸಲು ಮಹಿಳಾ ಸ್ವ ಸಹಾಯ ಸಂಘದ, ಮಹಿಳೆಯರು ನಿರಾಸಕ್ತಿ ತೋರುತ್ತಿದ್ದಾರೆ. ಕಸದಿಂದ ಸಾವಯವ ಗೊಬ್ಬರ ಮಾಡಬೇಕಿತ್ತು. ಕೆಲ ಬಾಟಲ್, ಪ್ಲಾಸ್ಟಿಕ್ ಬೇರ್ಪಡಿಸಿ ಗುಜರಿ ಅಂಗಡಿಗಳಿಗೆ ಮಾರಾಟ ಮಾಡಬೇಕು. ಘಟಕದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 6 ತಿಂಗಳ ವರೆಗೂ ಆಯಾ ಗ್ರಾಪಂ ವತಿಯಿಂದ ವೇತನ ನೀಡಬೇಕಿತ್ತು. ಆದರೆ ಎಲ್ಲವೂ ಮೂಲೆಗುಂಪಾಗಿದೆ.ಗ್ರಾಮೀಣ ಪ್ರದೇಶ ಕೆಲವೆಡೆಗಳಲ್ಲಿ ನಿಮ್ಮ ಬಕೀಟೂ ಬೇಡ, ನಮ್ಮ ಕಸನೂ ನಿಮಗೆ ಕೊಡುವುದಿಲ್ಲ. ಅದಕ್ಕೆ ತೆರಿಗೆ ಹಣನೂ ಕಟ್ಟುವುದಿಲ್ಲ ಎಂದು ಜನ ವಿರೋಧ ವ್ಯಕ್ತಪಡಿಸಿದ್ದಾರೆ.
2 ವರ್ಷದಿಂದ ತೆರಿಗೆ ಸಂಗ್ರಹಿಸಿಲ್ಲಕಳೆದ 2 ವರ್ಷಗಳ ಕಾಲ ಬಳಕೆದಾರರಿಂದ ಘನತ್ಯಾಜ್ಯವನ್ನು ಸಂಗ್ರಹಿಸುತ್ತಿದೆ. ಆರಂಭದಲ್ಲಿ ಸ್ವ ಸಹಾಯ ಸಂಘದ ಮಹಿಳೆಯರಿಗೆ 6 ತಿಂಗಳ ಕಾಲ ಗ್ರಾಪಂ ವೇತನ ನೀಡಬೇಕೆಂಬ ಒಪ್ಪಂದವಿದೆ. ನಂತರದಲ್ಲಿ ಆ ಮಹಿಳೆಯರು ಪ್ರತಿ ಮನೆಯಿಂದ ತಿಂಗಳಿಗೆ ₹30, ಅಂಗಡಿಗಳಿಂದ ₹50 ತೆರಿಗೆ ಸಂಗ್ರಹಿಸಿ ಕಸದ ವಾಹನಕ್ಕೆ ಇಂಧನ ಹಾಕಿಸಿ ನಂತರದಲ್ಲಿ ತಮ್ಮ ವೇತನ ಪಡೆದುಕೊಳ್ಳಬೇಕಿದೆ. ಆದರೆ, ಯಾವ ಗ್ರಾಪಂನಲ್ಲಿಯೂ ಕೆಲಸ ಆಗುತ್ತಿಲ್ಲ. ವರ್ಗ-1ರಿಂದ ಬಂದ ತೆರಿಗೆ ಹಣದಲ್ಲೇ ವಾಹನಕ್ಕೆ ಇಂಧನ ಹಾಕುತ್ತಾರೆ. ವಾಹನ ದುರಸ್ತಿಗೂ ತೆರಿಗೆ ಹಣ ಬಳಸುತ್ತಾರೆ.ಪರಿಸರ ಹಾಳು
ಹೊಳಲು ಗ್ರಾಮದ ಕಸ ವಿಲೇವಾರಿ ಘಟಕಕ್ಕೆ ದಾರಿಯೇ ಇಲ್ಲ, ಕಸವನ್ನು ಹಳ್ಳದಲ್ಲಿ ಹಾಕಿದ್ದಾರೆ ಮಳೆ ನೀರಿನೊಂದಿಗೆ, ಪ್ಲಾಸ್ಟಿಕ್, ವಿಷಯುಕ್ತ ತ್ಯಾಜ್ಯ ಅಮೃತದಂತಿರುವ ನದಿ ನೀರಿಗೆ ಸೇರುತ್ತಿದೆ. ಇದರಿಂದ ಇಡೀ ಪರಿಸರವನ್ನೇ ಹಾಳುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.ಕೋಡಬಾಳ ಚಂದ್ರಪ್ಪ, ಹೊಳಲು ಗ್ರಾಮಸ್ಥ.
ವಿಲೇವಾರಿಗೆ ತಡೆ
ಕಸ ವಿಲೇವಾರಿ ಕುರಿತು ಜನ ಮತ್ತು ಸ್ಥಳೀಯ ಜನಪ್ರನಿಧಿಗಳ ಸಹಭಾಗಿತ್ವ ಬೇಕಿದೆ. ಇದಕ್ಕೆ ಅಗತ್ಯ ಸಿಬ್ಬಂದಿ ಬೇಕಿದೆ. ರಸ್ತೆ ಬದಿ ಹಾಗೂ ತಗ್ಗು ಗುಂಡಿಗಳಲ್ಲಿ ಕಸ ಹಾಕುವುದನ್ನು ತಡೆಗಟ್ಟುವ ಕೆಲಸ ಮಾಡುತ್ತೇವೆ.ಉಮೇಶ, ತಾಪಂ ಇಒ, ಹೂವಿನಹಡಗಲಿ