- ಬೆಟ್ಟದಹಳ್ಳಿ ಬಳಿ ಸ್ಕವರ್ ವಾಲ್ ಓಪನ್ ಮಾಡಿ ಕೆರೆಗೆ ಹರಿಸುತ್ತಿರುವುದಕ್ಕೆ ಪುರಸಭಾ ಸದಸ್ಯರ ಆಕ್ರೋಶಕನ್ನಡಪ್ರಭ ವಾರ್ತೆ, ಬೀರೂರು.ಕಡೂರು-ಬೀರೂರು ಅವಳಿ ಪಟ್ಟಣಗಳಿಗೆ ಭದ್ರಾ ನದಿಯಿಂದ ಕುಡಿಯುವ ನೀರೋದಗಿಸುವ ಪೈಪ್ಲೈನ್ ಗಳಿಗೆ ಕೆಲವು ರೈತರು ಕನ್ನ ಹಾಕಿ ತಮ್ಮ ತೋಟಗಳನ್ನು ಉಳಿಸಿಕೊಳ್ಳುತ್ತಿರುವುದು ಯಾವ ನ್ಯಾಯ. ಕುಡಿವ ನೀರನ್ನು ಕದಿಯುತ್ತಿರುವವರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಕಾಂಗ್ರೆಸ್ ಪುರಸಭಾ ಸದಸ್ಯ ಬಿ.ಕೆ.ಶಶಿಧರ್ ಪ್ರಶ್ನಿಸಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ ಜೀವಜಲ ರಕ್ಷಿಸಿ ಸಾರ್ವಜನಿಕರಿಗೆ ನೀಡಲೆಂದು ಜಲಾಶಯಗಳಲ್ಲಿ ಇಂತಿಷ್ಟು ನೀರು ಮೀಸಲಿಟ್ಟು ಬೇಸಿಗೆ ದೂಡಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಖಾಸಗಿ ರೈತರು ತಮ್ಮ ತೋಟ ಉಳಿಸಿಕೊಳ್ಳಲು ಕುಡಿಯುವ ನೀರಿಗೆ ಕನ್ನ ಹಾಕಿದರೆ ಹೇಗೆ ಎಂದರು.ಬೀರೂರು ಪುರಸಭೆ 23ವಾರ್ಡಗಳನ್ನು ಹೊಂದಿದ್ದು, ಪ್ರತಿ ದಿನ 3ಎಂ.ಎಲ್.ಡಿ ನೀರು ಭದ್ರಾ ನದಿಯಿಂದ ಸಿಗಬೇಕಾಗಿದೆ. ಆದರೆ ಸದ್ಯ ಬೇಸಿಗೆಯಾಗಿರುವುದರಿಂದ ನಮಗೆ 2ಎಂ.ಎಲ್.ಡಿ ಮಾತ್ರ ಲಬ್ಯವಾಗುತ್ತಿದ್ದು, ಅದರಲ್ಲೆ 16 ವಾರ್ಡಗಳಿಗೆ ನೀರನ್ನು ವಾರದ ೫ ದಿನಗಳಿಗೊಮ್ಮೆ ನೀಡಲಾಗುತ್ತಿದೆ. ಮಾರ್ಗದ ಕ್ಯಾಂಪ್ ನಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗದ ಕಾರಣ 7ವಾರ್ಡಗಳಿಗೆ ಟ್ಯಾಂಕರ್ ಮೂಲಕ ಮತ್ತು ಬೋರ್ ನೀರನ್ನು ನೀಡುತ್ತಿದೆ. ನೀರಿಗಾಗಿ ಪ್ರತಿ ವಾರ್ಡಗಳಲ್ಲಿ ಜನ ಹಾಹಾಕಾರ ಎದುರಿಸುತ್ತಾ, ಪುರಸಭಾ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಂತಹದರಲ್ಲಿ ಕುಡಿಯುವ ನೀರನ್ನು ಕದ್ದು ತೋಟ ಉಳಿಸಿಕೊಳ್ಳುವುದು ಸರಿಯೇ. ಜನ ನೀರು ಸಿಕ್ಕಿ ಬದುಕಿದ್ರೆ ಸಾಕು ಎನ್ನುವ ಸಮಯದಲ್ಲಿ ಇಂತಹ ಹೇಯ ಕೃತ್ಯ ಇದು ಎಂದರು.ಈ ಹಿಂದೆ ಸಹ ಲಕ್ಕವಳ್ಳಿ ಜಾಕ್ ವೆಲ್ ನಿಂದ ಬಂದಿರುವ ಪೈಪ್ ಲೈನ್ ಬೀರೂರು ಕಡೆಗೆ ಬಂದಿರುವ ದುಗ್ಲಾಪುರ, ಅಮೃತಾ ಪುರದ ರೈತರು ವಾಲ್ ಗಳನ್ನು ಒಡೆದು ಮೋಟಾರ್ ಬಳಸಿ ಕದ್ದು ನೀರು ಹಾಯಿಸಿಕೊಳ್ಳುತ್ತಿದ್ದರು. ಇದನ್ನು ತಡೆಗಟ್ಟುವಂತೆ ಹಿಂದಿನ ಮುಖ್ಯಾಧಿಕಾರಿ ಮತ್ತು ಪುರಸಭಾ ಸದಸ್ಯರು ತರೀಕೆರೆ ಪೊಲೀಸ್ ಉಪವಿಭಾಗಕ್ಕೆ ದೂರು ನೀಡಿದ್ದರು.ಆಗ ಅವರು ರೈತರನ್ನು ಕರೆಸಿ ಅವರಿಗೆ ತಿಳುವಳಿಕೆ ಹೇಳಿ ಕಳುಹಿಸಿದ್ದರು. ಆದರೆ ಪದೇ ಪದೇ ಬರಗಾಲದ ಹಣೆ ಪಟ್ಟಿ ಹೊತ್ತಿರುವ ಕಡೂರು- ಬೀರೂರಿನ ಕುಡಿಯುವ ನೀರನ್ನು ಕದಿಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಮತ್ತು ತರೀಕೆರೆ ಉಪವಿಭಾಧಿಕಾರಿ ಇಂತಹ ರೈತರ ವಿರುದ್ಧ ಕಠಿಣ ಕ್ರಮ ಕೈಗೊಂಡು ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಸಕ ಆನಂದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.