ಸೋಮವಾರಪೇಟೆ: ನೈಜ ಫಲಾನುಭವಿಗಳ ವೃದ್ದಾಪ್ಯವೇತನ, ವಿಧವಾ ವೇತನ, ಅಂಗವಿಕಲರ ಮಾಸಾಶನ ತಡೆಹಿಡಿಯುವ ಮೂಲಕ ಜನವಿರೋಧಿ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವಮೋರ್ಚಾ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನವನ್ನು ನಂಬಿಕೊಂಡಿರುವ ಹೆಚ್ಚಿನ ವೃದ್ದರಿಗೆ ಕಳೆದ ಹಲವು ತಿಂಗಳಿನಿಂದ ಮಾಸಾಶನ ಬರುತ್ತಿಲ್ಲ. ಮಾಸಶನವನ್ನೇ ನಂಬಿಕೊಂಡಿದ್ದ ವೃದ್ಧರು ಉಪವಾಸ ಮಾಡುವಂತಾಗಿದೆ. ಮಾತ್ರೆ, ಔಷಧಕ್ಕೆ ಹಣವಿಲ್ಲದೆ ರೋಗಗಳು ಉಲ್ಬಣವಾಗುತ್ತಿರುವ ಬಗ್ಗೆ ಅನೇಕರು ಸಂಕಷ್ಟ ಹೇಳಿಕೊಂಡಿದ್ದಾರೆ. ಆಹಾರವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳನ್ನು ನೀಡಿ ಬಡವರಿಗೆ ರೇಷನ್ ನಿರಾಕರಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ತಾಲೂಕು ಘಟಕದ ಅಧ್ಯಕ್ಷ ಮೋಹಿತ್, ಮಂಡಲ ಅಧ್ಯಕ್ಷ ಗೌತಮ್ ಗೌಡ, ಮುಖಂಡರಾದ ಚಂದ್ರಶೇಖರ್ ಹೆರೂರು, ದರ್ಶನ್ ಜೋಯಪ್ಪ, ಕವಿತಾ ವಿರೂಪಾಕ್ಷ, ತಂಗಮ್ಮ, ಮಂಜುಳಾ ಸುಬ್ರಮಣಿ, ಸವಿತಾ ಸತೀಶ್ ಇದ್ದರು.