ಸೋಮವಾರಪೇಟೆ: ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

KannadaprabhaNewsNetwork | Published : Jul 18, 2024 1:35 AM

ಸಾರಾಂಶ

ರಾಜ್ಯ ಸರ್ಕಾರದ ಗ್ಯಾರಂಟಿ ಜೋಜನೆಗಳ ಪ್ರಗತಿ ಪರಿಶೀಲನಾ ಸಭೆ ಸಮಿತಿ ಅಧ್ಯಕ್ಷ ಕಾಂತರಾಜು ಅಧ್ಯಕ್ಷತೆಯಲ್ಲಿಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಸಭೆಯಲ್ಲಿ ಸಮಿತಿ ಸದಸ್ಯರು ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳು ಇದ್ದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ರಾಜ್ಯ ಸರ್ಕಾರದ ಗ್ಯಾರಂಟಿ ಜೋಜನೆಗಳ ಪ್ರಗತಿ ಪರಿಶೀಲನಾ ಸಭೆ ಸಮಿತಿ ಅಧ್ಯಕ್ಷ ಕಾಂತರಾಜು ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಮೆಹಬೂಬ ಮಾತನಾಡಿ, ಶಕ್ತಿ ಯೋಜನೆಯಲ್ಲಿ 2023 ರಿಂದ 60,77,137 ಮಹಿಳೆಯರು ಸಂಚರಿದಿದ್ದು, ಸರ್ಕಾರದಿಂದ 24,14,00,900 ರು. ಹಣ ಸಂದಾಯವಾಗಿದೆ. ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ 16 ಸಾವಿರ ಮಹಿಳೆಯರು ಶಕ್ತಿ ಯೋಜನನೆಯಲ್ಲಿ ಸಂಚರಿಸುತ್ತಾರೆ ಎಂದರು. ಹಂಡ್ಲಿ ಗ್ರಾಮದ ನಾಗರಾಜು ಮಾತನಾಡಿ, ಬಸ್ ಚಾಲಕರು ಮಾರ್ಗದಲ್ಲಿ 5 ರಿಂದ 8 ಮಹಿಳಾ ಪ್ರಯಾಣಿಕರು ನಿಂತು ಬಸ್ ನಿಲುಗಡೆಗೆ ಪ್ರಯತ್ನಿಸಿದರೂ ಬಸ್ ನಿಲ್ಲಿಸುವುದಿಲ್ಲ ಎಂದು ಮಹಿಳೆಯರು ದೂರುತ್ತಿರುವ ಬಗ್ಗೆ ಅಧಿಕಾರಿಯ ಗಮನಸೆಳೆದರು. ಮುಂದಿನ ದಿನಗಳಲ್ಲಿ ಹೀಗಾಗದ ಹಾಗೆ ನೋಡಿಕೊಳ್ಳುವುದಾಗಿ ಅಧಿಕಾರಿ ಸಭೆಗೆ ತಿಳಿಸಿದರು.

ಆಹಾರ ಇಲಾಖೆಯ ಯಶಸ್ವಿನಿ ಮಾತನಾಡಿ, ತಾಲೂಕಿನಲ್ಲಿ 23,119 ಅರ್ಹ ಬಿಪಿಎಲ್ ಕಾರ್ಡ್ ಗಳಿದ್ದು, 22,767 ಕಾರ್ಡ್ ದಾರರಿಗೆ ಹಣ ಸಂದಾಯವಾಗುತ್ತಿದೆ. ಕೆಲವರು ಇಕೆವೈಸಿ ಮಾಡಿಸದವರಿಗೆ ಹಣ ಬಂದಿರುವುದಿಲ್ಲ ಎಂದು ಮಾಹಿತಿ ನೀಡಿದರು.

ಕೆಲವು ನ್ಯಾಯ ಬೆಲೆ ಅಂಗಡಿಗಳು ತಮಗೆ ಅನುಕೂಲವಾದ ಸಮಯಕ್ಕೆ ಅಂಗಡಿ ತೆರೆದು ಅಕ್ಕಿ ವಿತರಣೆ ಮಾಡುತ್ತಿರುವುದರಿಂದ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಕೇಳಿದರೆ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಕಾರ್ಮಿಕರಿಗೆ ಅನುಕೂಲವಾಗುವಂತೆ ವ್ಯವಹರಿಸುವಂತೆ ಸೂಚನೆ ನೀಡಬೇಕೆಂದು ಸದಸ್ಯೆ ಶೀಲಾ ಡಿಸೋಜ ಹೇಳಿದರು.

ಸೆಸ್ಕ್ ಇಲಾಖೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 28,364 ಜನರು ಹೆಸರು ನೊಂದಾಯಿಸಿಕೊಂಡು ಸರ್ಕಾರದ ಲಾಭ ಪಡೆಯುತ್ತಿದ್ದಾರೆ. 2332 ಜನರು ಇಂದಿಗೂ ನೋಂದಾಯಿಸಿಕೊಂಡಿಲ್ಲ. ಕೆಲವು ಕಾಫಿ ತೋಟದ ಮಾಲೀಕರು ಲೈನ್ ಮನೆಯ ವಿದ್ಯುತ್ ಬಿಲ್ಲನ್ನು ತಾವೇ ಪಾವತಿಸುತ್ತಿದ್ದಾರೆ ಎಂದು ಇಲಾಖೆಯ ಅಧಿಕಾರಿ ಗುಣಶೇಖರ್ ಮಾಹಿತಿ ನೀಡಿದರು.

ಸಮಿತಿ ಅಧ್ಯಕ್ಷ ಕಾಂತರಾಜ್ ಮಾತನಾಡಿ, ಮುಂದಿನ ಸಭೆಯನ್ನು ಇನ್ನೂ ವ್ಯವಸ್ಥಿತವಾಗಿ ನಡೆಸಬೇಕಿದೆ. ಜಿಲ್ಲೆಗೆ ಮಳೆಗಾಲದಲ್ಲಾದರೂ ಸೀಮೆಎಣ್ಣೆ ನೀಡುವಂತೆ ಸಭೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಿತು. ಇಲ್ಲಿ ಆದ ಎಲ್ಲ ನಿರ್ಣಯಗಳನ್ನು ಸರ್ಕಾರಕ್ಕೆ ಕಳಿಸಿಕೊಡಲಾಗುವುದು. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ತೆರಳಿ ಸಂಬಂಧಿಸಿದ ಸಚಿವರೊಂದಿಗೆ ಯೋಜನೆಗಳು ಕಟ್ಟುನಿಟ್ಟಾಗಿ ಅನುಷ್ಠಾನವಾಗುವಂತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ವೀರಣ್ಣ ಮಾತನಾಡಿ, ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆ ಸರಿಯಾದ ರೀತಿಯಲ್ಲಿ ಅನುಷ್ಠಾನವಾಗುವ ರೀತಿಯಲ್ಲಿ ನೋಡಿಕೊಳ್ಳಬೇಕು. ಅದರಲ್ಲಿ ಯಾವುದೇ ಲೋಪದೋಷವಾದರೂ ಸಭೆಯಲ್ಲಿ ತಿಳಿಸುವುದರೊಂದಿಗೆ, ಸರ್ಕಾರದ ಯೋಜನೆಗಳು ಸರಿಯಾಗಿ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕೆಂದರು.

ಸಭೆಯಲ್ಲಿ ಸಮಿತಿ ಸದಸ್ಯರು ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳು ಇದ್ದರು.

Share this article