ಮಂಡ್ಯ ಜಿಲ್ಲೆಯಲ್ಲಿ ಶೀಘ್ರ ಶಾಶ್ವತ ಜೆಡಿಎಸ್ ಪಕ್ಷ ಕಚೇರಿ ಪ್ರಾರಂಭ : ನಿಖಿಲ್ ಕುಮಾರಸ್ವಾಮಿ

KannadaprabhaNewsNetwork | Updated : Jul 28 2024, 12:52 PM IST

ಕುಮಾರಣ್ಣ ಯಾವತ್ತು ಸ್ಪರ್ಧೆ ಬಗ್ಗೆ ಗೊತ್ತಾಗುತ್ತಿದ್ದಂತೆ ಆಗ ಬದಲಾವಣೆ ಆಯ್ತು. ನನ್ನ ಚುನಾವಣೆ ಸೋಲು ಮರೆಯಲು ಎಂದಿಗೂ ಸಾಧ್ಯವಿಲ್ಲ. ಭಗವಂತನ ಆಶೀರ್ವಾದ ಕುಮಾರಣ್ಣ ಕೇಂದ್ರ ಸಚಿವರಾಗಿದ್ದಾರೆ. ಕುಮಾರಣ್ಣ ಅವರಿಗೆ ಪ್ರಧಾನಿ ಮೋದಿ ಸಚಿವ ಸ್ಥಾನ ನೀಡಿ ಗೌರವ ಕೊಟ್ಟಿದ್ದಾರೆ.

ಮಂಡ್ಯ: ಜಿಲ್ಲೆಯ ಜನರು, ಪಕ್ಷದ ಕಾರ್ಯಕರ್ತರ ಸಮಸ್ಯೆ ಕೇಳಲು ಶಾಶ್ವತವಾಗಿ ಜೆಡಿಎಸ್ ಕಚೇರಿಯನ್ನು ಆದಷ್ಟು ಆರಂಭಿಸಲಾಗುವುದು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ನಗರದ ಖಾಸಗಿ ಸಮುದಾಯ ಭವನದಲ್ಲಿ ಮೈಸೂರು ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣ ಸಿಬಿಐಗೆ ವಹಿಸಲು ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಪ್ರತಿ ವಾರ ನಿಮ್ಮ ಜೊತೆ ಇರುತ್ತೇನೆ. ಪಕ್ಷದ ಕಚೇರಿಯಲ್ಲಿ ಕುಳಿತು ನಿಮ್ಮ ಕಷ್ಟ ಕೇಳುತ್ತೇನೆ. ಈಗಾಗಲೇ ಕೊಟ್ಟಿರುವ ಅರ್ಜಿಗೆ ಪರಿಹಾರ ಸಿಗುತ್ತದೆ. ನಿಮ್ಮ ಸಹಕಾರ ಆಶೀರ್ವಾದ ನನ್ನ ಮೇಲೆ ಇರಲಿ. ನಿಮ್ಮ ಕಷ್ಟ ಕಾಲದಲ್ಲಿ ನಾನು ಜೊತೆಯಲ್ಲಿರುತ್ತೇನೆ ಎಂದರು.

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಇರಲ್ಲ ಅಂತ ಕಾಂಗ್ರೆಸ್ ನವರು ಹೇಳಿದ್ದರು. ಆದರೆ, ಜಿಲ್ಲೆಯ ಜನರ ಆಶೀರ್ವಾರದಿಂದ ಕುಮಾರಣ್ಣ ಅತಿ ಹೆಚ್ಚು ಅಂತರದಲ್ಲಿ ಗೆಲ್ಲುವು ಸಾಧಿಸಿದ್ದಾರೆ ಎಂದರು.

ಕುಮಾರಣ್ಣ ಯಾವತ್ತು ಸ್ಪರ್ಧೆ ಬಗ್ಗೆ ಗೊತ್ತಾಗುತ್ತಿದ್ದಂತೆ ಆಗ ಬದಲಾವಣೆ ಆಯ್ತು. ನನ್ನ ಚುನಾವಣೆ ಸೋಲು ಮರೆಯಲು ಎಂದಿಗೂ ಸಾಧ್ಯವಿಲ್ಲ. ಭಗವಂತನ ಆಶೀರ್ವಾದ ಕುಮಾರಣ್ಣ ಕೇಂದ್ರ ಸಚಿವರಾಗಿದ್ದಾರೆ. ಕುಮಾರಣ್ಣ ಅವರಿಗೆ ಪ್ರಧಾನಿ ಮೋದಿ ಸಚಿವ ಸ್ಥಾನ ನೀಡಿ ಗೌರವ ಕೊಟ್ಟಿದ್ದಾರೆ ಎಂದು ಹೇಳಿದರು.

ಕುಮಾರಣ್ಣನಿಗೆ ಕನ್ನಡ ಭಾಷೆಯ ಮೇಲೆ ಗೌರವವಿದೆ. ಜಿಲ್ಲೆಯ ಅಭಿವೃದ್ಧಿಗೆ ಈಗಾಗಲೇ ಚಾಲನೆ ಕೊಟ್ಟಿದ್ದಾರೆ. ವಾರದಲ್ಲಿ ಒಂದು ದಿನ ತಂದೆಯವರು ಜಿಲ್ಲೆಗೆ ಬರುತ್ತಾರೆ. ಅವರ ಅನುಪಸ್ಥಿತಿಯಲ್ಲಿ ನಾನು ಜಿಲ್ಲೆಯಲ್ಲಿ ನಿಮ್ಮ ಜೊತೆಯಲ್ಲಿರುತ್ತೇನೆ. ಎಂಪಿ ಕಚೇರಿಯಲ್ಲಿ ಕುಳಿತು ಸಾರ್ವಜನಿಕರ ಸಮಸ್ಯೆ ಕೇಳುತ್ತೇನೆ ಎಂದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹಗರಣಗಳು ಬಯಲಿಗೆ ಬಂದಿವೆ. ಈ ಹಿಂದೆ ಬಿಜೆಪಿ ವಿರುದ್ಧ 40% ಆರೋಪ ಮಾಡಿದ್ದ ಕಾಂಗ್ರೆಸ್ ಪಕ್ಷ ಈಗ ತಾನೇ ಹಗರಣದಲ್ಲಿ ಸಿಲುಕಿದೆ. ವಾಲ್ಮೀಕಿ ನಿಗಮದ 187 ಕೋಟಿ ರು. ಹಣ ಹಗರಣ ನಮ್ಮ ಕಣ್ಣ ಮುಂದೆಯೇ ಇದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗಮದಲ್ಲಿ ಕೇವಲ 87 ಕೋಟಿ ಅಂತ ಹೇಳಿ ಅವರೇ ಹಗರಣ ನಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸಾರ್ವಜನಿಕರು ಕಟ್ಟುವ ಹಣವನ್ನು ಸರ್ಕಾರದ ಅಧಿಕಾರಿಗಳು, ಸಚಿವರು ದುರುಪಯೋಗ ಪಡಿಸಿಕೊಂಡಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯವನ್ನು ಓಟ್ ಬ್ಯಾಂಕ್ ಗಾಗಿ ಗ್ಯಾರಂಟಿಗಳಿಗೆ ಬಳಕೆ ಮಾಡಿದ್ದಾರೆ. ಮೈಸೂರು ಮುಡಾ ಹಗರಣ ವಿಚಾರವಾಗಿ ಮಾತನಾಡಲು ಸದನದಲ್ಲಿ ಅವಕಾಶ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಲಿನ ಪ್ರೋತ್ಸಾಹ ಧನ 1200 ಕೋಟಿಯನ್ನು ರೈತರಿಗೆ ಕೊಟ್ಟಿಲ್ಲ. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಡೆಂಘೀಯಿಂದ ಜನರು ಬಳಲುತ್ತಿದ್ದಾರೆ. ನಿಯಂತ್ರಣ ಮಾಡುತ್ತಿಲ್ಲ. ಈ ಎಲ್ಲಾ ಹಗರಣವನ್ನು ಕಲೆ ಹಾಕಿ ರಾಜ್ಯದ ಜನರ ಕಣ್ಣು ತೆರೆಸುವ ಕೆಲಸ ಮಾಡುತ್ತೇವೆ ಎಂದರು.

ಬಿಜೆಪಿ-ಜೆಡಿಎಸ್ ಜೊತೆಯಾಗಿ ಹೋರಾಟ ಮಾಡುತ್ತದೆ. ಕೇಂದ್ರ ಸಚಿವ ಕುಮಾರಣ್ಣ ರಾತ್ರಿ ಬೆಂಗಳೂರಿಗೆ ಬರುತ್ತಾರೆ. ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡುತ್ತಾರೆ. ಪಾದಯಾತ್ರೆ ಬಗ್ಗೆ ಸಲಹೆ ನೀಡಲಿದ್ದಾರೆ. ಶೀಘ್ರವಾಗಿ ದಿನಾಂಕ ಬಿಡುಗಡೆ ಮಾಡುತ್ತೇವೆ. ಮುಂದೆ ಸರ್ಕಾರದ ವಿರುದ್ಧ ಸಾಕಷ್ಟು ದೊಟ್ಟ ಮಟ್ಟದ ಹೋರಾಟಕ್ಕೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಸುರೇಶ್ ಗೌಡ, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ರಾಮಚಂದ್ರು, ಜಿಪಂ ಮಾಜಿ ಸದಸ್ಯರಾದ ವಿಜಯಾನಂದ, ಸಿ.ಅಶೋಕ್ , ಸಿದ್ದರಾಮೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.