ದಕ್ಷಿಣ ಉಪ ಸಮರ: ಬಿಜೆಪಿ ಗೆಲುವೇ ಗುರಿ

KannadaprabhaNewsNetwork |  
Published : Mar 16, 2026, 02:00 AM IST
15ಕೆಡಿವಿಜಿ1-ದಾವಣಗೆರೆಯಲ್ಲಿ ಭಾನುವಾರ ಸುದ್ದಿಗೋಷ್ಟಿಯ ನಂತರ ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು, ಮುಖಂಡರು, ಕಾರ್ಯಕರ್ತರು ಒಬ್ಬರಿಗೊಬ್ಬರು ಕೈಜೋಡಿಸುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದರು. ...............15ಕೆಡಿವಿಜಿ2-ದಾವಣಗೆರೆಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು, ಮುಖಂಡರು ಒಬ್ಬರಿಗೊಬ್ಬರು ಕೈಜೋಡಿಸುವ ಮೂಲಕ ಒಗ್ಗಟ್ಟಿನ ಸಂದೇಶ ಸಾರಿದರು. ................15ಕೆಡಿವಿಜಿ3-ದಾವಣಗೆರೆಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಬಿ.ಜಿ.ಅಜಯಕುಮಾರ, ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ, ದೇವರಮನಿ ಶಿವಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸಿ, ದಕ್ಷಿಣ ಕ್ಷೇತ್ರಕ್ಕೆ ತಮ್ಮಲ್ಲಿ ಪಕ್ಷವು ಯಾರಿಗೆ ಟಿಕೆಟ್ ಕೊಟ್ಟರೂ ಸಹ ಬಿಜೆಪಿ ಗೆಲುವೇ ನಮ್ಮ ಗುರಿ ಎಂಬ ಸಂದೇಶವನ್ನು ಒಟ್ಟಾಗಿ ಒಕ್ಕೊರಲಿನಿಂದ ಸಾರಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸಿ, ದಕ್ಷಿಣ ಕ್ಷೇತ್ರಕ್ಕೆ ತಮ್ಮಲ್ಲಿ ಪಕ್ಷವು ಯಾರಿಗೆ ಟಿಕೆಟ್ ಕೊಟ್ಟರೂ ಸಹ ಬಿಜೆಪಿ ಗೆಲುವೇ ನಮ್ಮ ಗುರಿ ಎಂಬ ಸಂದೇಶವನ್ನು ಒಟ್ಟಾಗಿ ಒಕ್ಕೊರಲಿನಿಂದ ಸಾರಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಬಿ.ಜಿ.ಅಜಯಕುಮಾರ, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ಶ್ರೀನಿವಾಸ ಟಿ.ದಾಸಕರಿಯಪ್ಪ, ದೇವರಮನಿ ಶಿವಕುಮಾರ, ದಕ್ಷಿಣ ಉಪಚುನಾವಣೆಗೆ ಬಿಜೆಪಿಯಿಂದ ಸಾಮಾನ್ಯ ಕಾರ್ಯಕರ್ತನಿಗೆ ಕೊಟ್ಟರೂ ನಾವು ಅಂತಹ ಅಭ್ಯರ್ಥಿಗೆ, ಬಿಜೆಪಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ಘೋಷಿಸಿದರು.

ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ಮಾತನಾಡಿ, ಹಿರಿಯ ಶಾಸಕರಾಗಿದ್ದ ದಿವಂಗತ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆಯು ಶೀಘ್ರವೇ ಘೋಷಣೆಯಾಗಲಿದೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಿಜೆಪಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇವೆ. ಬಿಜೆಪಿಯಲ್ಲಿ 2 ಗುಂಪಿವೆ ಎಂಬುದಾಗಿ ಹೇಳುತ್ತಿದ್ದರು, ಅದಕ್ಕೆಲ್ಲಾ ಈಗ ತೆರೆ ಎಳೆದಿದ್ದೇವೆ ಎಂದರು.

ನಮ್ಮ ಪಕ್ಷದ ಯಾರಿಗೆ ಟಿಕೆಟ್ ಕೊಟ್ಟರೂ, ಬಿಜೆಪಿ ಗೆಲ್ಲಬೇಕೆಂಬ ನಿರೀಕ್ಷೆಯನ್ನು ನಾವ್ಯಾರೂ ಹುಸಿಗೊಳಿಸುವುದಿಲ್ಲ. ಶೇ.100ಕ್ಕೆ ನೂರರಷ್ಟು ಬಿಜೆಪಿಯನ್ನು ದಕ್ಷಿಣ ಉಪಚುನಾವಣೆಯಲ್ಲಿ ನಾವು ಗೆಲ್ಲಿಸುತ್ತೇವೆ. ಈಗ ದಿಢೀರನೇ ಬಂದು ಟಿಕೆಟ್ ಕೇಳುವವರು ಇಲ್ಲಿ ಯಾರೂ ಇಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ, ಪಕ್ಷಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿಕೊಂಡು ಬಂದವರೇ ಇಲ್ಲಿ ಟಿಕೆಟ್ ಕೇಳುತ್ತಿದ್ದೇವೆ. 40 ವರ್ಷದಿಂದಲೂ ಪಕ್ಷ ಕಟ್ಟಿ ಕೆಲಸ ಮಾಡಿದವರಿದ್ದಾರೆ. ಅಂತಹವರಿಗೆ ಟಿಕೆಟ್ ಕೊಡಿ ಎಂಬುದಾಗಿ ಕೇಳುತ್ತಿದ್ದೇವೆ ಎಂದು ತಿಳಿಸಿದರು.

ಪಕ್ಷದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಅಜಯಕುಮಾರ ಹೇಳಿದಂತೆ ನಾವೆಲ್ಲರೂ ಒಗ್ಗಟ್ಟಿನಿಂದಲೇ ಇದ್ದು, ಎಲ್ಲಾ ಆಕಾಂಕ್ಷಿಗಳ ಹೆಸರನ್ನು ರಾಜ್ಯ, ರಾಷ್ಟ್ರೀಯ ನಾಯಕರು ಪಡೆದಿದ್ದಾರೆ. ಯಾವುದೇ ಸಣ್ಣಪುಟ್ಟ ವ್ಯತ್ಯಾಸವೂ ಬರದಂತೆ ಕೆಲಸ ಮಾಡುತ್ತೇವೆ. ಕಾಂಗ್ರೆಸ್ಸಿನಿಂದ ಉಪಚುನಾವಣೆಗೆ ಯಾರೇ ಅಭ್ಯರ್ಥಿಯಾದರೂ ಬಿಜೆಪಿ ಗೆಲುವು, ಕಮಲದ ಗೆಲುವಾಗುವುದು ನಿಶ್ಚಿತ ಎಂದರು.

ಓಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಮುಖಂಡರಾದ ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ, ಪಿ.ಎಸ್.ಜಗದೀಶಕುಮಾರ ಪಿಸೆ, ಗುರು ಸೋಗಿ, ಪೈಲ್ವಾನ ಹನುಮಂತ, ಶಿವಾನಂದ, ಎಂ.ಎಚ್.ಶ್ರೀನಿವಾಸ, ಮಲ್ಲಪ್ಪ ಇತರರು ಇದ್ದರು.

ಜಿ.ಬಿ.ವಿನಯ್ ನಮಗೆ ಶತೃವಲ್ಲ: ಅಜಯ್

ಸ್ವಾಭಿಮಾನಿ ಬಳಗ ಜಿ.ಬಿ.ವಿನಯಕುಮಾರ ನಮಗೆ ಶತೃವಲ್ಲ. ಬಳಗ ಸ್ಥಾಪಿಸಿಕೊಂಡು, ತಮ್ಮದೇ ಪ್ರಯತ್ನ ನಡೆಸಿದ್ದಾರೆ. ಪಕ್ಷಕ್ಕೆ ಎಲ್ಲಾ ಜಾತಿ, ಜನಾಂಗದವರೂ ಬೇಕು. ಒಂದು ವೇಳೆ ವಿನಯಕುಮಾರ ಬಿಜೆಪಿಗೆ ಬಂದರೆ ಪಕ್ಷದ ವರಿಷ್ಟರು ಏನೇ ಕೊಡುವುದಿದ್ದರೂ ಮುಂದಿನ ದಿನಗಳಲ್ಲಿ ನೀಡುತ್ತಾರೆ. ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ ಶೀಘ್ರವೇ ಜನರ ಮುಂದೆ ಮಾತನಾಡಲಿದ್ದಾರೆ ಎಂದು ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಬಿ.ಜಿ.ಅಜಯಕುಮಾರ ಹೇಳಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಕಾಂಗ್ರೆಸ್ಸಿನಿಂದ ಯಾರು ಅಭ್ಯರ್ಥಿ, ಯಾರನ್ನು ಕಣಕ್ಕಿಳಿಸುತ್ತಾರೆಂಬುದು ನಮಗೆ ಮುಖ್ಯವಲ್ಲ. ನಮ್ಮ ಬಿಜೆಪಿಯಿಂದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೂ ಬರಲಿರುವ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಳ್ಳುತ್ತೇವೆ. ನಮ್ಮೆಲ್ಲಾ ಹಿರಿಯ ಮುಖಂಡರು ಸಹ ಶೀಘ್ರವೇ ಮಾಧ್ಯಮಗಳ ಮುಂದೆ ಬರಲಿದ್ದಾರೆ. ನಮ್ಮಲ್ಲಿ ಯಾವುದೇ ಬಣ, ಗುಂಪುಗಳಿಲ್ಲ. ಇರುವುದೊಂದೇ ಗುಂಪು, ಅದು ಬಿಜೆಪಿ ಗುಂಪು.

ಯಶವಂತರಾವ್ ಜಾಧವ್‌ ಬಿಜೆಪಿ ಟಿಕೆಟ್ ಆಕಾಂಕ್ಷಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೂಬಗೆರೆ ಕೆರೆಗಳಿಗೆ ವೃಷಭಾವತಿ ನೀರು ಪ್ರಸ್ತಾವನೆಗೆ ವಿರೋಧ
ವಾಯುಮಾಲಿನ್ಯ ತಡೆಗಟ್ಟಲು ಮರಗಿಡ ಬೆಳೆಸಬೇಕು