ಚಿಂಚೋಳಿ: ರೈತರು ಬೆಳೆದ ಹೆಸರು, ಉದ್ದು, ಸೋಯಾಬಿನ್ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ರೈತರು ತಾವು ಬೆಳೆದಿರುವ ಹೆಸರು, ಉದ್ದು, ಸೋಯಾಬಿನ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬಹುದು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ ಹೇಳಿದರು.
ತಾಲೂಕಿನ ಐನೋಳಿ, ಹಸರಗುಂಡಗಿ ಗ್ರಾಮಗಳ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ ಪ್ರಾರಂಭಿಸಿದ ಖರೀದಿ ಕೇಂದ್ರದಲ್ಲಿ ಸೋಯಾಬಿನ್ ಬೆಂಬಲ ಬೆಲೆಯಲ್ಲಿ ಮಾರಾಟ ವ್ಯಾಪಾರ ವಹಿವಾಟಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.ಚಿಂಚೋಳಿ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಿಂದಾಗಿ ತಾಲೂಕಿನ ರೈತರಿಗೆ ಸಾಕಷ್ಟು ಬೆಳೆ ಹಾನಿ ಉಂಟಾಗಿದೆ. ಆದರೆ, ಅಳಿದು ಉಳಿದ ಬೆಳೆಗಳನ್ನ ರಕ್ಷಿಸಿಕೊಂಡು ರೈತರು, ಹೆಸರು, ಸೋಯಾಬಿನ್ ರಾಶಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ, ರೈತರು ಬೆಳೆದ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳಿಗೆ ಅವಕಾಶ ಇಲ್ಲ. ಪಹಾಣಿಯಲ್ಲಿ ಬೆಳೆಯನ್ನು ನಮೂದಿಸಿರಬೇಕು. ಅದನ್ನು ಪರಿಗಣಿಸಲಾಗುವುದು. ರೈತ ಮಹಿಳೆಯರು ಖರೀದಿ ಕೇಂದ್ರಕ್ಕೆ ಬರಲು ಆಗದ ಸಂದರ್ಭದಲ್ಲಿ ಅವರ ಮನೆಗೆ ಹೋಗಿ ಹೆಬ್ಬೆಟ್ಟಿನ ಗುರುತು ಪಡೆದುಕೊಂಡು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳು ಸದೃಢವಾಗಿರಬೇಕಾದರೆ ರಸಗೊಬ್ಬರ, ಕೀಟನಾಶಕವ್ಯಾಪಾರ ವಹಿವಾಟು ನಡೆಯಬೇಕು. ಪ್ರತಿಕ್ವಿಂಟಲಗೆ ಹೆಸರು ರು. ೮೭೬೮, ಉದ್ದು ರು. ೭೮೩೫, ಸೋಯಾಬಿನ್ ರು. ೫೩೨೫ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ತಾಲೂಕಿನ ರೈತರ ಸೇವೆ ಮಾಡಲು ನನಗೆ ಮತ್ತೊಮ್ಮೆ ಡಿಸಿಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕಾಗಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ ಹರ್ಷ ವ್ಯಕ್ತಪಡಿಸಿದರು.
ಶ್ರೀಮಂತ ಚೇಂಗಟಾ ವಹಿಸಿದ್ದರು. ಗೋಪಾಲರಾವ ಕಟ್ಟಿಮನಿ, ಭೀಮಶೆಟ್ಟಿ ಮುರುಡಾ, ಚಿತ್ರಶೇಖರ ಪಾಟೀಲ, ಪರ್ವತಕುಮಾರ ದೇಸಾಯಿ, ಆನಂದ ಮರಪಳ್ಳಿ, ಮಾಪಣ್ಣ, ಯಲ್ಲಪ್ಪ, ಕಲ್ಲಪ್ಪ,ಶಿವಶರಣಪ್ಪ, ಲಲಿತಾಬಾಯಿ, ಶಿವರಾಜಕುಮಾರ, ರೇವಣಸಿದ್ದಪ್ಪ, ಶರಣಪ್ಪ, ಪಿತಂಬರರಾವ ಘಂಟಿ ಪಸ್ತಪೂರ ಇದ್ದರು. ಕಾರ್ಯದರ್ಶಿ ಶ್ರೀಕಾಂತ ಮರಪಳ್ಳಿ ಸ್ವಾಗತಿಸಿದರು. ನಿರ್ದೇಶಕ ಆನಂದಕುಮಾರ ಮರಪಳ್ಳಿ ವಂದಿಸಿದರು.