- ದಾವಣಗೆರೆ ನಗರ, ಜಿಲ್ಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಆದ್ಯತೆ: ನೂತನ ಎಸ್ಪಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಎಚ್. ಟೆಕ್ಕಣ್ಣವರ್ ಬುಧವಾರ ನಿರ್ಗಮಿತ ಎಸ್ಪಿ ಉಮಾ ಪ್ರಶಾಂತ ಅವರಿಂದ ಅಧಿಕಾರ ಸ್ವೀಕರಿಸಿದರು. ಉಮಾ ಪ್ರಶಾಂತ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ಡಾ.ಶೇಖರ್ ಎಚ್. ಟೆಕ್ಕಣ್ಣವರ್ ಅವರು ಪತ್ನಿ, ಮಕ್ಕಳ ಸಮೇತ ತೆರಳಿ ದರ್ಶನ ಮಾಡಿದರು. ಪೂಜೆ ಸಲ್ಲಿಸಿದ ನಂತರ ನೇರವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಧಾವಿಸಿ, ಉಮಾ ಪ್ರಶಾಂತ ಅವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಡಾ.ಶೇಖರ ಎಚ್.ಟೆಕ್ಕಣ್ಣವರ್ ನಿರ್ಗಮಿತ ಎಸ್ಪಿ ಪೂರ್ವ ವಲಯ ಐಜಿಪಿ ಡಾ.ರವಿಕಾಂತೇಗೌಡ ಅವರು ನೂತನ ಎಸ್ಪಿ ಡಾ. ಶೇಖರ್ ಟೆಕ್ಕನ್ನವರ್ ಅವರಿಗೆ ಪುಷ್ಪಗುಚ್ಛ ನೀಡಿ, ಶುಭ ಹಾರೈಸಿದರು.
ಅಧಿಕಾರ ಸ್ವೀಕಾರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಎಚ್.ಟಿ.ಶೇಖರ್ ಅವರು, ಕಾನೂನು ಸುವ್ಯಸ್ಥೆಯಲ್ಲಿ ದಾವಣಗೆರೆ ಜಿಲ್ಲೆ ಮುಂಚಿನಿಂದಲೂ ಸ್ವಚ್ಛನಗರ, ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿದೆ. ಅಂತಹ ಪರಂಪರೆ ಮುಂದುವರಿಸುವುದು ನನ್ನ ಮೊದಲ ಆದ್ಯತೆ ಎಂದರು.ಪೊಲೀಸರ ಬಗ್ಗೆ ಜನರಲ್ಲಿ ಇರುವ ಭಯವನ್ನು ದೂರ ಮಾಡಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗುವುದು. ಸರ್ಕಾರ ನಮ್ಮಿಂದ ನಿರೀಕ್ಷಿಸುವ ಸೇವೆಯನ್ನು ನಿಷ್ಠೆಯಿಂದ ಜನರಿಗೆ ಒದಗಿಸುತ್ತೇವೆ. ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರದಲ್ಲಿ ಉತ್ತಮ ಆಡಳಿತ ನೀಡಲು ಪ್ರಯತ್ನಿಸುವೆ ಎಂದು ಅವರು ಹೇಳಿದರು.
ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ಕುರಿತಂತೆ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಲು ಆದ್ಯತೆ ನೀಡುತ್ತೇವೆ. ಜಿಲ್ಲೆಯಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದೇ, ಶಾಂತಿ ಮತ್ತು ಸೌಹಾರ್ದ ಸಮಾಜ ನಿರ್ಮಾಣವೇ ನನ್ನ ಗುರಿಯಾಗಿರುತ್ತದೆ ಎಂದು ಡಾ.ಶೇಖರ್ ತಿಳಿಸಿದರು.ಡ್ರಗ್ಸ್ ಪ್ರಕರಣಗಳ ಬಗ್ಗೆ ಶಿಸ್ತುಬದ್ಧ ತನಿಖೆ ನಡೆಸುವ ಕಾರ್ಯ ಮುಂದುವರಿಸಲಾಗುವುದು. ರಾಜ್ಯದ ಇತರೆ ಭಾಗಗಳಿಂದ ದಾವಣಗೆರೆ ನಗರ, ಜಿಲ್ಲೆಗೆ ಆಗಮಿಸುವವರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುವುದು. ಡ್ರಗ್ಸ್ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣ ಬದ್ಧವಾಗಿದೆ ಎಂದು ನೂತನ ಎಸ್ಪಿ ಸ್ಪಷ್ಟಪಡಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಸೇರಿದಂತೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.- - -
(ಟಾಪ್ ಕೋಟ್ ) ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕು ನಾಗರಹಾಳ ಗ್ರಾಮದ ತಾವು ಮುಂಚೆ ಪಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೆ. 2008ರಲ್ಲಿ ಡಿವೈಎಸ್ಪಿಯಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆ ಆಗುವ ಮೂಲಕ ವೃತ್ತಿ ಜೀವನ ಆರಂಭಿಸಿದ್ದೆ. ಇಲ್ಲಿಗೆ ವರ್ಗಾವಣೆ ಆಗುವ ಮುನ್ನ ಬೆಂಗಳೂರಿನ ಇಂಟೆಲಿಜೆನ್ಸ್ ವಿಭಾಗದ ಡಿಸಿಪಿಯಾಗಿದ್ದೆ. ಇದೀಗ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ.- ಡಾ.ಶೇಖರ್ ಟೆಕ್ಕಣ್ಣವರ್, ಜಿಲ್ಲಾ ಎಸ್ಪಿ, ದಾವಣಗೆರೆ.
- - --11ಕೆಡಿವಿಜಿ12: ದಾವಣಗೆರೆ ನೂತನ ಎಸ್ಪಿ ಡಾ.ಶೇಖರ ಎಚ್. ಟೆಕ್ಕಣ್ಣವರ್ ಅವರಿಗೆ ನಿರ್ಗಮಿತ ಎಸ್ಪಿ ಉಮಾ ಪ್ರಶಾಂತ ಅವರು ಅಧಿಕಾರ ಹಸ್ತಾಂತರಿಸಿದರು.