ಬೆಳ್ತಂಗಡಿ: ಹೊಸ ವರ್ಷಾಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಬೆಂಗಳೂರಿನ ಭಕ್ತರು ವಿಶೇಷವಾಗಿ ಅಲಂಕರಿಸಿದ್ದರು. ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಬೆಂಗಳೂರಿನ ಟಿ.ವಿ.ಎಸ್. ಕಂಪನಿ ಉದ್ಯಮಿ ಗೋಪಾಲರಾವ್ ಮತ್ತು ಆನಂದಮೂರ್ತಿ ಬಳಗದವರು ಹೊಸವರ್ಷ ಆಚರಣೆ ಪ್ರಯುಕ್ತ ಬುಧವಾರ ಧರ್ಮಸ್ಥಳದಲ್ಲಿ ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ), ಅನ್ನಪೂರ್ಣ ಭೋಜನಾಲಯ, ಗೋಪುರ, ಮುಖಮಂಟಪ ಹಾಗೂ ವಿವಿಧ ಕಟ್ಟಡಗಳನ್ನು ವಿವಿಧ ಜಾತಿಯ ಹೂವುಗಳು, ಅಡಕೆ, ತೆಂಗು, ಭತ್ತದ ತೆನೆ, ಮುಸುಂಬಿ, ದಾಳಿಂಬೆ, ಕಬ್ಬು ಮೊದಲಾದ ಒಂದು ಟನ್ ಹಣ್ಣುಗಳನ್ನು ಬಳಸಿ ಅತ್ಯಾಕರ್ಷಕವಾಗಿ ಸಿಂಗರಿಸಿದ್ದರು. ಸುಮಾರು ೮೦ ಜನರ ತಂಡ ೨೦ ಲಕ್ಷ ರುಪಾಯಿ ವೆಚ್ಚದಲ್ಲಿ ಅಲಂಕಾರ ಸೇವೆಯನ್ನು ಶ್ರದ್ಧಾ-ಭಕ್ತಿಯಿಂದ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.