ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಅನಿವಾರ್ಯ ವೆಚ್ಚಗಳಿಗೆ ಹಣ ವ್ಯಹಿಸಿ ಹಾಗೂ ಐಷರಾಮಿ ವೆಚ್ಚ ನಿಯಂತ್ರಣದಲ್ಲಿಟ್ಟುಕೊಂಡರೆ ನೆಮ್ಮದಿಯ ಜೀವನ ಸಾಧ್ಯ. ಹಣ ಸಂಪಾದಿಸುವುದು ಕಲೆ, ಆದರೆ ಅದನ್ನು ಸಮರ್ಪಕವಾಗಿ ಬಳಸುವುದು ಮಹಾನ್ ಕಲೆ ಎಂದು ಆರ್ಥಿಕ ಸಾಕ್ಷರತಾ ತಜ್ಞೆ ಸಪ್ನಾ ಶೆಣೈ ಅಭಿಪ್ರಾಯಪಟ್ಟಿದ್ದಾರೆ.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ಘಟಕ ‘ಸಕ್ಷಮ ವೇದಿಕೆ’ಯ ಅಡಿಯಲ್ಲಿ ಮೂಡುಬಿದಿರೆ ಇನ್ನರ್ ವ್ಹೀಲ್ ಕ್ಲಬ್ ಹಾಗೂ ಮೂಡುಬಿದಿರೆ ಬಂಟ್ಸ್ ಮಹಿಳಾ ಸಂಘದ ಸಹಯೋಗದಲ್ಲಿ ಕಾಲೇಜಿನ ಕುವೆಂಪು ಸಭಾಭವನದಲ್ಲಿ ಬುಧವಾರ ‘ಆರ್ಥಿಕ ಅರಿವಿನ ಮೂಲಕ ಮಹಿಳೆಯರ ಬಲಪಡಿಸುವಿಕೆ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಹೆಚ್ಚಿನ ಸಮಯ ಹಣವನ್ನು ಸಂಪಾದಿಸಲು ಮತ್ತು ಖರ್ಚು ಮಾಡಲು ಕಳೆಯುತ್ತೇವೆ. ಬಹುತೇಕ ಜನರು ‘ಆದಾಯ - ಖರ್ಚು - ಉಳಿಕೆ’ ಎಂಬ ನೀತಿಯಂತೆ ಜೀವನ ಸಾಗಿಸುತ್ತಾರೆ. ಆದರೆ, ಇದು ಹೆಚ್ಚು ಆರ್ಥಿಕ ಒತ್ತಡ ತರಬಲ್ಲದು. ಬದಲಾಗಿ, ‘ಆದಾಯ - ಉಳಿಕೆ - ಖರ್ಚು’ ಎಂಬ ತತ್ವ ಅನುಸರಿಸಿದರೆ ಸುಖ ಮತ್ತು ಯಶಸ್ಸಿನ ದಾರಿ ನಮ್ಮದಾಗತ್ತದೆ ಎಂದರು.ಬಹುತೇಕ ಜನರು ತಮ್ಮ ಬಂಡವಾಳದ ಕೊರತೆ ಪೂರೈಸಲು ಸಾಲ ತೆಗೆದುಕೊಳ್ಳುತ್ತಾರೆ. ಆದರೆ, ಸಾಲವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ ಅದು ಜೀವನ ಸುಗಮಗೊಳಿಸುತ್ತದೆ, ಇಲ್ಲದಿದ್ದರೆ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಹಣ ನಿರ್ವಹಣೆಯೆ ಜೀವನ ನಿರ್ವಹಣೆ, ಹಣದ ಸಮರ್ಪಕ ನಿರ್ವಹಣೆ ಬದುಕಿಗೆ ಭದ್ರತೆ ನೀಡಬಲ್ಲದು. ಹಣಕಾಸಿನ ಸಾಕ್ಷರತೆ ಕೇವಲ ಹಣ ಸಂಪಾದಿಸುವುದನ್ನು ತಿಳಿಸುವುದು ಮಾತ್ರವಲ್ಲ, ಹಣದ ನಿರ್ವಹಣೆಯ ಪ್ರಾಮುಖ್ಯತೆ ಅರ್ಥಮಾಡಿಕೊಳ್ಳುವುದಾಗಿದೆ ಎಂದರು.
ಈ ವೇದಿಕೆ ಪರಸ್ಪರ ಸಂತೋಷಕ್ಕೆ ಮಾತ್ರ ಸ್ಪಂದಿಸದೆ, ಕಷ್ಟಗಳಿಗೂ ಮಿಡಿಯುವ ಕೆಲಸ ಮಾಡಬೇಕಿದೆ. ನಮ್ಮಲ್ಲಿ ಕೆಲಸ ನಿರ್ವಹಿಸುವರಲ್ಲಿ ಶೇ.60 ಮಹಿಳೆಯರಿದ್ದು, ನಮ್ಮ ಶಿಕ್ಷಣ ಪ್ರತಿಷ್ಠಾನದ ಉನ್ನತಿಗೆ ಅವರ ಕೊಡುಗೆ ಅಪಾರ ಎಂದರು.ಮೂಡುಬಿದಿರೆ ಬಂಟ್ಸ್ ಮಹಿಳಾ ಸಂಘದ ಅಧ್ಯಕ್ಷೆ ಶೋಭಾ ಎಸ್ ಹೆಗ್ಡೆ, ಮೂಡುಬಿದಿರೆ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಬಿಂಧ್ಯಾ ಶರತ್ ಶೆಟ್ಟಿ, ಆಳ್ವ ಫಾರ್ಮಸಿಯ ಆಡಳಿತಾಧಿಕಾರಿ ಡಾ ಗ್ರೀಷ್ಮಾ ಆಳ್ವ, ಸಕ್ಷಮ ವೇದಿಕೆ ಅಧ್ಯಕ್ಷೆ ಡಾ ಮೂಕಾಂಬಿಕಾ ಜಿ.ಎಸ್, ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಇದ್ದರು.
ಆಳ್ವಾಸ್ ಸ್ನಾತಕೋತ್ತರ ಆಹಾರ ವಿಜ್ಞಾನ ಹಾಗೂ ಪೋಷಣೆ ವಿಭಾಗದ ಮುಖ್ಯಸ್ಥೆ ಡಾ ಅರ್ಚನಾ ಪ್ರಭಾತ್ ನಿರೂಪಿಸಿದರು. ಆಳ್ವಾಸ್ ವೆಲ್ನೆಸ್ಟ್ರೇನಿಂಗ್ ಸೆಂಟರ್ನ ನಿರ್ದೇಶಕಿ ಡಾ ದೀಪಾ ಕೊಠಾರಿ ಅತಿಥಿಯನ್ನು ಪರಿಚಯಿಸಿದರು.