ಕಾರವಾರ: ಕೊಲೆ ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್ ಒಳಿತಿಗಾಗಿ ಅವರ ಸಹೋದರಿ ದಿವ್ಯಾ ಅವರ ಪತಿ(ಭಾವ) ಮಂಜುನಾಥ ತಾಲೂಕಿನ ಕೈಗಾ ವಸತಿ ಸಂಕೀರ್ಣದಲ್ಲಿ ಇರುವ ರಾಮಲಿಂಗೇಶ್ವರ ದೇವರಿಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆ ಆಗಬಾರದಿತ್ತು. ದರ್ಶನ ಅವರ ಪಾಡಿಗೆ ಅವರು ಇರುತ್ತಾರೆ. ಅವರನ್ನು ಪ್ರಚೋದಿಸುವ ಕೆಲಸ ಮಾಡಿ ಈ ರೀತಿ ಪರಿಸ್ಥಿತಿಗೆ ತಂದಿಡಲಾಗಿದೆ.
ದರ್ಶನ ಖುಷಿಯಾಗಿ, ಜಾಲಿಯಾಗಿ ಇರುವವರು. ನ್ಯಾಯಾಲಯ ಎಲ್ಲ ತೀರ್ಮಾನ ಮಾಡುತ್ತದೆ. ದರ್ಶನ ಒಳ್ಳೆತನವೇ ಅವರನ್ನು ಕಾಪಾಡಬೇಕು. ಜನರೆಲ್ಲಾ ಶಾಂತರಾಗಿರಬೇಕು. ಅಭಿಮಾನಿಗಳು ಸಂತೋಷವಾಗಿರಬೇಕು. ಡಿ ಬಾಸ್ ಮತ್ತೆ ಬರುತ್ತಾರೆ. ಅಲ್ಲಿಯವರೆಗೆ ಶಾಂತಿ ಕಾಪಾಡಿಕೊಂಡು ಖುಷಿಯಾಗಿ ಇರಬೇಕು. ಅವರು ಹೊರಗೆ ಬರುತ್ತಾರೆ. ಮತ್ತೆ ಸಿನಿಮಾ ಮಾಡಿಕೊಂಡು ಇರಬೇಕು ಎಂದರು. ಕೈಗಾ ಎನ್ಪಿಸಿಎಲ್ನಲ್ಲಿ ಮಂಜುನಾಥ ಉದ್ಯೋಗಿಯಾಗಿದ್ದಾರೆ.