ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) 2026ರ ಅಂಗವಾಗಿ ಮನೆ-ಮನೆ ಭೇಟಿ ಕಾರ್ಯಕ್ರಮವು ಜೂನ್ 30 ರಿಂದ ಆರಂಭಗೊಂಡಿದ್ದು, ಈ ಅಭಿಯಾನವು ಜುಲೈ 29ರವರೆಗೆ ನಡೆಯಲಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಮನೆ-ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಜಿಲ್ಲೆಯ ಒಟ್ಟು 1,661 ಮತಗಟ್ಟೆ ಭಾಗಗಳಲ್ಲಿ 14,40,534 ಮತದಾರರಿದ್ದು, ಈ ಪೈಕಿ ಜುಲೈ 1ರಂದು ಒಟ್ಟು 1,64,428 ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಹಾಗೂ 14,809 ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ.ವಿಧಾನಸಭಾ ಕ್ಷೇತ್ರವಾರು ಪ್ರಗತಿ ವಿವರ ಇಂತಿದೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ 30,413 ನಮೂನೆಗಳನ್ನು ವಿತರಿಸಿ 4,039 ಗಣಕೀಕರಣಗೊಳಿಸಲಾಗಿದ್ದು, 6 ಮರಣ, 3 ವಲಸೆ ಹಾಗೂ 1 ಡಬಲ್ ಎಂಟ್ರಿ ಪ್ರಕರಣಗಳು ದಾಖಲಾಗಿವೆ. ಚಳ್ಳಕೆರೆ ಕ್ಷೇತ್ರದಲ್ಲಿ 20,374 ನಮೂನೆಗಳನ್ನು ವಿತರಿಸಿ 1,459 ಗಣಕೀಕರಣಗೊಳಿಸಲಾಗಿದ್ದು, 4 ಮರಣ, 7 ವಲಸೆ ಹಾಗೂ 5 ಡಬಲ್ ಎಂಟ್ರಿ ಪತ್ತೆಯಾಗಿವೆ.
ಜಿಲ್ಲೆಯಾದ್ಯಂತ ಈವರೆಗೆ ಒಟ್ಟು 58 ಮರಣ, 39 ಶಾಶ್ವತ ವಲಸೆ, 10 ಡಬಲ್ ಎಂಟ್ರಿ ಹಾಗೂ 2 ಗೈರುಹಾಜರಿ ಪ್ರಕರಣಗಳನ್ನು ಗುರುತಿಸಲಾಗಿದ್ದು, ಸಾರ್ವಜನಿಕರು ತಮ್ಮ ಮನೆಗೆ ಬರುವ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ನಿಖರ ಮಾಹಿತಿ ನೀಡಿ ಅರ್ಹ ಮತದಾರರ ಪಟ್ಟಿ ಸಿದ್ಧಪಡಿಸಲು ಸಹಕರಿಸಬೇಕು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಕೋರಿದ್ದಾರೆ.