ಕನ್ನಡಪ್ರಭ ವಾರ್ತೆ ರಾಮನಾಥಪುರ
ಗ್ರಾಮೀಣ ಹಿನ್ನೆಲೆಯ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳಿಗೂ ಸೂಕ್ತ ಮಾರ್ಗದರ್ಶನ, ನಿರಂತರ ಪ್ರೋತ್ಸಾಹ ಮತ್ತು ಗುಣಮಟ್ಟದ ಪ್ರಾರಂಭಿಕ ಶಿಕ್ಷಣ ದೊರೆತರೆ ಅವರು ಯಾವ ಮಟ್ಟಕ್ಕೂ ತಲುಪಬಹುದು ಎಂಬುದಕ್ಕೆ ಈ ಸಾಧನೆ ಜೀವಂತ ಸಾಕ್ಷಿಯಾಗಿದೆ.
ಮಕ್ಕಳ ಮನೆ (ಎಲ್ಕೆಜಿ, ಯುಕೆಜಿ) ಅರಕಲಗೂಡು ಶಾಲೆ ಕೇವಲ ಅಕ್ಷರಜ್ಞಾನಕ್ಕೆ ಮಾತ್ರ ಸೀಮಿತವಾಗದೇ, ಮಕ್ಕಳಲ್ಲಿ ಆತ್ಮವಿಶ್ವಾಸ, ಅಭಿವ್ಯಕ್ತಿ ಶಕ್ತಿ, ವೇದಿಕೆ ಭಯವಿಲ್ಲದ ಧೈರ್ಯ ಹಾಗೂ ರಾಷ್ಟ್ರಭಕ್ತಿ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂಬುದು ಈ ಸಾಧನೆಯ ಮೂಲಕ ಸ್ಪಷ್ಟವಾಗಿದೆ.ಅರಕಲಗೂಡು ತಾಲೂಕಿನಲ್ಲಿಯೇ 2024ರಲ್ಲಿ ಪ್ರಾರಂಭವಾದ ಮಕ್ಕಳ ಮನೆ ಪೂರ್ವ ಪ್ರಾಥಮಿಕ ಶಿಕ್ಷಣ ಯೋಜನೆ (ಎಲ್ಕೆಜಿ, ಯುಕೆಜಿ) ಇಂದು ತಾಲೂಕಿನಾದ್ಯಂತ 18 ಶಾಲೆಗಳ ಮೂಲಕ ಸುಮಾರು 450ಕ್ಕೂ ಹೆಚ್ಚು ಮಕ್ಕಳಿಗೆ ಕಾನ್ವೆಂಟ್ ಮಟ್ಟದ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ರೈತರ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿಯೇ ಕಾನ್ವೆಂಟ್ ಶಿಕ್ಷಣದ ಸೌಲಭ್ಯ ದೊರೆಯುತ್ತಿರುವುದು ಪಾಲಕರು ಹಾಗೂ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
--
*ಹೇಳಿಕೆನನ್ನ ಮಾರ್ಗದರ್ಶನದಲ್ಲಿ ಅರಕಲಗೂಡು ತಾಲೂಕಿನ 18 ಗ್ರಾಪಂ ವ್ಯಾಪ್ತಿಯಲ್ಲಿನ ಸುಮಾರು 450 ವಿದ್ಯಾರ್ಥಿಗಳಿಗೆ, ನನ್ನ ಪತ್ನಿ ತಾರಾ ಎ. ಮಂಜು ಅವರ ನೇತೃತ್ವದಲ್ಲಿ ಹಿರಿಯ ವಿದ್ಯಾರ್ಥಿಗಳ ತಂಡ ಸಮರ್ಪಕ ಮುತುವರ್ಜಿ ವಹಿಸಿಕೊಂಡು, ಕಾನ್ವೆಂಟ್ ಶಾಲೆಗಳ ಮಟ್ಟಕ್ಕೆ ಸಮಾನವಾದ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಮಕ್ಕಳ ಮನೆ ಅರಕಲಗೂಡಿನಲ್ಲಿ ಶಿಕ್ಷಣ ಕ್ರಾಂತಿಯನ್ನು ಯಶಸ್ವಿಯಾಗಿ ಮೊಳಗಿಸುತ್ತಿರುವುದು ತಾಲೂಕಿನ ಶಾಸಕರಾಗಿ ಹಾಗೂ ವೈಯಕ್ತಿಕವಾಗಿ ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
— ಎ. ಮಂಜು, ಶಾಸಕರು, ಅರಕಲಗೂಡು ವಿಧಾನಸಭಾ ಕ್ಷೇತ್ರ