ಭೂ ಸುರಕ್ಷತೆಗೆ ದಾಖಲೀಕರಣ ತ್ವರಿತಗೊಳಿಸಿ

KannadaprabhaNewsNetwork | Published : Apr 13, 2025 2:05 AM

ಸಾರಾಂಶ

ರೈತರು ತಮ್ಮ ಜಮೀನಿನ ಮಾಹಿತಿಗಾಗಿ ಪದೇ ಪದೇ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದಾಖಲೀಕರಣ ಅಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರತಿದಿನ ಒಬ್ಬ ಆಪರೇಟರ್ ಭೂ ದಾಖಲೀಕರಣ ಕಾರ್ಯ ತ್ವರಿತಗೊಳಿಸುವ ಮೂಲಕ ದಾಖಲೀಕರಣ ಕಾರ್ಯಕ್ಕೆ ವೇಗ ನೀಡಿ, ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕಂದಾಯ ಆಯುಕ್ತ ಪಿ.ಸುನೀಲ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿವಿಧ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಭೂ ಸುರಕ್ಷತೆ ದೃಷ್ಟಿಕೋನದಿಂದ ಜಮೀನು ದಾಖಲೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ರೈತರು ತಮ್ಮ ಜಮೀನಿನ ಮಾಹಿತಿಗಾಗಿ ಪದೇ ಪದೇ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದಾಖಲೀಕರಣ ಅಗತ್ಯವಾಗಿದೆ. ಜತೆಗೆ ಜಮೀನುಗಳ ಮೇಲೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾಲೀಕರಿಗೆ ಈ ದಾಖಲೀಕರಣ ನೆರವಾಗುತ್ತದೆ ಎಂದರು.

ಜಮೀನಿನ ಕುರಿತು ತಿದ್ದುಪಡಿಗೆ ಜಿಲ್ಲಾಧಿಕಾರಿಗಳಿಗೆ ಅವಕಾಶವಿದ್ದು, ಅಧಿಕಾರಿಗಳು ಜಮೀನಿನ ಕುರಿತು ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ನಡೆಸಬೇಕು. ಆಧಾರ ಜೋಡಣೆಗೆ ಒತ್ತು ನೀಡಬೇಕು. ಸಾರ್ವಜನಿಕರಿಗೆ ಭೂದಾಖಲೆಗಳು ನಿರ್ಣಾಯಕ ದಾಖಲೆಗಳಾಗಿರುತ್ತವೆ. ಅಂತಹ ದಾಖಲೆಗಳನ್ನು ತ್ವರಿತ ಹಾಗೂ ಸುಲಭವಾಗಿ ಒದಗಿಸುವುದರಿಂದ ಸಾಕಷ್ಟು ಅನಾನೂಕೂಲತೆ ನಿವಾರಿಸಬಹುದಾಗಿದೆ. ಸೀಮಿತ ಮಾನವ ಸಂಪನ್ಮೂಲ ಬಳಕೆ, ದಾಖಲೆ ಹುಡುಕುವ ಜಟಿಲತೆ-ಹಾನಿಯನ್ನು ಡಿಜೀಟಲಿಕರಣದಿಂದ ತಪ್ಪಿಸಿ, ಭೂದಾಖಲೆಗಳನ್ನು ಸಂರಕ್ಷಿಸಿ ನಿರ್ವಹಿಸಬಹುದಾಗಿದೆ ಎಂದರು.

ಈ ಭೂ ಸುರಕ್ಷಾ ಯೋಜನೆಯಿಂದ ಮಹತ್ವದ ಭೂ ದಾಖಲೆಗಳ ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸಬಹುದಾಗಿದೆ. ಭೌತಿಕ ಕಡತಗಳ ಬಳಕೆ ತಗ್ಗಿ, ಕಡತಗಳು ಶಿಥಿಲಾವಸ್ಥೆಗೊಳ್ಳುವುದು ತಪ್ಪಿಸಬಹುದಾಗಿದೆ. ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಿ, ಸಮಯದ ವ್ಯರ್ಥವೂ ಆಗುವುದಿಲ್ಲ. ಆದ್ದರಿಂದ ಎಲ್ಲ ಡಿಜಿಟಲೀಕರಣ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ನಮೂನೆ-೧ರಿಂದ ೫ರಡಿ ಅರ್ಜಿಗಳ ಇಂಡೀಕರಣ ಮತ್ತು ವಿಲೇವಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಪಹಣಿ ಪತ್ರಿಕೆಯೊಂದಿಗೆ ಆಧಾರ ಜೋಡಣೆ ಜಿಲ್ಲೆಯಲ್ಲಿ ಶೇ.೮೪.೪೭ರಷ್ಟು ಪ್ರಗತಿ ಸಾಧಿಸಿದ್ದು, ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಪಹಣಿ ಪತ್ರಿಕೆಯೊಂದಿಗೆ ಆಧಾರ ಜೋಡಣೆ ಮಾಡಬೇಕು. ಲ್ಯಾಂಡ್ ಬೀಟ್ ಅರ್ಜಿಗಳ ಇಂಡೀಕರಣ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶೇ.೯೮ರಷ್ಟು ಪ್ರಗತಿಯಾಗಿದೆ ಎಂದರು. ಕಂದಾಯ ನ್ಯಾಯಾಲಯಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ತಹಸೀಲ್ದಾರ್‌ ಹಂತದಲ್ಲಿ ೩ ತಿಂಗಳ ಹಾಗೂ ಉಪ ವಿಭಾಗಾಧಿಕಾರಿಗಳ ಹಂತದಲ್ಲಿ ೬ ತಿಂಗಳಕ್ಕೂ ಮೇಲ್ಪಟ್ಟ ಯಾವುದೇ ಬಾಕಿ ಉಳಿಸಿಕೊಳ್ಳದೇ ವಿಲೇವಾರಿ ಕ್ರಮ ವಹಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಹೇಮಲತಾ ವಸ್ತ್ರದ, ಜಿಲ್ಲೆಯ ವಿವಿಧ ತಹಸೀಲ್ದಾರಗಳು, ತಾಪಂ ಇಓಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share this article