ಕೆ.ಆರ್.ಪೇಟೆ: ವಿದ್ಯಾರ್ಥಿಗಳ ಉತ್ಸಾಹವನ್ನು ಪ್ರೇರೇಪಿಸಲು ಕ್ರೀಡಾ ಚಟುವಟಿಕೆಗಳು ನೆರವಾಗುತ್ತವೆ. ಸದಾ ದೇಹ ಹಾಗೂ ಮನಸ್ಸು ಚಟುವಟಿಕೆಯಿಂದ ಕೂಡಿರಲು ಚದುರಂಗ ಬಹಳ ಉಪಯುಕ್ತ ಕ್ರೀಡೆ ಎಂದು ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವಿ.ಜಗದೀಶ್ ಅಭಿಪ್ರಾಯಪಟ್ಟರು.
ಕಾಲೇಜು ಕ್ರೀಡಾ ವಿಭಾಗದ ಸಂಚಾಲಕರು ಮಂಡ್ಯ ವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಹಯೋಗದಲ್ಲಿ ಚದುರಂದ ಸ್ಪರ್ಧೆ ಆಯೋಜಿಸಿದ್ದು, 70ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿ ಕ್ರೀಡಾ ಸ್ಫೂರ್ತಿ ಮೆರೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳೆಯರ ವಿಭಾಗದಲ್ಲಿ ಪ್ರಥಮ ಸರ್ಕಾರಿ ಮಹಿಳಾ ಕಾಲೇಜು ಮಂಡ್ಯ, ದ್ವಿತೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಲಗೂರು ಹಾಗೂ ತೃತೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ.ಆರ್.ಪೇಟೆ ಪಡೆದುಕೊಂಡರೆ, ಪುರುಷರ ವಿಭಾಗದಲ್ಲಿ ಪ್ರಥಮ ಶ್ರೀಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ನಾಗಮಂಗಲ, ದ್ವಿತೀಯ ಬಿಜಿಎಸ್ ಬಿಪಿಎಡ್ ಕಾಲೇಜು ಆದಿಚುಂಚನಗಿರಿ ಹಾಗೂ ತೃತೀಯ ಸ್ಥಾನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಾಂಡವಪುರ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಮಂಡ್ಯ ವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗಾಧಿಕಾರಿ ಡಾ.ಶ್ರೀನಿವಾಸ್, ಕಾಲೇಜಿನ ಕ್ರೀಡಾ ಸಮಿತಿ ಸಂಚಾಲಕರಾದ ಡಿ.ಎನ್.ಕುಮಾರಸ್ವಾಮಿ, ಐಕ್ಯೂಎಸಿ ಸಂಚಾಲಕ ಬಿ.ಎಂ.ಉಮೇಶ್, ಪ್ರಾಧ್ಯಾಪಕರಾದ ಡಾ.ಸಿ.ರಮೇಶ್, ಡಾ.ಜಯಕೀರ್ತಿ, ಡಾ.ಜಿ.ಸವಿತಾ, ಡಾ.ಎಂ.ಎನ್.ರಾಜೇಶ್ವರಿ, ಡಾ.ಡಿ.ಮಹೇಶ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಅತಿಥಿ ಉಪನ್ಯಾಸಕ ಕೆ.ಎನ್.ಮಲ್ಲೇಶ್, ಕಚೇರಿ ವ್ಯವಸ್ಥಾಪಕಿ ಜೆ.ಭುವನೇಶ್ವರಿ ಭಾಗವಹಿಸಿದ್ದರು.